ಸೊಳ್ಳೆ ಒದ್ದೋಡಿಸುವ ಗಿಡಗಳ ನೆಟ್ಟ ಹಿರಿಯ ನಾಗರಿಕರು
ಬೆಂಗಳೂರು, ಸೆಪ್ಟೆಂಬರ್ 05 : ಮಳೆಗಾಲದ ಮಧ್ಯಾಹ್ನ ಬೇಸಿಗೆಯನ್ನೂ ನಾಚಿಸುವಂಥ ಬಿರುಬಿಸಿಲು. ಇಷ್ಟು ದಿನ ಮಾಯವಾಗಿದ್ದ ಮಳೆರಾಯ ಶುಕ್ರವಾರ ಪ್ರತ್ಯಕ್ಷ. ಈ ಬಿಸಿಲು ಮಳೆಯ ಆಟದ ನಡುವೆ ಡೆಂಗ್ಯೂ ಜ್ವರ ಬೆಂಗಳೂರಿನ ನಾಗರಿಕರನ್ನು ಸಾಕಷ್ಟು ಆಟವಾಡಿಸುತ್ತಿದೆ. ಡೆಂಗ್ಯೂ ಜ್ವರದಿಂದ ಆಸ್ಪತ್ರೆ ಸೇರುತ್ತಿರುವ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ.
ಕಸದ ಸಮಸ್ಯೆಯಿಂದಾಗಿ ಬೆಂಗಳೂರಿನಲ್ಲಿ ಎಲ್ಲ ಬಡಾವಣೆಗಳಲ್ಲಿ ಸೊಳ್ಳೆಗಳ ಉಪಟಳ ಮಿತಿಮೀರಿದೆ. ಮನೆಯಲ್ಲಾದರೆ ಸೊಳ್ಳೆ ಪರದೆ, ಮಾಸ್ಕಿಟೊ ಕಾಯ್ಲ್, ಮಾಸ್ಕಿಟೊ ರಿಪೆಲ್ಲಂಟ್ ಲಿಕ್ವಿಡ್, ಲೋಷನ್ ಬಳಸಿ ಸೊಳ್ಳೆಗಳ ಕಾಟದಿಂದ ದೂರವಿರಬಹುದು. ಆದರೆ, ದಿನನಿತ್ಯ ಪಾರ್ಕಿನಲ್ಲಿ ವಾಕಿಂಗಿಗೆ ಬರುವವರ ಪಾಡೇನು?
ವಸ್ತುಸ್ಥಿತಿಯೇನೆಂದರೆ, ಡೆಂಗ್ಯೂ ಜ್ವರ ಹೆಚ್ಚಾಗಿ ಮಕ್ಕಳನ್ನು ಮತ್ತು ವಯಸ್ಕರನ್ನು ಹೆಚ್ಚಾಗಿ ಬಾಧಿಸುತ್ತಿದೆ. ಆದರೆ, ಪಾರ್ಕಿಗೆ ವಾಕಿಂಗಿಗೆಂದು ಬರುವ ಹಿರಿಯ ನಾಗರಿಕರು ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳಲು ಏನು ಮಾಡಬೇಕು. ಇದಕ್ಕಾಗಿ ಬೆಂಗಳೂರಿನ ಹಿರಿಯ ನಾಗರಿಕರೇ ಹೊಸ ಉಪಾಯವನ್ನು ಹುಡುಕಿದ್ದಾರೆ.
ಅದೇನೆಂದರೆ, ಸೊಳ್ಳೆಗಳನ್ನು ದೂರವಿಡುವಂಥ ಗಿಡಗಳನ್ನು ಡಿಫೆನ್ಸ್ ಕಾಲೋನಿಯಲ್ಲಿ ಹಿರಿಯ ನಾಗರಿಕರೇ ನೆಟ್ಟಿದ್ದಾರೆ. ಇದರಿಂದ ಪರಿಸರ ಉಳಿಸಿದಂತೆಯೂ ಆಯಿತು ಮತ್ತು ಸೊಳ್ಳೆಗಳನ್ನು ದೂರವಿಟ್ಟಂತೂ ಆಯಿತು. ಇದೇ ಉಪಾಯವನ್ನು ನಗರದ ಇತರ ಬಡಾವಣೆಗಳಲ್ಲೂ ಮಾಡಬಹುದಲ್ಲವೆ? ಈ ಸುದ್ದಿಯ ಚಿತ್ರಸಂಪುಟ ಮುಂದಿನ ಸ್ಲೈಡುಗಳಲ್ಲಿ ಇದೆ. [ಸೊಳ್ಳೆ ದಿನಾಚರಣೆ ಬಗ್ಗೆ ಸೊಲ್ಲೆತ್ತಿದ ಅಮಿತಾಬ್ ಬಚ್ಚನ್!]
