ನೀವ್ಯಾರು, ನಾನೆಲ್ಲಿದ್ದೀನಿ: ಇದು ನೋಡ್ರೀ ನಾಗರಾಜನ ಹೊಸ ವರಸೆ
ಬೆಂಗಳೂರು, ಮೇ 19: ಇದು ಮಜವಾದ ಸುದ್ದಿ. ಏನದು ಅಂತ ಕೇಳ್ತೀರಾ? ಅಪಹರಣ ಹಾಗೂ ಸುಲಿಗೆ ಕೇಸಿನಲ್ಲಿ ಪೊಲೀಸರ ಆತಿಥ್ಯ ಪಡೆಯುತ್ತಿರುವ ವಿ.ನಾಗರಾಜ್ ವರ್ತನೆಯಲ್ಲಿ ಏರುಪೇರಾಗಿದೆಯಂತೆ. ಒಬ್ಬೊಬ್ಬನೇ ಮಾತನಾಡಿಕೊಂಡು, ಹೆಂಗೆಂಗೋ ಆಡ್ತಿದ್ದಾನೆ ಎಂಬುದು ಸದ್ಯದ ವರ್ತಮಾನ. ನಾನು ಹಾಗೂ ನನ್ನ ಮಕ್ಕಳನ್ನು ಒಂದೇ ಸೆಲ್ ನಲ್ಲಿ ಇರಿಸಿ ಎಂದು ವರಾತ ತೆಗೆದಿದ್ದ ಆತ, ಈಗ ಪ್ಲೇಟ್ ಬದಲಿಸಿದ್ದಾನೆ.
ಮಾನಸಿಕ ಸಮಸ್ಯೆ ಇರುವವನ ಹಾಗೆ, ನೀವ್ಯಾರು-ನಾನು ಎಲ್ಲಿದ್ದೀನಿ ಎಂದು ತನಿಖಾಧಿಕಾರಿಗಳಿಗೆ ಉಲ್ಟಾ ಪ್ರಶ್ನೆ ಹಾಕುತ್ತಿದ್ದಾನಂತೆ. ಎಲ್ಲಿ ದುಡ್ಡಿನ ಬಗ್ಗೆ ನಿಜ ಕಕ್ಕಬೇಕಾಗುತ್ತದೋ ಎಂಬ ಕಾರಣಕ್ಕೆ ಇಷ್ಟೆಲ್ಲ ಡ್ರಾಮಾ ಮಾಡುತ್ತಿದ್ದಾನೆ ಅನ್ನೋದು ತನಿಖಾಧಿಕಾರಿಗಳ ಮಾತು. ಈತನ ಶ್ರೀರಾಮಪುರದ ಮನೆಯಲ್ಲಿ ಕೋಟಿಗಟ್ಟಲೆ ಹಣ ಪತ್ತೆಯಾಗಿತ್ತಲ್ಲಾ, ಅದಕ್ಕೆ ಸಂಬಂಧಿಸಿದ ಹಾಗೆ ಕೆಲವು ಉದ್ಯಮಿಗಳ ಹೆಸರನ್ನು ಈತ ಹೇಳಿದ್ದ.
ಆ ಉದ್ಯಮಿಗಳ ಬಳಿ ವಿಚಾರಿಸುವುದಕ್ಕೆ ಪೊಲೀಸರು ತೆರಳಿದರೆ, ಅದ್ಯಾರ್ರೀ ನಾಗರಾಜ್ ಎನ್ನುತ್ತಿದ್ದಾರಂತೆ ಅವರು. ಅದಿರಲಿ ಈತ ಅದೆಷ್ಟು ಪಾಕಡಾ ಅಂದರೆ, ತನ್ನ ದಂಧೆ ನಡೆಸುವಾಗ ಮನೆಯ ಎಲ್ಲ ಸಿಸಿ ಟಿವಿ ಕ್ಯಾಮೆರಾವನ್ನು ಆಫ್ ಮಾಡುತ್ತಿದ್ದನಂತೆ. ಆ ಕಾರಣಕ್ಕೆ ಈತನ ಮನೆಗೆ ಯಾರ್ಯಾರು ಬರುತ್ತಿದ್ದರು ಎಂದು ಗೊತ್ತಾಗ್ತಾ ಇಲ್ಲ.
ಇನ್ನು ನಾಗರಾಜ ಪೊಲೀಸರ ಬುಟ್ಟಿಗೆ ಬಿದ್ದ ನಂತರ ಆತನ ಪತ್ನಿ ಲಕ್ಷ್ಮಿ ನಾಪತ್ತೆಯಾಗಿದ್ದಾರೆ. ಕೊನೆಯದಾಗಿ ಅವರ ಮೊಬೈಲ್ ಧರ್ಮಸ್ಥಳದಲ್ಲಿ ಸ್ವಿಚ್ ಆಫ್ ಆಗಿದೆ. ಈಗ ಅಲ್ಲಿಗೂ ಪೊಲೀಸರು ಹೋಗಿದ್ದಾರೆ. ಆಕೆ ಸಿಕ್ಕಿದರೆ ಇನ್ಯಾವ ಹಣದ ಮಾಹಿತಿ, ಜಾಗದ ಸಂಗತಿ ಬೆಳಕಿಗೆ ಬರುತ್ತದೋ ಎನ್ನುತ್ತಾರೆ ತನಿಖಾಧಿಕಾರಿಗಳು.