ಗೌರಿ ಲಂಕೇಶ್ ಹತ್ಯೆ, ನಿವೃತ್ತ ಎಸಿಪಿ ಸಂಗ್ರಾಮ್ ಸಿಂಗ್ ವಿಶ್ಲೇಷಣೆ
ಬೆಂಗಳೂರು, ಸೆಪ್ಟೆಂಬರ್ 8: "ಮಂಗಳವಾರ ರಾತ್ರಿ ಎಂಟೂ ಮೂವತ್ತರ ಹೊತ್ತಿಗೆ ಸರ್, ಗೌರಿ ಲಂಕೇಶ್ ಅವರ ಶೂಟ್ ಔಟ್ ಆಗಿದೆ. ಯಾರೋ ಹತ್ಯೆ ಮಾಡಿದ್ದಾರೆ ಎಂದು ನನಗೆ ಟಿವಿ ಪತ್ರಕರ್ತರೊಬ್ಬರ ಮೆಸೇಜ್ ಬಂತು. ಬಿಡಿ, ಯಾರೋ ನಕ್ಸಲೈಟೇ ಮಾಡಿದ್ದಾರೆ ಅಂತ ನಾ ಹೇಳಿದೆ" ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದವರು ನಿವೃತ್ತ ಎಸಿಪಿ ಸಂಗ್ರಾಮ್ ಸಿಂಗ್.
ಗೌರಿ ಲಂಕೇಶ್ ಹತ್ಯೆ ತನಿಖೆಯಲ್ಲಿ 7 ಕಡೆ ಹಾದಿ ತಪ್ಪಿದ ಪೊಲೀಸರು
ಈ ರೀತಿಯ ಕೊಲೆಗಳಲ್ಲಿ ಅಪರಾಧಿಗಳನ್ನು ಹಿಡಿಯುವ ವಿಚಾರ, ಯಾವ ಆಯಾಮದಲ್ಲಿ ತನಿಖೆ ಆಗಬೇಕು ಎಂದು ತಿಳಿದುಕೊಳ್ಳುವ ಕುತೂಹಲದಿಂದ ಸಂಗ್ರಾಮ್ ಸಿಂಗ್ ಅವರನ್ನು ಒನ್ಇಂಡಿಯಾ ಕನ್ನಡ ಸಂಪರ್ಕಿಸಿದಾಗ ಕೆಲವು ಸೂಕ್ಷ್ಮ ವಿಚಾರಗಳನ್ನು, ತನಿಖೆ ಸಾಗಬೇಕಾದ ಹಾದಿಯನ್ನು ತಮ್ಮ ಅನುಭವದ ಆಧಾರದಲ್ಲಿ ಹಂಚಿಕೊಂಡರು.
ತಮ್ಮ ಕಾಲೇಜು ದಿನಗಳಲ್ಲಿ ಇಂಗ್ಲಿಷ್ ಮೇಷ್ಟ್ರಾಗಿದ್ದ ಪಿ.ಲಂಕೇಶ್ ರ ಮಗಳ ಹತ್ಯೆ ಬಗ್ಗೆ ಸಿಂಗ್ ಅವರಿಗೆ ತೀರಾ ವಿಷಾದವಿದೆ. ಅಪರಾಧಿಗಳನ್ನು ಹಿಡಿಯಲು ಆರಂಭದಲ್ಲಿ ಆಗಿರುವ ಹಿನ್ನಡೆ ಹಾಗೂ ತನಿಖೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಬೇಕಾದರೆ ಆಗಬೇಕಾದ ಕೆಲಸ ಏನು ಎಂಬ ಬಗ್ಗೆ ಕೂಡ ಅವರು ಮಾತನಾಡಿದ್ದಾರೆ.
ಗೌರಿ ಲಂಕೇಶ್ ಹತ್ಯೆ, ಶಾಸಕ ಡಿ.ಎನ್.ಜೀವರಾಜ್ ವಿಚಾರಣೆ
ಇಲ್ಲಿ ವ್ಯಕ್ತವಾಗಿರುವುದು ಸಂಗ್ರಾಮ್ ಸಿಂಗ್ ಅವರ ಅಭಿಪ್ರಾಯ. ಅಂತಿಮ ಷರಾ ಅಂತಲ್ಲ. ಅವರು ಏನು ಹೇಳಿದರು ಎಂದು ತಿಳಿಯಲು ಮುಂದೆ ಓದಿ.
