ಭೂಗತ ಜಗತ್ತಿನಲ್ಲಿ ಬಿತ್ತು ಮತ್ತೊಂದು ಹೆಣ: ರೌಡಿ ಜಯಂತ್ ಕೊಲೆ
ಬೆಂಗಳೂರು, ಜೂನ್ 10: ರೌಡಿಶೀಟರ್ ಬರ್ಬರವಾಗಿ ಕೊಲೆಯಾದ ಘಟನೆ ಶನಿವಾರ ಮಧ್ಯರಾತ್ರಿ ನಗರದ ಕೋಣನಕುಂಟೆ ಕ್ರಾಸ್ ಬಳಿ ನಡೆದಿದೆ.
ವಸಂತನನಗರದ ರೌಡಿ ಕವಳನ ಬಾಮೈದ ರಾಕೇಶ್ ಹತ್ಯೆ ಬೆನ್ನಲ್ಲೇ ಬೆಂಗಳೂರಿನಲ್ಲಿ ಮತ್ತೊಬ್ಬ ರೌಡಿಶೀಟರ್ ಜಯಂತ್ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮಧ್ಯರಾತ್ರಿ 2:30ರ ಸುಮಾರಿಗೆ ಈ ಘಟನೆ ನಡೆದಿದೆ. ಜಯಂತ್ (28) ಮೃತ ರೌಡಿಶೀಟರ್ ಆಗಿದ್ದು, ಈತ ಜಯಂತ್ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿಶೀಟರ್ ಪಟ್ಟಿಗೆ ಸೇರಿದವನಾಗಿದ್ದಾನೆ.
ಗೌರಿ ಲಂಕೇಶ್ ಹತ್ಯೆ ಆರೋಪಿ ಕಲಬುರ್ಗಿ ಕೊಲೆಯಲ್ಲೂ ಭಾಗಿ?
ಜಯಂತ್ ಸ್ನೇಹಿತರೊಂದಿಗೆ ಪಾರ್ಟಿಗೆ ಹೋಗಿದ್ದ, ಮದ್ಯಪಾನ ಮಾಡಿದ್ದ. ಪಾರ್ಟಿ ಮುಗಿಸಿಕೊಂಡು ಬಾರಿನಿಂದ ಹೊರಬಂದ ಜಯಂತನನ್ನು ಹಿಂಬಾಲಿಸಿದ ದುಷ್ಕರ್ಮಿಗಳು, ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ತೀವ್ರ ಹಲ್ಲೆಗೊಳಗಾದ ಜಯಂತ್ ಕುಸಿದು ಬಿದ್ದಿದ್ದು, ರಸ್ತೆ ಮಧ್ಯದಲ್ಲಿಯೇ ಕೊಚ್ಚಿ ಕೊಲೆ ಮಾಡಿದ್ದಾರೆ. ಈ ಕೃತ್ಯದಲ್ಲಿ ಆತನ ಸ್ನೇಹಿತರು ಭಾಗಿಯಾಗಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ.
ಸ್ಥಳಕ್ಕೆ ಸುಬ್ರಹ್ಮಣ್ಯಪುರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ಕಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ಜಯಂತ್ ಮೃತ ದೇಹವನ್ನು ಸಾಗಿಸಲಾಗಿದೆ. ಮೃತ ಜಯಂತ್ ವಿರುದ್ಧ ಕೊಲೆಗೆ ಯತ್ನ, ದರೋಡೆ, ಸುಲಿಗೆ ಸೇರಿದಂತೆ ಒಟ್ಟು 8 ಪ್ರಕರಣ ದಾಖಲಾಗಿದ್ದವು. ಜಯಂತ್ ಮೇಲೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ರೌಡಿ ಪಟ್ಟಿ ತೆರೆಯಲಾಗಿತ್ತು. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.