ಬನ್ನೇರುಘಟ್ಟ ಉಳಿಸಿ ಅಭಿಯಾನಕ್ಕೆ ನೀವೂ ಸಹಿ ಹಾಕಿ, ಪರಿಸರ ಉಳಿಸಿ
ಬೆಂಗಳೂರು, ನವೆಂಬರ್ 27: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸುತ್ತಲ ಪರಿಸರ ಸೂಕ್ಷ್ಮ ವಲಯ ಪ್ರದೇಶವನ್ನು 268 ಚದರ ಕಿ.ಮೀ. ನಿಂದ 169 ಕಿ.ಮೀ.ಗೆ ಇಳಿಸಲು ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯವು ಈಚೆಗೆ ಅಧಿಸೂಚನೆ ಹೊರಡಿಸಿದೆ.
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಿಂದ ಬೆಂಗಳೂರು ನಗರದ ದೂರ ಮತ್ತು ಅದರ ಉಷ್ಣತೆ ಪರಿಣಾಮ ಹಾಗೂ ಮಾಲಿನ್ಯವನ್ನು ಕಡಿಮೆ ಮಾಡುವಲ್ಲಿನ ಪಾತ್ರ ಇವೆಲ್ಲದರ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಯುನೈಟೆಡ್ ಬೆಂಗಳೂರು ಸಂಸ್ಥೆಯಿಂದ ಅರ್ಜಿಯೊಂದನ್ನು ಸಿದ್ಧಪಡಿಸಿದೆ.
ಬನ್ನೇರುಘಟ್ಟ ಪರಿಸರ ಸೂಕ್ಷ್ಮ ವಲಯ ಪ್ರದೇಶ ಕಡಿತ!
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಸುತ್ತಮುತ್ತಲ ಪ್ರದೇಶದಲ್ಲಿ ವ್ಯಾಪಕವಾಗಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಕಾರ್ಖಾನೆಗಳು, ಕಲ್ಲು ಗಣಿಗಾರಿಕೆ ವ್ಯಾಪಕವಾಗಿ ನಡೆಯುತ್ತಿವೆ. ಇದರಿಂದ ಹಳ್ಳಿಗಳಲ್ಲಿ ಭಾರೀ ಸಮಸ್ಯೆ ಆಗಿದೆ. ಜತೆಗೆ ಮಾನವ-ಪ್ರಾಣಿ ಸಂಘರ್ಷಕ್ಕೂ ಕಾರಣವಾಗಿದೆ.
ಆದ್ದರಿಂದ ಸರಕಾರದ ನಿರ್ಧಾರವನ್ನು ವಾಪಸ್ ಪಡೆಯಲು ಒತ್ತಾಯ ಮಾಡಬೇಕಿದೆ. ಬನ್ನೇರುಘಟ್ಟ ಸುತ್ತಮುತ್ತ ಈಗ ಇರುವಂತೆಯೇ 268 ಚದರ ಕಿ.ಮೀ. ಪ್ರದೇಶವನ್ನು ಪರಿಸರಸೂಕ್ಷ್ಮ ಪ್ರದೇಶ ಎಂದೇ ಪರಿಗಣಿಸುವಂತೆ ಮನವಿ ಮಾಡಲು ಆರಂಭಿಸಿರುವ ಅಭಿಯಾನದ ಅರ್ಜಿಗೆ ನೀವೂ ಸಹಿ ಹಾಕಿ.