ಮಕ್ಕಳ ಕಳ್ಳರ ವದಂತಿಗೆ ಕಿವಿಗೊಡಬೇಡಿ: ಡಿಸಿಪಿ ರವಿ ಡಿ. ಚನ್ನಣ್ಣನವರ್
Recommended Video
ಬೆಂಗಳೂರು ಮೇ.24 : ರಾಜ್ಯದೆಲ್ಲೆಡೆ ಮಕ್ಕಳ ಕಳ್ಳರ ವದಂತಿ ದಟ್ಟವಾಗುತ್ತಿದೆ. ಈ ಗಾಳಿ ಸುದ್ದಿಗೆ ಬುಧವಾರ ಚಾಮರಾಜಪೇಟೆಯಲ್ಲಿ ಮಕ್ಕಳ ಕಳ್ಳ ಎಂದು ರಾಜಸ್ಥಾನದ ಅಮಾಯಕ ವ್ಯಕ್ತಿಯೊಬ್ಬನನ್ನು ಕೊಂದಿದ್ದಾರೆ.
ಕಳೆದ ವಾರ ಬಳ್ಳಾರಿಯಲ್ಲಿ ಹಬ್ಬಿದ ಈ ಸುದ್ದಿ ರಾಜ್ಯದ ಹಲವು ಜಿಲ್ಲೆಗಳಿಗೆ ವ್ಯಾಪಿಸಿದ್ದು, ಈ ಹಿನ್ನಲೆಯಲ್ಲಿ ವಲಸಿಗರು, ಬುದ್ದಿಮಾಂದ್ಯವರ ಮೇಲೆ ಸಾರ್ವಜನಿಕರು ಅಮಾನವೀಯವಾಗಿ ವರ್ತಿಸುತ್ತಿದ್ದಾರೆ. ಈ ಸುದ್ದಿಗೆ ಬೆಂಗಳೂರಿನಲ್ಲಿಯೂ ಒಬ್ಬ ಅಮಾಯಕ ಜೀವ ಕಳೆದುಕೊಂಡಿದ್ದಾನೆ.
ಬೆಚ್ಚಿಬೀಳಿಸಿದ ಮಕ್ಕಳ ಮಾರಾಟ ಜಾಲ: 6 ಆರೋಪಿಗಳಿಗೆ ಜಾಮೀನು
ಇದೀಗ ಮಕ್ಕಳ ಕಳ್ಳ ಎಂದು ವ್ಯಕ್ತಿಯನ್ನು ಕೊಂದ ಪ್ರಕರಣದಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಡಿಸಿಪಿ ರವಿ ಡಿ. ಚನ್ನಣ್ಣನವರ್ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ.
ರಾಜಸ್ಥಾನದ ಅಮಾಯಕನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 15ರಿಂದ 20 ಜನರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಡಿಸಿಪಿ ರವಿ. ಡಿ. ಚನ್ನಣ್ಣನರ್ ಬೆಂಗಳೂರು ನಗರದಲ್ಲಿ ಮಕ್ಕಳ ಕಳ್ಳರ ಯಾವುದೇ ತಂಡಗಳಿಲ್ಲ. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿದ್ದಾರೆ.
ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಠಾಣೆಗೆ ಮಾಹಿತಿ ನೀಡಿ. ಇದನ್ನು ಬಿಟ್ಟು ಸಾರ್ವಜನಿಕರು ಕಾನೂನು ಕೈಗೆತ್ತಿಕೊಂಡರೆ ನಾವು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.