ಎಚ್.ಆಂಜನೇಯ ಕಾಂಗ್ರೆಸ್ ಪಕ್ಷದ ಏಜೆಂಟ್ : ಸದಾನಂದಗೌಡ
Recommended Video
ಬೆಂಗಳೂರು, ಮಾರ್ಚ್ 09: ಕಾಂಗ್ರೆಸ್ ಬೊಕ್ಕಸಕ್ಕೆ ಹಣ ಹೊಂದಿಸಿಕೊಡುವ ಏಜೆಂಟರಂತೆ ಎಚ್.ಆಂಜನೇಯ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಸದಾನಂದಗೌಡ ಟೀಕಿಸಿದರು.
ಸರ್ಕಾರಿ ವಿದ್ಯಾರ್ಥಿನಿಲಯಗಳ ಪರಿಸ್ಥಿತಿಯ ಬಗ್ಗೆ ಸಮೀಕ್ಷಾ ವರದಿ ಬಿಡುಗಡೆ ಮಾತನಾಡಿದ ಅವರು ಆಂಜನೇಯ ಅವರು ಕೇವಲ ಸುಳ್ಳು ಭರವಸೆಗಳನ್ನು ಕೊಡುವ ಮೂಲಕ ತಮ್ಮ ಇಲಾಖೆ ಕಾರ್ಯವನ್ನು ಮೂಲೆಗುಂಪು ಮಾಡಿ ಮುಖ್ಯಮಂತ್ರಿಗಳ ಏಜೆಂಟ್ರಂತೆ ಕಾರ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಕನಿಷ್ಠವೆಂದರೂ 2000 ಕೊಟಿ ರೂಪಾಯಿ ಹಗರಣ ನಡೆದಿದೆ. ಸಣ್ಣ ಮಕ್ಕಳಿಗಾಗಿ ಖರೀದಿಸಿರುವ ಬೆಡ್ಶೀಟ್, ದಿಂಬುಗಳ 25 ಕೋಟಿ ವ್ಯವಹಾರದಲ್ಲಿ ಎಂಟು ಕೋಟಿ ಲೂಟಿ ಆಗಿದೆ, ಇನ್ನು 2157 ಕೋಟಿಯಲ್ಲಿ ಯಾರ್ಯಾರು ಎಷ್ಟೆಷ್ಟು ನುಂಗಿದ್ದಾರೊ ಏನೋ? ಎಂದು ಅನುಮಾನ ವ್ಯಕ್ತಪಡಿಸಿದರು.
ನಮ್ಮದು ಭ್ರಷ್ಟಾಚಾರ ರಹಿತ ಸರ್ಕಾರ ಎಂದು ಸುಳ್ಳೆ ಎದೆತಟ್ಟಿಕೊಳ್ಳುವ ಮುಖ್ಯಮಂತ್ರಿಗಳು ಸಮಾಜ ಕಲ್ಯಾಣ ಇಲಾಖೆಯ ಕಡೆ ಕಣ್ಣು ಬಿಟ್ಟು ನೋಡಬೇಕು. ಅವರಿಗೆ ಈ ವಿಷಯ ಗೊತ್ತಿದ್ದರು ಬೇಕೆಂದೇ ತನಿಖೆ ಮಾಡುತ್ತಿಲ್ಲ ಎಂದು ಅವರು ಆರೋಪಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಅನೇಕ ಹಾಸ್ಟೆಲ್ಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಗ್ರಂಥಾಲಯ ಇಲ್ಲ, ಹಾಸಿಗೆ, ದಿಂಬುಗಳು ಸರಿಯಿಲ್ಲ, ಭದ್ರತೆ ಇಲ್ಲ, ಕೆಲವು ಕಡೆ ಒಂದು ರೂಮ್ನಲ್ಲಿ 12 ವಿದ್ಯಾರ್ಥಿಗಳನ್ನು ತುಂಬಲಾಗಿದೆ ಇಷ್ಟೆಲ್ಲಾ ಅವ್ಯವಸ್ಥೆಗಳಿದ್ದರೂ ಸಚಿವರು ಮಾತ್ರ ತಮ್ಮ ಖಾತೆಗೆ ಹಣ ತುಂಬಿಸಿಕೊಳ್ಳುವುದರಲ್ಲಿ ನಿರತರಾಗಿದ್ದಾರೆ ಎಂದರು.