ಶಿಥಿಲವಾದ ಹಳ್ಳಿ ಶಾಲೆಗಳಿಗೆ ಅನಿವಾಸಿ ಕನ್ನಡಿಗರಿಂದ ಮರುಜೀವ
ಬೆಂಗಳೂರು, ಅಕ್ಟೋಬರ್ 28 : ಕರ್ನಾಟಕದ ಎಷ್ಟೋ ಹಳ್ಳಿಗಳಲ್ಲಿ ಶಿಕ್ಷಣವೆಂಬುದು ಇನ್ನೂ ಗಗನ ಕುಸುಮ. ಭೂಕಂಪಕ್ಕೆ ಸಿಲುಕಿ ಬಿರುಕು ಬಿಟ್ಟಂತಿರುವ ಕಟ್ಟಡ, ಅದಕ್ಕೊಂದು ಶಿಥಿಲವಾದ ಸೂರು. ಸೂರಿದ್ದರೂ ಅಲ್ಲಿ ಶೌಚಾಲಯ, ಪ್ರಯೋಗಾಲಯಗಳ ವ್ಯವಸ್ಥೆ ಇರುವುದಿಲ್ಲ.
ಇನ್ನು ಮಳೆ ಬಂದರಂತೂ ಶಾಲೆಯ ಕಟ್ಟಡ ಅರ್ಧಕ್ಕರ್ಧ ಬಿದ್ದು, ಮಕ್ಕಳು ಬೀದಿಯಲ್ಲಿಯೇ ಕುಳಿತು ಪಾಠ ಕೇಳಬೇಕಾದಂಥ ಪರಿಸ್ಥಿತಿ ಇರುತ್ತದೆ. ಎಲ್ಲ ಇದ್ದರೂ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರುವುದು ಮತ್ತೊಂದು ದುಸ್ಸಾಹಸದ ಕೆಲಸ.
ಕರ್ನಾಟಕದ ಹಳ್ಳಿಗಳಲ್ಲಿರುವ ಇಂಥ ಹಲವಾರು ಶಾಲೆಗಳ ಶೋಚನೀಯ ಸ್ಥಿತಿಯನ್ನು ಅರಿತು, ಅವುಗಳಿಗೆ ಕಾಯಕಲ್ಪ ಕಲ್ಪಿಸಲು ಮುಂದಾಗಿರುವುದು OSAAT (One School At A Time) ಎಂಬ, ಅನಿವಾಸಿ ಕನ್ನಡಿಗರ ಸರಕಾರೇತರ ಸಂಸ್ಥೆ. ಈ ಸಂಸ್ಥೆ ಕಳೆದ 20 ವರ್ಷಗಳಲ್ಲಿ 13ಕ್ಕೂ ಹೆಚ್ಚು ಶಾಲೆಗಳನ್ನು ನಿರ್ಮಿಸಿ ಶಿಕ್ಷಣಕ್ಕೆ ಬೆನ್ನೆಲುಬಾಗಿ ನಿಂತಿದೆ.
ಈ ಸಂಸ್ಥೆಯನ್ನು ಇನ್ನಷ್ಟು ದೊಡ್ಡದಾಗಿ ಬೆಳೆಸಬೇಕು ಮತ್ತು ಸಮಾಜಕ್ಕೆ ತಿಳಿಯಪಡಿಸಬೇಕು ಎಂಬ ಉದ್ದೇಶದಿಂದ ಅಕ್ಟೋಬರ್ 28, ಶನಿವಾರ, ಸಂಜೆ 4 ಗಂಟೆಗೆ ಬನಶಂಕರಿ ಮೂರನೇ ಹಂತದಲ್ಲಿರುವ ಪಿಇಎಸ್ ಆಡಿಟೋರಿಯಂನಲ್ಲಿ 'ಓಸಾಟ್ ಅನಾವರಣ' ಎಂಬ ಒಂದು ಸಮಾರಂಭವನ್ನು ಏರ್ಪಡಿಸಲಾಗಿದೆ.
ಈ ವಿಶಿಷ್ಟ ಸಮಾರಂಭಕ್ಕೆ ರಾಜವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ವೊಡೆಯರ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ. ಪಿಇಎಸ್ ವಿಶ್ವವಿದ್ಯಾಲಯದ ಸಿಇಓ ಜವಾಹರ ದೊರೆಸ್ವಾಮಿ ಅವರು ಭಾಗವಹಿಸುತ್ತಿದ್ದು, ಓಸಾಟ್ ಅಮೆರಿಕದ ಅಧ್ಯಕ್ಷ, ಕನ್ನಡಿಗ ಬಿ.ವಿ. ಜಗದೀಶ್ ಅವರು ಪಾಲ್ಗೊಳ್ಳುತ್ತಿದ್ದಾರೆ.
2010ರ ಹೊತ್ತಿಗೆ ಪ್ರತಿವರ್ಷ ಕನಿಷ್ಠ 20 ಸುಸಜ್ಜಿತ ಶಾಲೆಗಳನ್ನು ಕರ್ನಾಟಕದ ಗ್ರಾಮಗಳಲ್ಲಿ ನಿರ್ಮಿಸಬೇಕೆಂಬ ಮಹದುದ್ದೇಶವನ್ನು ಓಸಾಟ್ ಹೊಂದಿದೆ. ಈ ಮಹೋನ್ನತ ಕಾರ್ಯಕ್ಕೆ ಕೈಜೋಡಿಸಿರುವ ದಾನಿಗಳು, ಕಾರ್ಪೊರೇಟ್ ಸಂಸ್ಥೆಗಳು, ಫಲಾನುಭವಿಗಳನ್ನು ಒಗ್ಗೂಡಿಸುವ ಪ್ರಯತ್ನವೂ ಇದಾಗಿದೆ.
ಸಂಜೆ 6 ಗಂಟೆಗೆ ಹೈಟೀ ನಂತರ 'ಇನಿದನಿ' ಆರ್ಕೆಸ್ಟ್ರಾ ತಂಡದವರು ಸಭಿಕರನ್ನು ಸಂಗೀತದ ಮೂಲಕ ರಂಜಿಸಲಿದ್ದಾರೆ.