ನಕ್ಸಲರೆಡೆಗೆ ಬೊಟ್ಟು
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಯಿತು ಅಂದಾಕ್ಷಣ ಅದನ್ನು ನಕ್ಸಲರೇ ಮಾಡಿಸಿರಬೇಕು ಎಂಬುದು ತುಂಬ ಪ್ರಬಲವಾಗಿ ಅನ್ನಿಸಿತು. ಏಕೆಂದರೆ ಯಾವುದೇ ನಕ್ಸಲರು ತಮ್ಮ ಜತೆಗಾರರು, ಜತೆಗಾರ್ತಿಯರನ್ನು ಯಾವುದೇ ಸಂಸ್ಥೆಗೆ ಶರಣಾಗತಿ ಮಾಡಿಸುವುದು ಇಷ್ಟಪಡುವುದಿಲ್ಲ. ಇದರಿಂದ ಚಳವಳಿಯೇ ದುರ್ಬಲವಾಗುತ್ತದೆ. ಕೆಲ ಬಾರಿ ಉಳಿದವರ ಜೀವಕ್ಕೂ ಕುತ್ತಾಗುತ್ತದೆ.
ಆದ್ದರಿಂದ ನಕ್ಸಲರನ್ನು ಮುಖ್ಯ ವಾಹಿನಿಯೊಳಗೆ ಕರೆತರುವ ಪ್ರಯತ್ನವನ್ನು ಗೌರಿ ಮಾಡುತ್ತಿದ್ದರು. ಆ ಸಿಟ್ಟಿನಲ್ಲೇ ಕೊಂದಿರುವ ಸಾಧ್ಯತೆಗಳು ಹೆಚ್ಚಿವೆ.
ಮೂರ್ನಾಲ್ಕು ಮಂದಿ, ತಿಂಗಳು ಕಾಲ ಯೋಜನೆ
ಇಂಥ ಕೊಲೆಗಳು ರಾತ್ರೋ ರಾತ್ರಿ ನಡೆಯುವುದಿಲ್ಲ. ಅವರು ಮೂರ್ನಾಲ್ಕು ಮಂದಿ ಇರಬೇಕು. ತಿಂಗಳ ಕಾಲ ಬೆಂಗಳೂರಿನಲ್ಲೇ ಉಳಿದು ಹತ್ಯೆಗೆ ಸಂಚು ರೂಪಿಸಿದ್ದಾರೆ. ಆ ನಂತರ ಒಂದು ದಿನ ನಿಗದಿ ಮಾಡಿಕೊಂಡು ಈ ಕೃತ್ಯ ಎಸಗಿದ್ದಾರೆ.
ಗೌರಿ ಲಂಕೇಶ್ ಹತ್ಯೆಯ ಕಡೆಯ ಕ್ಷಣಗಳು ಹೇಗಿದ್ದವು?
ಗುಪ್ತದಳ ವಿಭಾಗದ ವೈಫಲ್ಯ
ನಮ್ಮ ಇಂಟೆಲಿಜೆನ್ಸಿ ತಂಡ ಎಷ್ಟು ದುರ್ಬಲವಾಗಿದೆ ಅಂದರೆ, ಅನುಮಾನ ಇರುವ ವ್ಯಕ್ತಿಗಳ ಮೇಲೆ ಒಬ್ಬ ಕಾನ್ ಸ್ಟೇಬಲ್ ನ ಕಣ್ಣಿಡು ಅಂತ ಬಿಟ್ಟಿರುತ್ತಾರೆ. ಆತ ಏನು ಮಾಡ್ತಿದ್ದಾನೆ ಎಂದು ಕೇಳಿದರೆ, ಬೆಳಗ್ಗೆ ಎಂಟು-ಒಂಬತ್ತು-ಹತ್ತು ಗಂಟೆ ಯಾವಾಗಲಾದರೂ, ಪೇಪರ್ ಓದ್ತಿದ್ದಾನೆ ಎಂಬ ಉತ್ತರವೇ ಬರುತ್ತದೆ. ತಮ್ಮ ಕೆಲಸವನ್ನು ಇವರು ಗಂಭೀರವಾಗಿ ಮಾಡಿರಲ್ಲ.
