ಕೊನೆಗೂ ಬಿಜೆಪಿಗೆ ಮತ ಹಾಕಿ ಎಂದ ಎಸ್ಎಂ.ಕೃಷ್ಣ, ಹೆಬ್ಬಾಳದಲ್ಲಿ ಪ್ರಚಾರ
ಬೆಂಗಳೂರು, ಮೇ 06: ತಮ್ಮ ರಾಜಕೀಯ ಸಂಧ್ಯಾಕಾಲದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಅಲ್ಲೂ ಮುನಿಸಿನಿಂದಲೇ ಇದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಇಂದು ಬಹಿರಂಗವಾಗಿ ಈ ಬಾರಿಯ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ.
ಎಸ್.ಎಂ.ಕೃಷ್ಣ ಅವರು ಹೆಬ್ಬಾಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಅವರ ಪರವಾಗಿ ಮತ ಯಾಚಿಸಿದ ಎಸ್.ಎಂ.ಕೃಷ್ಣ ಅವರು ಭರ್ಜರಿ ರೋಡ್ ಶೋ ಕೂಡಾ ಹೆಬ್ಬಾಳದಲ್ಲಿ ನಡೆಸಿದರು.
ಬಿಜೆಪಿಗೆ ಮತ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದ ಎಸ್.ಎಂ.ಕೃಷ್ಣ ಅವರು ದೇಶದ ಅರ್ವತೋಮುಖ ಅಭಿವೃದ್ಧಿ ಮೋದಿ ಅವರಿಂದ ಮಾತ್ರ ಸಾಧ್ಯ ಎಂದರು.
ಚುನಾವಣೆ ಹೊತ್ತಲ್ಲಿ 'ಕೃಷ್ಣ' ಅಜ್ಞಾತವಾಸ! ಬಿಜೆಪಿಯಲ್ಲೂ ಕಡೆಗಣನೆ?
ಎಸ್.ಎಂ.ಕೃಷ್ಣ ಅವರು ಬಿಜೆಪಿ ಸೇರ್ಪಡೆ ಆದ ನಂತರ ಬಿಜೆಪಿಯ ಯಾವ ಸಭೆ, ಸಮಾರಂಭಗಳಲ್ಲಿಯೂ ಕಾಣಿಸಿಕೊಂಡಿರಲಿಲ್ಲ, ಆದರೆ ಮೊನ್ನೆ ಕೆಂಗೇರಿಯಲ್ಲಿ ನಡೆದ ಮೋದಿ ಅವರ ಸಮಾವೇಶದಲ್ಲಿ ಕಾಣಿಸಿಕೊಂಡರು. ಎಸ್.ಎಂ.ಕೃಷ್ಣ ಅವರನ್ನು ಕಾಂಗ್ರೆಸ್ನಂತೆ ಬಿಜೆಪಿಯಲ್ಲೂ ಮೂಲೆಗುಂಪು ಮಾಡಲಾಗಿದೆ ಹಾಗಾಗಿ ಅವರು ಬಿಜೆಪಿ ಜೊತೆಯಿಂದಲೂ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗಿತ್ತು.
ಕೃಷ್ಣ ಜೆಡಿಎಸ್ಗೆ ಬಂದರೆ ಸ್ವಾಗತ: ಎಚ್.ಡಿ. ಕುಮಾರಸ್ವಾಮಿ
ಪ್ರಚಾರ ಕಾರ್ಯ ಪ್ರಾರಂಭವಾಗಿ ಸಾಕಷ್ಟು ದಿನಗಳಾಗಿದ್ದರೂ ಸಹಿತ ಎಸ್.ಎಂ.ಕೃಷ್ಣ ಅವರು ಪ್ರಚಾರದಲ್ಲಿ ಭಾಗವಹಿಸಿರಲಿಲ್ಲ, ಈಗ ಮೋದಿ ಅವರ ಭೇಟಿ ನಂತರ ಎಸ್.ಎಂ.ಕೃಷ್ಣ ಪ್ರಚಾರಕ್ಕಿಳಿದಿರುವುದು ಆಶ್ಚರ್ಯ ಮೂಡಿಸಿದೆ. ಅದೂ ಅಲ್ಲದೆ ತಮ್ಮ ಸ್ವಕ್ಷೇತ್ರ ಮಂಡ್ಯದಲ್ಲಿ ಪ್ರಚಾರ ನಡೆಸದೆ ಹೆಬ್ಬಾಳಕ್ಕೆ ಬಂದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.