ಉಂಡ ಮನೆಗೆ ಕನ್ನ ಹಾಕಿದ ಚಾಲಾಕಿ ಕಳ್ಳಕಳ್ಳಿಯರ ಬಂಧನ
ಬೆಂಗಳೂರು, ಆಗಸ್ಟ್ 24 : ಮನೆಮಂದಿ ಮನೆಯಲ್ಲಿ ಇಲ್ಲದಿರುವುದನ್ನು ಗಮನಿಸಿ, ಹೊಂಚು ಹಾಕಿ, ನಕಲಿ ಕೀಲಿ ಬಳಸಿ ಲಕ್ಷಗಟ್ಟಲೆ ಮೌಲ್ಯದ ಚಿನ್ನಾಭರಣ ದೋಚಿದ ಚಾಲಾಕಿ ಕಳ್ಳಿ ಮತ್ತು ಕಳ್ಳಿಯರನ್ನು ಬಂಧಿಸುವಲ್ಲಿ ಬೆಂಗಳೂರಿನ ಸಂಜಯನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಕಳ್ಳರ ಗುಂಪು ದೋಚಿದ್ದು ಅಷ್ಟಿಷ್ಟಲ್ಲ. ಹತ್ತು ಲಕ್ಷ ರು.ಗೂ ಅಧಿಕ ಚಿನ್ನ, ವಜ್ರ ಮತ್ತು ಬೆಳ್ಳಿಯ ಆಭರಣಗಳನ್ನು ಮತ್ತು ಹನ್ನೆರಡೂವರೆ ಸಾವಿರದಷ್ಟು ನಗದನ್ನು. ಇವರ ಚಾಲಾಕಿತನ ನೋಡಿ ಮನೆಯವರು ಮಾತ್ರವಲ್ಲ ಪೊಲೀಸರು ಕೂಡ ದಂಗಾಗಿದ್ದರು. ಅದೂ ದೋಚಿದ್ದು ಮಟಮಟ ಮಧ್ಯಾಹ್ನ!
ಹತ್ತು ಲಕ್ಷಕ್ಕೂ ಅಧಿಕ ಮೌಲ್ಯದ ಆಭರಣ ಕಾಣೆಯಾಗಿರುವುದನ್ನು ನೋಡಿದ ಮನೆಯೊಡತಿ ನಾಗರತ್ನ ಸಂಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮನೆಯಲ್ಲಿ ಯಾರೂ ಇಲ್ಲದಾಗ ನಕಲಿ ಕೀಲಿ ಕೈ ಬಳಸಿ ದೋಚಲಾಗಿದೆ ಎಂದು ಆಗಸ್ಟ್ 20ರಂದು ನಾಗರತ್ನ ದೂರು ನೀಡಿದ್ದರು.
ಅಂದು ಆಗಿದ್ದೇನೆಂದರೆ, ನಾಗರತ್ನ ಅವರು ಮಧ್ಯಾಹ್ನ 12.50ಕ್ಕೆ ಪಕ್ಕದ ರಸ್ತೆಯಲ್ಲಿರುವ ತಮ್ಮ ಮಗಳ ಮನೆಗೆ ಹೋಗಿದ್ದರು, ಮನೆಯಲ್ಲಿದ್ದ ಮಗ 1.15ರ ಸುಮಾರಿಗೆ ಮನೆ ಬಾಗಿಲು ಲಾಕ್ ಮಾಡಿಕೊಂಡು ಹೋಗಿದ್ದರು. ಆದರೆ, ನಾಗರತ್ನ ಅವರು 2.25 ಗಂಟೆಗೆ ಮನೆಗೆ ಬರುವಷ್ಟರಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದರು.
ಮನೆಯಲ್ಲಿದ್ದ 420 ಗ್ರಾಂ ತೂಕದ ವಜ್ರಾಭರಣ, ಚಿನ್ನ ಮತ್ತು ಬೆಳ್ಳಿ ಆಭರಣ ಮಾಯವಾಗಿದ್ದವು. ಜೊತೆಗೆ 12,500 ರು. ನಗದು ಕೂಡ ದೋಚಲಾಗಿತ್ತು. ಇದನ್ನೆಲ್ಲ ಪರಿಶೀಲಿಸಲಾಗಿ, ಪರಿಚಯದವರೇ ಇದನ್ನು ಮಾಡಿರಬಹುದೆಂದು ಸ್ಪಷ್ಟವಾಗಿ ಪೊಲೀಸರಿಗೆ ಗೋಚರವಾಗಿತ್ತು. ಮನೆಗೆಲಸದವರನ್ನು ವಿಚಾರಿಸಲಾಗಿ, ಅವರೇ ಮಾಡಿರುವುದು ಬೆಳಕಿಗೆ ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂಜಯನಗರದ ನಿವಾಸಿಗಳಾದ ಗೌರಿ (45), ಯೋಗೇಶ್ (20) ಮತ್ತು ದೀಪಾ (19) ಎಂಬುವವರನ್ನು ಬಂಧಿಸುವಲ್ಲಿ ಸಂಜಯನಗರದ ಪೊಲೀಸರು ಯಶಸ್ವಿಯಾಗಿದ್ದಾರೆ. ಅವರಿಂದ 368 ಗ್ರಾಂ ಚಿನ್ನಾಭರಣ ಮತ್ತು ಕೃತ್ಯಕ್ಕೆ ಬಳಸಲಾದ ಪಲ್ಸರ್ ಬೈಕನ್ನು ವಶಪಡಿಸಿಕೊಳ್ಳಲಾಗಿದೆ.