ಗೌರಿ ಹತ್ಯೆಯ ಮಾಹಿತಿಗಳಿದ್ದರೆ ಹಂಚಿಕೊಳ್ಳಿ, ಎಸ್ಐಟಿಯಿಂದ ಆಹ್ವಾನ
ನಲವತ್ತೆಂಟು ಗಂಟೆಯಲ್ಲಿ ಸುಳಿವು ಸಿಗಬೇಕು
ಇನ್ನು ಯಾವುದೇ ಕೊಲೆಯಾಗಲಿ ನಲವತ್ತೆಂಟು ಗಂಟೆಗಳಲ್ಲಿ ಹತ್ಯೆ ಮಾಡಿದವರ ಸುಳಿವು ಸಿಕ್ಕಿದರೆ ನೀವು ಪ್ರಕರಣದಲ್ಲಿ ಯಶಸ್ಸು ಪಡೆದ ಹಾಗೆ. ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಕೊಲೆಗಾರ ಸಿಗುವುದು ಅನುಮಾನ ಅಂತ ನನಗೆ ಅನಿಸುತ್ತಿದೆ. ಏಕೆಂದರೆ ಕೊಲೆಯಾಗಿ ನಲವತ್ತೆಂಟು ಗಂಟೆ ಕಳೆದುಹೋಯಿತು. ಇನ್ನು ತುಂಬ ಕಷ್ಟ.
ಗೌರಿ, ದಾಬೋಲ್ಕರ್, ಕಲಬುರ್ಗಿ ಹತ್ಯೆ : 7.65 ಎಂಎಂ ಪಿಸ್ತೂಲ್ ಬಳಕೆ?
ಕುಟುಂಬದವರು ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು
ಗೌರಿ ಲಂಕೇಶ್ ಕುಟುಂಬದವರು ತುಂಬ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಮೊದಲಿಗೆ ಅದು ನಿಲ್ಲಿಸಬೇಕು. ಹಾಗೆ ಮಾಡುವುದರಿಂದ ಈ ಕೊಲೆ ಮಾಡಿದ ವ್ಯಕ್ತಿ, ಅಂಥ ವ್ಯಕ್ತಿ ಹಿಂದೆ ಇದ್ದಿರಬಹುದಾದ ಸಂಘಟನೆಗೆ ಹೆಚ್ಚು ಅನುಕೂಲ ಆಗುವುದರಿಂದ ಹೇಳಿಕೆಗಳನ್ನು ನೀಡುವುದು ನಿಲ್ಲಿಸಬೇಕು.
ಗೌರಿ ಹತ್ಯೆ : ಚಿಕ್ಕಮಗಳೂರಿನಲ್ಲಿ ಶಂಕಿತ ವ್ಯಕ್ತಿ ವಶಕ್ಕೆ
ರಾಜ್ಯ ಸರಕಾರದ ಸರಿಯಾದ ನಡೆ
ರಾಜ್ಯ ಸರಕಾರ ಉನ್ನತ ಅಧಿಕಾರಿಗಳನ್ನು ಒಳಗೊಂಡ ಅತ್ಯುತ್ತಮ ತಂಡವನ್ನೇ ರಚಿಸಿದೆ. ಇದನ್ನು ಮೆಚ್ಚಲೇಬೇಕು. ಆದರೆ, ಸರಗಳ್ಳರನ್ನು ಹಿಡಿದ, ಕೊಲೆಗಾರರನ್ನು ಜೈಲಿಗೆ ಕಳುಹಿಸಿದ ಅಧಿಕಾರಿಗಳ ಜತೆಗೆ ನಕ್ಸಲ್ ಹೋರಾಟದ ವಿರುದ್ಧ ಕೆಲಸ ಮಾಡಿದ ಅಧಿಕಾರಿಗಳೂ ಇರಬೇಕು. ಈ ತಂಡದಲ್ಲಿ ಅಂಥ ಎಷ್ಟು ಮಂದಿ ಇದ್ದಾರೆ?
