ಕೆಪಿಎನ್ ಟ್ರಾವೆಲ್ಸ್ ಪ್ರಕರಣ ತನಿಖೆಗೆ ಪರಮೇಶ್ವರ ಆದೇಶ
ಬೆಂಗಳೂರು, ಸೆಪ್ಟೆಂಬರ್ 14: ಕೆಪಿಎನ್ ಟ್ರಾವೆಲ್ಸ್ ನ ನಲವತ್ತೈದು ಬಸ್ ಗಳು ಸುಟ್ಟು ಭಸ್ಮವಾದ ಪ್ರಕರಣವನ್ನು ಪ್ರತ್ಯೇಕವಾಗಿ ತನಿಖೆ ಮಾಡಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದ್ದಾರೆ. ಬೆಂಗಳೂರಿನ ಕೆಲ ಪ್ರದೇಶದಲ್ಲಿ ಹೇರಿದ್ದ ಕರ್ಫ್ಯೂ ಹಿಂಪಡೆದ ನಂತರ ಪರಿಸ್ಥಿತಿ ಹೇಗಿದೆ ಎಂದು ಅವಲೋಕಿಸಲು ಅವರು ರೌಂಡಪ್ ಗೆ ತೆರಳಿದ್ದ ಸಂದರ್ಭದಲ್ಲಿ ತಿಳಿಸಿದ್ದಾರೆ.
ಕಾವೇರಿ ಹಿಂಸಾಚಾರದ ವೇಳೆ ಲಾರಿ, ಕಾರು, ಬಸ್ ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗಿತ್ತು. ಆ ಹಿನ್ನೆಲೆಯಲ್ಲಿ ತನಿಖೆಗೆ ಅದೇಶಿಸಿರುವ ಗೃಹ ಸಚಿವರು, ಕೆಪಿಎನ್ ಟ್ರಾವೆಲ್ಸ್ ಬಸ್ ಗಳು ಬೆಂಕಿಗೆ ಆಹುತಿಯಾದ ಪ್ರಕರಣವನ್ನೇ ಪ್ರತ್ಯೇಕವಾದ ತನಿಖೆ ನಡೆಸಲು ಆದೇಶಿಸಿದ್ದೇನೆ ಎಂದು ಹೇಳಿದ್ದಾರೆ.[ಕೆಪಿಎನ್ ಟ್ರಾವೆಲ್ಸ್ ಬಸ್ ಗೆ ಬೆಂಕಿ: ಓದುಗರು ಏನಂತಾರೆ?]
ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಸೋಮವಾರ ಭುಗಿಲೆದ್ದ ಆಕ್ರೋಶದ ಹಿನ್ನೆಲೆಯಲ್ಲಿ ನಾಯಂಡಹಳ್ಳಿಯ ದ್ವಾರಕನಾಥ ನಗರದ ಬಳಿಯಿರುವ ಡಿಪೋದಲ್ಲಿ ಕೆಪಿಎನ್ ಟ್ರಾವೆಲ್ಸ್ ನ 45 ಬಸ್ ಗಳು ಬೆಂಕಿಗೆ ಆಹುತಿಯಾದವು. ಆ ನಂತರದ ಬೆಳವಣಿಗೆಯಲ್ಲಿ ಘಟನೆ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿದ್ದವು.[ನನ್ನ ಬಸ್ ಸುಟ್ಟಿದ್ದರಿಂದ ಕಾವೇರಿ ಸಮಸ್ಯೆ ಬಗೆಹರಿಯುತ್ತಾ?: ಕೆ.ಪಿ.ನಟರಾಜನ್]
ಇನ್ಶೂರೆನ್ಸ್ ಕ್ಲೇಮ್ ಮಾಡುವ ಉದ್ದೇಶದಿಂದಲೇ ಹೀಗೆ ಮಾಡಲಾಗಿದೆ. ಅಲ್ಲಿದ್ದವು ಹಳೇ ಬಸ್ ಗಳು. ಮುಖ್ಯರಸ್ತೆ ಬದಿಯಲ್ಲಿರುವ ಡಿಪೋದಲ್ಲಿ ಏಕಕಾಲಕ್ಕೆ ಅಷ್ಟೊಂದು ಬಸ್ ಗಳಿಗೆ ಬೆಂಕಿ ಹಚ್ಚಲು ಸಾಧ್ಯವಿಲ್ಲ..ಹೀಗೆ ನಾನಾ ಅನುಮಾನ ಹಾಗೂ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಆ ಕಾರಣಕ್ಕೆ ಪ್ರತ್ಯೇಕ ತನಿಖೆಗೆ ಗೃಹಸಚಿವ ಜಿ.ಪರಮೇಶ್ವರ ಆದೇಶಿಸಿದ್ದಾರೆ.