ಜನಸೇವೆಗೆ ಸಚಿವಗಿರಿ ಅನಿವಾರ್ಯ ಅಲ್ಲ: ಸತೀಶ್ ಜಾರಕಿಹೊಳಿ
ಬೆಂಗಳೂರು, ಸೆಪ್ಟೆಂಬರ್ 19: ಕಳೆದ 15 ದಿನಗಳಿಂದ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಬಂಡೆದಿದ್ದ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಸಂಪೂರ್ಣ ತಣ್ಣಗಾಗಿದ್ದು ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ ಎಂದು ಹೇಳುವ ಮೂಲಕ ಎಲ್ಲರು ಹುಬ್ಬೇರಿಸುವಂತೆ ಮಾಡಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ ಸಚಿವರಾದವರು ಮಾತ್ರ ಕೆಲಸ ಮಾಡಬೇಕೆಂದೇನೂ ಇಲ್ಲ, ಪಕ್ಷಕ್ಕಾಗಿ ಶಾಸಕರಾಗಿಯೂ ಕೆಲಸ ಮಾಡಬಹುದು.
ಜಾರಕಿಹೊಳಿ ಬ್ರದರ್ಸ್ ಬಂಡಾಯ ಶಮನ : ಯಾರು, ಏನು ಹೇಳಿದರು?
ಹಿಂದೆ ಮಂತ್ರಿಗಿರಿ ಹುದ್ದೆಯಿಂದ ನನ್ನನ್ನು ಕೈಬಿಟ್ಟ ಮೇಲೆ ಮೂರೇ ತಿಂಗಳಲ್ಲಿ ಮತ್ತೆ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡಿ ನಮ್ಮ ಶಕ್ತಿ ಏನೆಂಬುದನ್ನು ಸಾಬೀತು ಮಾಡಿದ್ದೇವೆ. ಕಳೆದ ವಿಧಾನಸಭೆ ಚುನಾವಣೆಯಲ್ಲೂ ಕೂಡ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ.
ಹೀಗಾಗಿ ಸಚಿವ ಸ್ಥಾನದಲ್ಲಿದ್ದರೆ ಮಾತ್ರ ಕೆಲಸ ಮಾಡುತ್ತೇನೆ ಎನ್ನುವುದು ನನ್ನ ಭಾವನೆಯಲ್ಲ ಪಕ್ಷಕ್ಕಾಗಿ ಕಲಸ ಮಾಡುತ್ತೇನೆ ಎಂದು ಜಾರಕಿಹೊಳಿ ಸಮರ್ಥಿಸಿಕೊಂಡರು. ಈ ಮೂಲಕ ಸಚಿವ ಸ್ಥಾನಕ್ಕಾಗಿಯೇ ಜಾರಕಿಹೊಳಿ ಸಹೋದರರು ಬಂಡಾಯ ಸಾರಿದ್ದಾರೆ ಎಂಬುದನ್ನು ಸುಳ್ಳುಮಾಡಲು ಸ್ವತಃ ಶಾಸಕ ಸತೀಶ್ ಜಾರಕಿಹೊಳಿ ಮುಂದಾಗಿದ್ದಾರೆ.
ಸಂಧಾನಕ್ಕೆ ತೆರಳಿದ್ದ ಎಚ್ ಡಿಕೆಗೆ ಜಾರಕಿಹೊಳಿ ಸಹೋದರರ 5 ಷರತ್ತುಗಳು
ಸಂಪುಟ ವಿಸ್ತರಣೆ ವೇಳೆ ಈಗಾಗಲೇ ಸಂಪುಟದಲ್ಲಿರುವ ರಮೇಶ್ ಜತೆಗೆ ಸತೀಶ್ ಜಾರಕಿಹೊಳಿ ಅವರಿಗೂ ಸಚಿವ ಸ್ಥಾನ ನೀಡಬೇಕೆಂಬ ಒತ್ತಡವನ್ನು ಹೇರುತ್ತಿದ್ದಾರೆ ಎನ್ನುವುದು ಈವರೆಗೆ ಕಾಂಗ್ರೆಸ್ ಪಕ್ಷದಲ್ಲಿ ನಂಬಲಾಗಿತ್ತು. ಆದರೆ ತಾವೇ ಸಚಿವ ಸ್ಥಾನ ಬೇಡವೆಂದು ಹೇಳುವ ಮೂಲಕ ಸತೀಶ್ ಜಾರಕಿಹೊಳಿ ಹೊಸ ಕುತೂಹಲವನ್ನು ಸೃಷ್ಟಿಸಿದ್ದಾರೆ. ಹೀಗೆ ಏಕಾಏಕಿ ಸಚಿವ ಸ್ಥಾನ ಬೇಡ ಎನ್ನುತ್ತಿರುವುದು ಏಕೆ ಎನ್ನುವುದು ಹೊಸ ಕುತೂಹಲಕ್ಕೆ ಕಾರಣವಾಗಿದೆ.