ಸತ್ಯರಾಜ್ ವೈಯಕ್ತಿಕ ಹೇಳಿಕೆಗಾಗಿ ಸಿನಿಮಾಗೆ ತೊಂದರೆ ಮಾಡ್ಬೇಡಿ: ರಾಜಮೌಳಿ
ಬಾಹುಬಲಿ 2 ಸಿನಿಮಾದಲ್ಲಿ ಸತ್ಯರಾಜ್ ನಟ ಮಾತ್ರ. ಅವರ ಹೇಳಿಕೆ ವೈಯಕ್ತಿಕವಾದದ್ದು. ಆ ಕಾರಣಕ್ಕೆ ಸಿನಿಮಾ ಬಿಡುಗಡೆಗೆ ತೊಂದರೆ ಮಾಡಬೇಡಿ ಎಂದು ಚಿತ್ರದ ನಿರ್ದೇಶಕ ಎಸ್ ಎಸ್ ರಾಜಮೌಳಿ ಮನವಿ ಮಾಡಿದ್ದಾರೆ
ಬೆಂಗಳೂರು, ಏಪ್ರಿಲ್ 20: ಬಾಹುಬಲಿ 2 ಸಿನಿಮಾವನ್ನು ಕರ್ನಾಟಕದಲ್ಲಿ ನಿಷೇಧಿಸುವಂತೆ ಕನ್ನಡಪರ ಸಂಘಟನೆಗಳು ರಾಜ್ಯ ಬಂದ್ ಗೆ ಕರೆ ನೀಡಿದ ಮರುದಿನ ಅಂದರೆ ಗುರುವಾರ ಆ ಸಿನಿಮಾದ ನಿರ್ದೇಶಕ ಎಸ್ಎಸ್ ರಾಜಮೌಳಿ ಮನವಿ ಮಾಡಿದ್ದಾರೆ. ಕನ್ನಡದಲ್ಲಿರುವ ಆ ವಿಡಿಯೋ ಸಂದೇಶದಲ್ಲಿ, ಸತ್ಯರಾಜ್ ಅವರ ಹೇಳಿಕೆ ವೈಯಕ್ತಿಕವಾದದ್ದು. ಅದಕ್ಕಾಗಿ ಸಿನಿಮಾಗೆ ತೊಂದರೆ ಆಗಬಾರದು ಎಂದು ಮನವಿ ಮಾಡಿದ್ದಾರೆ.
ಸತ್ಯರಾಜ್ ಅವರು ಬಾಹುಬಲಿ ಸಿನಿಮಾದ ನಿರ್ದೇಶಕರೂ ಅಲ್ಲ, ನಿರ್ಮಾಪಕರೂ ಅಲ್ಲ. ಸಿನಿಮಾದಲ್ಲಿ ಅವರು ನಟ ಮಾತ್ರ. ಸಿನಿಮಾ ಬಿಡುಗಡೆ ಆಗಲಿಲ್ಲ ಅಂದರೆ ಅವರು ಕಳೆದುಕೊಳ್ಳೋದು ಏನೂ ಇಲ್ಲ ಎಂದು ರಾಜಮೌಳಿ ವಿಡಿಯೋದಲ್ಲಿ ಹೇಳಿದ್ದಾರೆ. ಈ ಸಿನಿಮಾ ತಡೆದರೆ ತೊಂದರೆ ಅನುಭವಿಸುವ ನೂರಾರು ಜನರ ಬಗ್ಗೆ ಯೋಚಿಸಿ ಎಂದಿದ್ದಾರೆ.[ವಾಟಾಳ್ ಸಂದರ್ಶನ, ನಮ್ಮ ವಿರೋಧ ಸತ್ಯರಾಜ್ ಗೆ ಮಾತ್ರ]
ಸತ್ಯರಾಜ್ ವೈಯಕ್ತಿಕ ಹೇಳಿಕೆಗೋಸ್ಕರ ಸಿನಿಮಾ ತಡೆಯುವುದು ಸರಿಯಲ್ಲ. ಈ ಸನ್ನಿವೇಶದ ಬಗ್ಗೆ ಅವರಿಗೆ ತಿಳಿಸಿದ್ದೇವೆ. ಇದರಿಂದ ಆಚೆಗೆ ನಾವೇನೂ ಮಾಡಲು ಸಾಧ್ಯವಿಲ್ಲ ಎಂದು ರಾಜಮೌಳಿ ವಿಡಿಯೋದಲ್ಲಿ ಹೇಳಿದ್ದಾರೆ. ಸಿನಿಮಾ ಬಗ್ಗೆ ಬೆಂಗಳೂರಿನಲ್ಲಿ ಆಯೋಜಿಸಬೇಕಿದ್ದ ಪತ್ರಿಕಾಗೋಷ್ಠಿಯನ್ನು ಕನ್ನಡಪರ ಸಂಘಟನೆಗಳ ಪ್ರತಿಭಟನೆ ಭಯದಿಂದ ಕೊನೆ ಕ್ಷಣದಲ್ಲಿ ರದ್ದುಗೊಳಿಸಲಾಗಿದೆ.
ವಿವಾದಕ್ಕೆ ಹೇಗೂ ಸಂಬಂಧಪಡದ ಸಿನಿಮಾವನ್ನು ಹಾಗೂ ನಮ್ಮನ್ನೆಲ್ಲ ಎಳೆದು ತರಬೇಡಿ. ನಿಮ್ಮ ಬೆಂಬಲ ಹಾಗೂ ಪ್ರೀತಿಗಾಗಿ ಧನ್ಯವಾದ ಎಂದು ತಿಳಿಸಿದ್ದಾರೆ ನಿರ್ದೇಶಕ ರಾಜಮೌಳಿ.[ಬಾಹುಬಲಿ-2 ಬಿಡುಗಡೆ ದಿನ ಕನ್ನಡ ಸಂಘಟನೆಗಳಿಂದ ಕರ್ನಾಟಕ ಬಂದ್]
ಬಾಹುಬಲಿ 2 ಸಿನಿಮಾ ಪ್ರದರ್ಶನವನ್ನು ನಿಲ್ಲಿಸುತ್ತೇವೆ ಮತ್ತು ಕರ್ನಾಟಕದಲ್ಲಿ ಸಿನಿಮಾ ವಿತರಣೆ ಮಾಡಬೇಡಿ ಎಂದು ಕನ್ನಡಪರ ಸಂಘಟನೆಗಳ ಸದಸ್ಯರು ಹೇಳಿದ ಒಂದು ದಿನದ ನಂತರ ರಾಜಮೌಳಿ ಈ ವಿಡಿಯೋ ಹೇಳಿಕೆ ಕೊಟ್ಟೊದ್ದಾರೆ. ಸಿನಿಮಾ ಬಿಡುಗಡೆಗೆ ಎಂದು ಏಪ್ರಿಲ್ 28 ದಿನ ನಿಗದಿಪಡಿಸಿದ್ದು, ಅಂದು ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ.
ಕರ್ನಾಟಕ ಹಾಗೂ ಕನ್ನಡಿಗರ ವಿರುದ್ಧ ಹೇಳಿಕೆ ನೀಡಿದ ನಟ ಸತ್ಯರಾಜ್ ಕ್ಷಮೆ ಯಾಚಿಸಬೇಕು. ಅದುವರೆಗೆ ಅತ ನಟಿಸಿದ ಬಾಹುಬಲಿ 2 ಸಿನಿಮಾವನ್ನು ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಕನ್ನಡಪರ ಸಂಘಟನೆಗಳ ಸದಸ್ಯರು ಹೇಳಿದ್ದಾರೆ.