ಸಿಸಿಟಿವಿ ಫೂಟೇಜು ವಿದೇಶಕ್ಕೆ ಕಳಿಸಿ
ಸಿಸಿಟಿವಿ ಫೂಟೇಜು ಇಟ್ಟುಕೊಂಡು ಯಾರೋ ಚಿತ್ರಕಾರರನ್ನು ಕರೆಸಿದೆ. ಶಂಕಿತ ಕೊಲೆಗಾರನ ಚಿತ್ರ ಬರೆಸಿದೆ ಎಂಬುದೆಲ್ಲ ಈ ಪ್ರಕರಣದಲ್ಲಿ ಕೆಲಸಕ್ಕೆ ಬರಲ್ಲ. ಅದರ ಬದಲು ಈ ಫೂಟೇಜುಗಳನ್ನು ವಿದೇಶಕ್ಕೆ ಕಳಿಸಿ, ಅಲ್ಲಿರುವ ಅತ್ಯಾಧುನಿಕ ತಂತ್ರಜ್ಞಾನದ ಸಹಾಯ ಪಡೆಯಬೇಕು.
ಗೌರಿ ಲಂಕೇಶ್ ಹತ್ಯೆ, 500 ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ
ನಕ್ಸಲರ ಮಾಹಿತಿಗಳು ಹೊರಬರಲಾರಂಭಿಸಿದ್ದವು
ಗೌರಿ ಲಂಕೇಶ್ ಅವರು ಕೆಲವು ನಕ್ಸಲರನ್ನು ಅಲ್ಲಿಂದ ಹೊರಬರುವಂತೆ ಮಾಡಿದ್ದರು. ದಕ್ಷಿಣ ಕನ್ನಡ ಕಾಡುಗಳಲ್ಲಿ ಅಡಗಿಕೊಂಡಿರುವ ನಕ್ಸಲರ ಮಾಹಿತಿಗಳು ಹೊರಬರಲಾರಂಭಿಸಿದ್ದವು. ನೆಲ್ಯಾಡಿ ಅಲ್ಲಿ ಇಲ್ಲಿ ಇರೋದೆಲ್ಲ ಗೊತ್ತಾಗಿದೆ. ಮಾಹಿತಿ ಬಯಲಾಗುತ್ತಲ್ಲಾ ಎಂಬ ಭಯ ಇರುತ್ತದೆ. ಅಲ್ಲಿ ಎರಡು ಗುಂಪುಗಳಿವೆ, ನಕ್ಸಲರು ಹಾಗೂ ಮಾವೋವಾದಿಗಳು. ನಿಮಗೆ ಗೊತ್ತಿರಲಿ, ನಕ್ಸಲರಿಗಿಂತ ಮಾವೋವಾದಿಗಳು ಅಪಾಯಕಾರಿ.
ಶಾರ್ಪ್ ಶೂಟರ್ ಕೃತ್ಯ, ಅನುಭವಸ್ಥ ಇದ್ದಂತಿಲ್ಲ
ಗೌರಿ ಲಂಕೇಶ್ ರ ಹತ್ಯೆ ರೀತಿಯನ್ನು ಗಮನಿಸಿದರೆ ಇದು ಶಾರ್ಪ್ ಶೂಟರ್ ನ ಕೃತ್ಯ ಇದ್ದ ಹಾಗಿದೆ. ಆದರೆ ಆತ ಅನುಭವಸ್ಥ ಇದ್ದಂತಿಲ್ಲ. ನನ್ನ ಅನುಭವದಿಂದ ಹೇಳಬೇಕು ಅಂದರೆ ಕೊಲೆಗಾರರನ್ನು ಹಿಡಿಯುವುದು ಸುಲಭವಿಲ್ಲ.