ಫೇಸ್ ಬುಕ್ ಪೋಸ್ಟ್: ಬೆಂಗಳೂರು ಪೊಲೀಸರಿಗೆ ಸುಪ್ರೀಂ ಚಾಟಿ
ಬೆಂಗಳೂರು, ಜ, 22: ಆ ಜೋಡಿ ನಿಧಾನವಾಗಿ ಕಾರಿನಲ್ಲಿ ಸಂಚರಿಸುತ್ತಿತ್ತು, ಆದರೆ ಆಕಸ್ಮಿಕವಾಗಿ ಅವಘಡ ಸಂಭವಿಸಿತ್ತು. ಎದುರಿಗಿನ ಆಟೋ ವೊಂದಕ್ಕೆ ಕಾರ್ ಡಿಕ್ಕಿಯಾಗಿ ಒಳಗಿದ್ದ ಆಟೋದಲ್ಲಿದ್ದ ಪ್ರಯಾಣಿಕ ಗಾಯಗೊಂಡಿದ್ದ.
ಇವರೇನು ಕಾರು ಬಿಟ್ಟು ಓಡಿಹೋಗಲಿಲ್ಲ. ಪ್ರಯಾಣಿಕನ್ನು ಆಸ್ಪತ್ರೆಗೆ ಸೇರಿಸಿ ಸಂಪೂರ್ಣ ವೆಚ್ಚವನ್ನು ಭರಿಸಿದರು. ಆದರೆ ಕಾರು ಚಲಾಯಿಸುತ್ತಿದ್ದ 'ಜಾವಾ' ಎಂಬ ಮಹಿಳೆ ಜತೆ ದುರ್ವರ್ತನೆ ತೋರಿಸಿದ ಪುಲಿಕೇಶಿನಗರ ಪೊಲೀಸರು ಸಮನ್ಸ್ ಸಹ ನೀಡಿದ್ದರು.[ಜನಾರ್ದನ ರೆಡ್ಡಿಗೆ ಜಾಮೀನು : ಯಾರು, ಏನು ಹೇಳಿದರು?]
ಇದರಿಂದ ಬೇಸತ್ತ ಜೋಡಿ ತಮ್ಮ ಆಕ್ರೊಶವನ್ನು ಟ್ರಾಫಿಕ್ ಪೊಲೀಸ್ ಗೆ ಸಂಬಂಧಿಸಿದ ಪೇಜ್ ನಲ್ಲಿ ಹಾಕಿತ್ತು. ಆದರೆ ಪೊಲೀಸರು ತಮ್ಮ ಮತ್ತು ಇಲಾಖೆ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದೀರಿ ಎಂದು ಎಫ್ ಐ ಆರ್ ದಾಖಲಿಸಿದ್ದರು.
ಆದರೆ ಸುಪ್ರಿಂ ಕೋರ್ಟ್ ಈ ಪ್ರಕರಣವನ್ನು ತಿರಸ್ಕರಿಸಿದೆ. ಪೊಲೀಸ್ ಇಲಾಖೆಯ ಫೇಸ್ ಬುಕ್ ಖಾತೆ ಸಾರ್ವಜನಿಕರಿಗೆ ಮುಕ್ತವಾಗಿದೆ. ಅಲ್ಲಿ ಯಾರೂ ಬೇಕಾದರೂ ತಮ್ಮ ಅಭಿಪ್ರಾಯ ಮಂಡನೆ ಮಾಡಬಹುದು. ಅವರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದ್ದು ಅದನ್ನು ಬಳಸಿಕೊಂಡಿದ್ದಾರೆ. ಇದರಲ್ಲಿ ಅಂಥ ತಪ್ಪೇನಿಲ್ಲ ಎಂದು ಗೋಪಾಲ ಗೌಡ ಮತ್ತು ಬಾಲಮುರಳಿಕೃಷ್ಣ ನೇತೃತ್ವದ ಪೀಠ 10 ಪುಟಗಳ ತೀರ್ಮಾನ ನೀಡಿದೆ.[ಕನ್ನಡ ಕಡ್ಡಾಯವಲ್ಲ: ಸರ್ಕಾರದ ಕೊನೆ ಸುತ್ತಿನ ಹೋರಾಟ]
ಪೊಲೀಸರ ದುರ್ವರ್ತನೆಯನ್ನು ತರಾಟೆಗೆ ತೆಗೆದುಕೊಂಡಿರುವ ನ್ಯಾಯಾಲಯ, ಮುಂದೆ ಇಂಥ ಘಟನೆಗಳು ನಡೆಯದಂತೆ ನೋಡಿಕೊಳ್ಳಿ ಎಂಬ ಎಚ್ಚರಿಕೆಯನ್ನು ರವಾನಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಯಾವ ರೀತಿಯ ಅಭಿಪ್ರಾಯ ವ್ಯಕ್ತ ಮಾಡಬಹುದು ಎಂಬುದನ್ನು ಸೂಚ್ಯವಾಗಿ ತಿಳಿಸಿದೆ.