ನಮ್ಮ ಬೆಂಗಳೂರು ಪ್ರಶಸ್ತಿ ಸ್ವೀಕರಿಸಲು ರೂಪಾ ನಿರಾಕರಣೆ
ಬೆಂಗಳೂರು, ಮಾರ್ಚ್ 24 : ಐಪಿಎಸ್ ಅಧಿಕಾರಿ ರೂಪಾ ಮೌದ್ಗೀಲ್ ಅವರು ನಮ್ಮ ಬೆಂಗಳೂರು ಫೌಂಡೇಷನ್ ನೀಡುವ 'ನಮ್ಮ ಬೆಂಗಳೂರು ಪ್ರಶಸ್ತಿ'ಯನ್ನು ಸ್ವೀಕರಿಸಲು ನಯವಾಗಿಯೇ ತಿರಸ್ಕರಿಸಿದ್ದಾರೆ.
ಈ ಕುರಿತು, ಹೋಂ ಗಾರ್ಡ್ಸ್ ಮತ್ತು ಸಿವಿಲ್ ಡಿಫೆನ್ಸ್ನ ಐಜಿಪಿ ಆಗಿರುವ ಅವರು, ನಮ್ಮ ಬೆಂಗಳೂರು ಫೌಂಡೇಷನ್ಗೆ ಶನಿವಾರ ಪತ್ರ ಬರೆದಿದ್ದು, ತಾವು ಸರಕಾರಿ ಅಧಿಕಾರಿಯಾಗಿರುವುದರಿಂದ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಲು ಮನಸ್ಸು ಒಪ್ಪುತ್ತಿಲ್ಲ ಎಂದು ತಿಳಿಸಿದ್ದಾರೆ.
ಬೆಂಗಳೂರಿನ ಅಭಿವೃದ್ಧಿಗಾಗಿ ಶ್ರಮವಹಿಸಿ ದುಡಿಯುವ ನಾನಾ ಕ್ಷೇತ್ರಗಳಲ್ಲಿ ತೊಡಗಿಕೊಂಡಿರುವ ವ್ಯಕ್ತಿಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಪ್ರಶಸ್ತಿಯನ್ನು ಮಾರ್ಚ್ 25ರಂದು ಜಯನಗರದ ಎನ್ಎಂಕೆಆರ್ವಿ ಕಾಲೇಜಿನ ಮಂಗಳ ಸಭಾಂಗಣದಲ್ಲಿ ಸಂಜೆ 4.30ಕ್ಕೆ ನೀಡಲಾಗುತ್ತಿದೆ.
ರಾಜ್ಯಸಭೆಗೆ ಕರ್ನಾಟಕದಿಂದ ಹೊಸದಾಗಿ ಆಯ್ಕೆಯಾಗಿರುವ ರಾಜೀವ್ ಚಂದ್ರಶೇಖರ್ ಅವರ ನೇತೃತ್ವದಲ್ಲಿ 'ನಮ್ಮ ಬೆಂಗಳೂರು ಫೌಂಡೇಷನ್' ಈ ಪ್ರಶಸ್ತಿ ನೀಡುತ್ತಿದೆ. ರೂಪಾ ಮೌದ್ಗೀಲ್ ಅವರು ಬರೆದ ಪತ್ರದ ಸಾರಾಂಶ ಕೆಳಗಿನಂತಿದೆ.
'ನಮ್ಮ ಬೆಂಗಳೂರು ಪ್ರಶಸ್ತಿ'ಗೆ ನನ್ನನ್ನು ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳು. ಆದರೆ, ಈ ಪ್ರಶಸ್ತಿ ಭಾರೀ ಮೊತ್ತ ಒಳಗೊಂಡಿರುವುದೆ ಮತ್ತು ಇದನ್ನು ಸ್ವೀಕರಿಸಲು ನನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ.
ಅಲ್ಲದೆ, ಪ್ರತಿ ಸರಕಾರಿ ನೌಕರರು ತಟಸ್ಥ ನೀತಿ ಪಾಲಿಸಬೇಕು ಮತ್ತು ಅರೆ-ರಾಜಕೀಯ ಸಂಸ್ಥೆ, ಸಂಘಟನೆಗಳಿಂದ ಸಮಾನ ದೂರನ್ನು ಕಾಪಾಡಿಕೊಳ್ಳಬೇಕು ನಿರೀಕ್ಷಿಸಲಾಗುತ್ತದೆ. ಆಗ ಮಾತ್ರ ಸಾರ್ವಜನಿಕರಿಂದ ಸ್ವಚ್ಛ ಮತ್ತು ಸ್ವಸ್ಥ ವ್ಯಕ್ತಿತ್ವವನ್ನು ಕಾಪಾಡಿಕೊಳ್ಳಲು ಸಾಧ್ಯ. ಅಲ್ಲದೆ, ಚುನಾವಣೆ ಬೇರೆ ಹತ್ತಿರವಿರುವುದರಿಂದ ಇನ್ನೂ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತದೆ.
ನೀವು ಹಲವಾರು ವರ್ಷಗಳಿಂದ ಜನರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದಕ್ಕಾಗಿ ನಿಮ್ಮನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ನಿಮ್ಮ ಫೌಂಡೇಷನ್ನ ಇಂಥ ಸಾರ್ವಜನಿಕ ಕೇಂದ್ರಿತ ಮತ್ತು ಸಾಮಾಜಿಕ ಕಳಕಳಿಯ ಕೆಲಸಕ್ಕೆ ನನ್ನ ಸಹಕಾರ ಮತ್ತು ಬೆಂಬಲ ಯಾವತ್ತಿಗೂ ಇದ್ದೇ ಇರುತ್ತದೆ. ಆದರೆ, ಪ್ರಶಸ್ತಿ ಸ್ವೀಕರಿಸದಿರುವುದಕ್ಕೆ ದಯವಿಟ್ಟು ಕ್ಷಮಿಸಿರಿ.
ಇಂತಿ
ನಿಮ್ಮ
ವಿಶ್ವಾಸಿ
ರೂಪಾ
ಮೌದ್ಗೀಲ್