ಸೊಳ್ಳೆಗಳಿಗೆ ರಾಮಬಾಣ ಸಿಟ್ರೋನೆಲ್ಲಾ
ಸಿಟ್ರೋನೆಲ್ಲಾ ಹುಲ್ಲಿನಲ್ಲಿ ಸೊಳ್ಳೆಗಳನ್ನು ದೂರವಿಡುವಂಥಾ ಅದ್ಭುತ ಶಕ್ತಿಯಿದೆಯಂತೆ. ಎಲ್ಲ ಗಿಡ, ಹುಲ್ಲುಗಳಿಂತ ಹೆಚ್ಚು ಪರಿಣಾಮ ಬೀರುವ ಸಿಟ್ರೋನೆಲ್ಲಾ ಸಸಿಗಳನ್ನು ಪಾರ್ಕಿನಲ್ಲಿ ನೆಡಲಾಯಿತು. ಪ್ರತಿ ಸಿಟ್ರೋನೆಲ್ಲಾ ಸಸಿಗೆ 25 ರು. ತಲಗುತ್ತದೆ. ಇದನ್ನು ನಾಗರಿಕರೇ ದಾನ ಮಾಡಿದ್ದಾರೆ.
ಚೆಂಡು ಹೂವು ಕಮ್ಮಿಯೇನಿಲ್ಲ
ಗೌರೀಶನಿಗೆ ಅತ್ಯಂತ ಪ್ರಿಯವಾದ ಚೆಂಡು ಹೂವು (ಮಾರಿಗೋಲ್ಡ್) ಬಿಡುವ 20 ಸರಿಗಳನ್ನು ಹಿರಿಯ ನಾಗರಿಕರು ಪಾರ್ಕಿನಲ್ಲಿ ನೆಟ್ಟಿದ್ದಾರೆ. 94 ವರ್ಷದ ರತಿ ಕಪೂರ್ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು ಗಿಡ ನೆಡುವಲ್ಲಿ ಸಹಾಯ ಮಾಡಿದರು.
ಲೆಮನ್ ಗ್ರಾಸ್ ಅಂದ್ರೆ ಗೌತಿ ಚಹಾ
ಲೆಮನ್ ಗ್ರಾಸನ್ನು ಉತ್ತರ ಕರ್ನಾಟಕದಲ್ಲಿ ಗೌತಿ ಚಹಾ ಎಂದೂ ಕರೆಯುತ್ತಾರೆ. ಇದರಲ್ಲಿ ಅತ್ಯುತ್ತಮ ಔಷಧೀಯ ಗುಣಗಳೂ ಇವೆ. ಇದನ್ನು ಕಾಡೆ ಅಥವಾ ಕಷಾಯ ಮಾಡಲು ಕೂಡ ಬಳಸುತ್ತಾರೆ. ಮನೆಯಲ್ಲಿಯೂ ಕುಂಡಗಳಲ್ಲಿ ಇದನ್ನು ಬೆಳೆಸಬಹುದು. ಲೆಮನ್ ಗ್ರಾಸ್ ಸರಿಗಳನ್ನು ಕೂಡ ನೆಡಲಾಯಿತು.
ಶುಂಠಿಯ ಸಸಿಗಳಲ್ಲಿಯೂ ಇದೆ ರಾಮಬಾಣ
ಸುಮಾರು 20 ಶುಂಠಿ ಸಸಿಗಳನ್ನು ಕೂಡ ಪಾರ್ಕಿನಲ್ಲಿ ನೆಡಲಾಯಿತು. ಡಿಫೆನ್ಸ್ ಕಾಲೋನಿಯ ಹಿರಿಯ ನಾಗರಿಕರು ಮಾತ್ರವಲ್ಲ ಉದ್ಯಾನವನದ ಸಿಬ್ಬಂದಿಗಳು, ನೆರೆಹೊರೆಯವರು ಕೂಡ ಗಿಡ ನೆಡುವ ಈ ಅಭಿಯಾನದಲ್ಲಿ ಅತ್ಯಂತ ಉಲ್ಲಸಿತರಾಗಿ ಪಾಲ್ಗೊಂಡರು ಎಂದು ಸುಮಿ ಕೃಷ್ಣ ಅವರು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದರು.