ನೆರವು ಕೋರಿ ಸುಷ್ಮಾ ಸ್ವರಾಜ್ ಗೆ ಆರ್ ವಿ ದೇಶಪಾಂಡೆ ಪತ್ರ
Recommended Video
ಬೆಂಗಳೂರು, ನವೆಂಬರ್ 23: ಇರಾನಿನಲ್ಲಿ ಸಂಕಷ್ಟಕ್ಕೆ ಸಿಲುಕಿಕೊಂಡಿರುವ ರಾಜ್ಯದ ಭಟ್ಕಳ ಮತ್ತು ಕುಮಟಾ ತಾಲ್ಲೂಕಿನ 18 ಮೀನುಗಾರರನ್ನು ಆದಷ್ಟು ಬೇಗ ಸುರಕ್ಷಿತವಾಗಿ ಬಿಡುಗಡೆಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಕೋರಿ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಕೋರಿದ್ದಾರೆ.
ಈ ಬಗ್ಗೆ ಸುಷ್ಮಾ ಅವರಿಗೆ ಗುರುವಾರ ಪತ್ರ ಬರೆದಿರುವ ಸಚಿವರು, 'ದುಬೈನ ಮೀನುಗಾರಿಕೆ ದೋಣಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಇಷ್ಟೂ ಜನ ತಮಗೆ ಗೊತ್ತಿಲ್ಲದೆಯೇ ಇರಾನ್ ನಜಲಪ್ರದೇಶವನ್ನು ಪ್ರವೇಶಿಸಿದ್ದರ ಪರಿಣಾಮವಾಗಿ ಇರಾನ್ ಸೇನೆಯಿಂದ ಬಂಧಿತರಾಗಿದ್ದಾರೆ. ಜುಲೈ 27ರಿಂದಲೂ ಇದೇ ಸ್ಥಿತಿಯಲಿರುವ ಇವರನ್ನೆಲ್ಲ ಆ ದೇಶದ ಕಿಶ್ ದ್ವೀಪದಲ್ಲಿ ಇಡಲಾಗಿದೆ. ಇವರೆಲ್ಲರ ಬಂಧನದಿಂದ ಇವರ ಕುಟುಂಬಗಳು ಕಂಗಾಲಾಗಿದ್ದು, ಇವರ ನೆರವಿಗೆ ಧಾವಿಸಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದೆ,' ಎಂದಿದ್ದಾರೆ.
ಇರಾನ್ ನೌಕಾ ಪಡೆಯ ದಿಗ್ಬಂಧನದಲ್ಲಿ ಉತ್ತರ ಕನ್ನಡ, ಉಡುಪಿ ಮೀನುಗಾರರು
'ಬಂಧಿತರಾಗಿರುವ ಮೀನುಗಾರರೆಲ್ಲ ಬಡಕುಟುಂಬದವರಾಗಿದ್ದು, ಮೀನುಗಾರಿಕೆಯನ್ನು ಮಾತ್ರ ಬಲ್ಲವರಾಗಿದ್ದಾರೆ. ಭಾರತೀಯರು ವಿದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿ ಹಾಕಿಕೊಂಡಾಗಲೆಲ್ಲ ನೆರವಿಗೆ ಧಾವಿಸುವ ಕೇಂದ್ರ ಸರಕಾರವು ಈಗಲೂ ಇವರಿಗೆ ಅಗತ್ಯ ನೆರವು ನೀಡುವುದಲ್ಲದೆ, ಆದಷ್ಟು ಬೇಗ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಬೇಕು'' ಎಂದು ಸಚಿವರು ಮನವಿ ಮಾಡಿಕೊಂಡಿದ್ದಾರೆ.
ನಿಷೇಧವಿದ್ದರೂ ಕರಾವಳಿಯಲ್ಲಿ ಮತ್ತೆ ಕಾಣಿಸಿಕೊಂಡ ಬುಲ್ ಟ್ರಾಲ್ ಮೀನುಗಾರಿಕೆ
ದೇಶಪಾಂಡೆಯವರು ತಮ್ಮ ಪತ್ರದ ಜತೆಗೆ ಬಂಧಿತ ಮೀನುಗಾರರಿಗೆ ಸಂಬಂಧಿಸಿದ ವಿವರಗಳು ಮತ್ತು ಪಾಸ್ಪೋರ್ಟ್ ಸಂಖ್ಯೆಯನ್ನು ಕೂಡ ಸುಷ್ಮಾ ಸ್ವರಾಜ್ ಅವರಿಗೆ ಕಳುಹಿಸಿಕೊಟ್ಟಿದ್ದಾರೆ.