ಹುತಾತ್ಮರ ಕುಟುಂಬದ ಬೇಡಿಕೆ ಅರ್ಜಿ 15 ದಿನಗಳಲ್ಲಿ ಇತ್ಯರ್ಥ: ದೇಶಪಾಂಡೆ
ಬೆಂಗಳೂರು, ಜು.27: ದೇಶದ ರಕ್ಷಣೆಯ ಸಲುವಾಗಿ ಪ್ರಾಣತ್ಯಾಗ ಮಾಡಿ ಹುತಾತ್ಮರಾಗಿರುವ ರಕ್ಷಣಾ ಸಿಬ್ಬಂದಿಯ ನೇರ ಅವಲಂಬಿತರು ಜಮೀನು, ನಿವೇಶನ ಅಥವಾ ಆರ್ಥಿಕ ಪರಿಹಾರ ಕೋರಿ ಸಲ್ಲಿಸಿರುವ ಅರ್ಜಿಗಳನ್ನು ಇನ್ನು 15 ದಿನಗಳಲ್ಲಿ ಇತ್ಯರ್ಥ ಪಡಿಸಬೇಕೆಂದು ಸಚಿವ ಆರ್ ವಿ ದೇಶಪಾಂಡೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಬಹಳ ವರ್ಷಗಳಿಂದ ಇತ್ಯರ್ಥ ಕಾಣದೆ ನೆನಗುದಿಗೆ ಬಿದ್ದಿರುವ ಅರ್ಜಿಗಳ ಕುರಿತು ದಿನಪತ್ರಿಕೆಗಳಲ್ಲಿ ವರದಿ ಪ್ರಕಟವಾದ ಬಳಿಕ ಅದನ್ನು ಗಂಭೀರವಾಗಿ ಪರಿಗಣಿಸಿರುವ ಸಚಿವರು ಲೋಕಾಯುಕ್ತರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವುದನ್ನು ಶ್ಲಾಘಿಸಿದರು, ಕಾಲಮಿತಿಯನ್ನು ವಿಧಿಸಿದ್ದಾರೆ. ದೇಶದ ರಕ್ಷಣೆಗಾಗಿ ತಮ್ಮ ಜೀವನವನ್ನೇ ಪಣಕ್ಕಿಟ್ಟು ಹೋರಾಡುತ್ತಾರೆ, ಅಂತವರ ಕುಟುಂಬದವರಿಗೆ ಸೌಲಭ್ಯ ಕಲ್ಪಿಸುವಲ್ಲಿ ಹಿಂದೇಟು ಹಾಕುವುದು ತಪ್ಪು ಎಂದರು.
ಕೆರೆಕಟ್ಟೆ ಮಂಜೂರಾತಿಗೆ ಅವಕಾಶವಿದ್ದ ಸುತ್ತೋಲೆ ರದ್ದು
ರಾಜ್ಯದ ಯಾವ್ಯಾವ ಜಿಲ್ಲೆಗಳಲ್ಲಿ ಇಂತಹ ಪ್ರಕರಣಗಳು ಬಾಕಿ ಇವೆಯೋ ಅವುಗಳನ್ನು ಪರಿಶೀಲಿಸಿ ಪ್ರಕರಣದ ವಸ್ತುಸ್ಥಿತಿ, ಅದು ಎಷ್ಟು ಕಾಲದಿಂದ ಬಾಕಿ ಇದೆ, ಮತ್ತು ಬಾಕಿ ಇರಲು ಕಾರಣವಾಗಿರುವ ಅಂಶಗಳೇನು ಎಂಬ ಬಗ್ಗೆ ಸಮಗ್ರ ವಿವರಗಳನ್ನುಳ್ಳ ವರದಿಯನ್ನು ತುರ್ತಾಗಿ ತಮಗೆ ಸಲ್ಲಿಸುವಂತೆಯೂ ಸಚಿವರು ಹೇಳಿದ್ದಾರೆ.
ಅಲ್ಲದೆ, ಜುಲೈ 30 ಮತ್ತು 31ರಂದು ನಡೆಯಲಿರುವ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗಿನ ಸಭೆಯಲ್ಲಿ ಈ ವಿಚಾರದ ಬಗ್ಗೆ ಗಮನ ಹರಿಸಲಾಗುವುದು ಎಂದು ಸಚಿವ ದೇಶಪಾಂಡೆ ಅವರು ತಿಳಿಸಿದ್ದಾರೆ.