ಎ.ಸಿ.ಪಿ ಪ್ರಕಾಶ್ ಅವರಿಂದ ರೌಡಿಗಳಿಗೆ ಖಡಕ್ ವಾರ್ನಿಂಗ್
ಬೆಂಗಳೂರು, ನವೆಂಬರ್ 15 ; ಚಂದ್ರ ಲೇಔಟ್ ರೌಡಿಗಳಿಗೆ ಇಂದು (ನವೆಂಬರ್ 15) ಪೊಲೀಸರು ಸರಿಯಾಗಿ ಚಾರ್ಜ್ ಮಾಡಿದ್ದಾರೆ.
ಚಂದ್ರ ಲೇಔಟ್ ವ್ಯಾಪ್ತಿಯಲ್ಲಿನ ರೌಡಿ ಶೀಟರ್ ಗಳ 'ರೌಡಿ ಪೆರೇಡ್' ಮಾಡಿಸಿದ ಪೊಲೀಸರು ರೌಡಿಗಳಿಗೆಲ್ಲ ಖಡಕ್ ವಾರ್ನಿಂಗ್ ಕೊಟ್ಟರು.
ಎಸಿಪಿ ಪ್ರಕಾಶ್ ಕಣ್ಗಾವಲಿನಲ್ಲಿ ನಡೆದ ರೌಡಿ ಪೆರೇಡ್ ನಲ್ಲಿ ಸುಮಾರು 50 ಮಂದಿ ರೌಡಿ ಶೀಟರ್ ಗಳು ಭಾಗವಹಿಸಿದ್ದರು. ಎಲ್ಲ ರೌಡಿ ಶೀಟರ್ ಗಳಿಗೂ ಖಡಕ್ ವಾರ್ನಿಂಗ್ ನೀಡಿದ ಎಸಿಪಿ ಪ್ರಕಾಶ್ ಅವರು ಇನ್ನು ಮುಂದೆ ರಿಯಲ್ ಎಸ್ಟೇಟ್, ಸಾರ್ವಜನಿಕರ ಬಳಿ ಹಣ ವಸೂಲಿ, ಧಮ್ಕಿ, ಇನ್ನಿತರೆ ರೌಡಿ ಚಟುವಟಿಕೆಗಳನ್ನು ಬಿಟ್ಟಬಿಡಬೇಕೆಂದು ಎಚ್ಚರಿಕೆ ನೀಡಿದರು.
ರೌಡಿ ಚಟುವಟಿಕೆಯಲ್ಲಿ ಗುರುತಿಸಿಕೊಳ್ಳುವ ರೌಡಿ ಶೀಟರ್ ಗಳನ್ನು ಗಡಿಪಾರು ಮಾಡುವುದಾಗಿ ಅವರು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.
ಇತ್ತೀಚೆಗೆ ನಗರದಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರೌಡಿ ಪೆರೆಡ್ ನಡೆಸಿ ಎಚ್ಚರಿಕೆ ನೀಡಲಾಗುತ್ತಿದೆ. ಚುನಾವಣೆ ಕೂಡ ಸಮೀಪದಲ್ಲಿರುವ ಕಾರಣ ರೌಡಿಗಳು ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದಿರಲೆಂದು ಪೊಲೀಸರು ರೌಡಿ ಪೆರೆಡ್ ಮಾಡಿಸುತ್ತಿದ್ದಾರೆ.