ಲೋಕಾಯುಕ್ತ ಸೂಚನೆ: ಅಧಿಕಾರಿಗಳಿಂದ ವೃಷಭಾವತಿ ನದಿ ಪರಿಶೀಲನೆ
ಬೆಂಗಳೂರು, ಆಗಸ್ಟ್ 8: ಲೋಕಾಯುಕ್ತರ ನಿರ್ದೇಶನದಂತೆ ಅಧಿಕಾರಿಗಳ ತಂಡವು ಬುಧವಾರ ಯುನೈಟೆಡ್ ಬೆಂಗಳೂರು ಸಂಸ್ಥೆಯ ಸದಸ್ಯರ ಜತೆಗೆ ವೃಷಭಾವತಿ ನದಿಯ ಪರಿಶೀಲನೆ ನಡೆಸಿತು.
ನಗರದಲ್ಲಿ ಕೆರೆಗಳು ಒತ್ತುವರಿಯಾಗಿರುವ ಬಗ್ಗೆ ಯುನೈಟೆಡ್ ಬೆಂಗಳೂರು ಮತ್ತು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಲೋಕಾಯುಕ್ತರಿಗೆ ದೂರು ನೀಡಿದ್ದರು.
ಬೆಂಗಳೂರು ಉಳಿಸಲು ಪರಿಸರ ನೀತಿ ಜಾರಿ: ರಾಜೀವ್ ಚಂದ್ರಶೇಖರ್ ಒತ್ತಾಯ
ಈ ಕುರಿತು ಕಳೆದ ಗುರುವಾರ ವಿಚಾರಣೆ ನಡೆಸಿದ್ದ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ, ಅಧಿಕಾರಿಗಳ ವಿಳಂಬ ನೀತಿಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಕೆರೆಗಳ ಪುನರುಜ್ಜೀವನ ಕುರಿತಾಗಿ ಕೈಗೊಂಡ ಕಾರ್ಯಗಳ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದ ಅವರು, ಕೆರೆಗಳ ಒತ್ತುವರಿಯನ್ನು ತೆರವುಗೊಳಿಸುವಂತೆ ನಿರ್ದೇಶಿಸಿದ್ದರು.
ಈ ಸಂಬಂಧ ಅಧಿಕಾರಗಳ ತಂಡ ಬುಧವಾರ ಪರಿಶೀಲನೆ ನಡೆಸಿತು. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಅನಿಲ್ ಕುಮಾರ್, ಕಲುಷಿತ ವೃಷಭಾವತಿ ನದಿ ನೀರಿನ ಮಾದರಿಯನ್ನು ಸಂಗ್ರಹಿಸಿದರು. ಅದನ್ನು ಪರೀಕ್ಷೆಗೆ ಒಳಪಡಿಸಿದ ಬಳಿಕ ಅವರು ಲೋಕಾಯುಕ್ತಕ್ಕೆ ವರದಿ ನೀಡಲಿದ್ದಾರೆ.
ನಗರದಲ್ಲಿ ಅಕ್ರಮ ಮರಳು ದಂಧೆ ಅವ್ಯಾಹತವಾಗಿ ನಡೆದಿದೆ. ಈ ಕುರಿತು ಫೆಬ್ರುವರಿಯಲ್ಲಿ ಲೋಕಾಯುಕ್ತರು ಪರಿಶೀಲನೆ ನಡೆಸಿದ್ದರೂ ಪ್ರಯೋಜನವಾಗಿರಲಿಲ್ಲ ಎಂದು ಯುನೈಟೆಡ್ ಬೆಂಗಳೂರು ಆರೋಪಿಸಿತ್ತು.
ಬುಧವಾರ ಈ ಬಗ್ಗೆ ಪರಿಶೀಲನೆ ನಡೆಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
#ಮಾನ್ಯ ಲೋಕಾಯುಕ್ತರ ಆದೇಶದಂತೆ ವೃಷಭಾವತಿ ನದಿಯ ಪರಿಶೀಲನೆ.@unitedbengaluru ತಂಡದ ಜೊತೆ ಬಿಬಿಎಂಪಿ CE(SWD) ಬೆಟ್ಟೇಗೌಡರು, ಕ. ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಅನಿಲ್ ಕುಮಾರ್, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ಕೊಟ್ರೇಶ್, ಗಣಿ & ಭೂವಿಜ್ಞಾನ ಇಲಾಖೆಯ ದಿಲೀಪ್ ಕುಮಾರ್ ಹಾಗೂ ಸ್ಥಳೀಯರು ಭಾಗಿ. pic.twitter.com/XeOH6qjyVS
— United Bengaluru (@unitedbengaluru) 8 August 2018
ಬಿಬಿಎಂಪಿ ಮುಖ್ಯ ಎಂಜಿನಿಯರ್ ಬೆಟ್ಟೇಗೌಡ ಅವರು ವಿವಿಧ ಇಲಾಖೆಗಳ ಅಧಿಕಾರಿಗಳ ಜತೆಗೆ ಶುಕ್ರವಾರ ಸಭೆ ನಡೆಸಲಿದ್ದು, ಯುನೈಟೆಡ್ ಬೆಂಗಳೂರು ತಂಡ ಸಹ ಅದರಲ್ಲಿ ಪಾಲ್ಗೊಳ್ಳಲಿದೆ.
ಬಿಬಿಎಂಪಿ ಮುಖ್ಯ ಎಂಜಿನಿಯರ್ ಬೆಟ್ಟೇಗೌಡ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಅನಿಲ್ ಕುಮಾರ್, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ಕೊಟ್ರೇಶ್, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ದಿಲೀಪ್ ಕುಮಾರ್ ಹಾಗೂ ಸ್ಥಳೀಯರು ಈ ಸಂದರ್ಭದಲ್ಲಿ ಹಾಜರಿದ್ದರು.