ನಲಪಾಡ್ನ ಐವರು ಸಹಚರರಿಗೆ ಸೆಷನ್ಸ್ ಕೋರ್ಟ್ನಿಂದ ಜಾಮೀನು
ಬೆಂಗಳೂರು, ಜೂನ್ 23: ವಿದ್ವತ್ ಮೇಲೆ ಮೊಹಮ್ಮದ್ ನಲಪಾಡ್ ಹಾಗೂ ಸ್ನೇಹಿತರಿಂದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನುಳಿದ ಐವರು ಆರೋಪಿಗಳಿಗೆ ಜಾಮೀನು ದೊರೆತಿದೆ.
ಮೊಹಮ್ಮದ್ ನಾಸಿರ್, ಬಾಲಕೃಷ್ಣ, ಮಂಜುನಾಥ್, ಮೊಹಮ್ಮದ್ ಅಶ್ರಫ್, ಅರುಣ್ ಬಾಬುಗೆ ಜಾಮೀನು ದೊರೆತಿದೆ. ಬೆಂಗಳೂರಿನ 63ನೇ ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
116 ದಿನಗಳ ನಂತರ ಜೈಲಿನಿಂದ ಹೊರಬಂದ ಮೊಹಮ್ಮದ್ ನಲಪಾಡ್
ಎರೆಡು ವಾರದ ಹಿಂದೆ ಪ್ರಮುಖ ಆರೋಪಿ ಮೊಹಮ್ಮದ್ ನಲಪಾಡ್, ಅಭಿಷೇಕ್ ಗೆ ಜಾಮೀನು ದೊರೆತಿತ್ತು. ಶಾಂತಿನಗರ ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರ ಪುತ್ರ ಮೊಹಮ್ಮದ್ ನಲಪಾಡ್ ಅವರ 116 ದಿನಗಳ ಜೈಲು ವಾಸದ ಬಳಿಕ ಜೂನ್ 14ರಂದು ಜಾಮೀನು ದೊರೆತಿತ್ತು. 2 ಲಕ್ಷ ರೂ ಬಾಂಡ್ ನ ಎರಡು ಶ್ಯೂರಿಟಿ, ಪಾಸ್ ಪೋರ್ಟ್ ಅನ್ನು ಕೋರ್ಟಿಗೆ ಒಪ್ಪಿಸುವಂತೆ ಷರತ್ತು ವಿಧಿಸಿ ಜಾಮೀನು ನೀಡಲಾಗಿದೆ. ಪ್ರಕರಣದ ಮತ್ತೊಬ್ಬ ಆರೋಪಿ ಶ್ರೀಕೃಷ್ಣ ಇನ್ನೂ ನಾಪತ್ತೆಯಾಗಿದ್ದಾನೆ.
ವಿದ್ವತ್ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದ ಮೇಲೆ ಫೆಬ್ರವರಿಯಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಶಾಂತಿನಗರ ಶಾಸಕ ಹ್ಯಾರಿಸ್ ಅವರ ಪುತ್ರ ನಲಪಾಡ್ ಸಲ್ಲಿಸಿದ್ದ ಎಲ್ಲಾ ಜಾಮೀನು ಅರ್ಜಿಗಳನ್ನೂ ಸೆಷೆನ್ಸ್ ಕೋರ್ಟು ವಜಾಗೊಳಿಸಿತ್ತು.