ಕೃಷಿ ವಿವಿಗಳ ಸಂಶೋಧನೆಯ ಫಲ ರೈತರನ್ನೂ ತಲುಪಲಿ: ಸಿಎಂ
ಬೆಂಗಳೂರು, ಜನವರಿ 19: ಕೃಷಿ ವಿಶ್ವ ವಿದ್ಯಾಲಯಗಳಲ್ಲಿ ಸಂಶೋಧನೆ ನಡೆಯುವುದರ ಜತೆಗೆ ಅದರ ಫಲ ರೈತರನ್ನು ತಲುಪುವಂತೆ ಮಾಡಿದಾಗ ಮಾತ್ರ ಸಂಶೋಧನೆಗಳು ಸಾರ್ಥಕವಾಗಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಕೃಷಿ ಇಲಾಖೆ ವತಿಯಿಂದ ಬೆಂಗಳೂರು ಅರಮನೆ ಆವರಣದಲ್ಲಿ ಆಯೋಜಿಸಿರುವ ಸಿರಿಧಾನ್ಯಗಳ ಅಂತಾರಾಷ್ಟ್ರೀಯ ವಾಣಿಜ್ಯ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದ ಅವರು, ಭಾರತ ಕೃಷಿ ಪ್ರಧಾನವಾದ ದೇಶ. ನಮ್ಮ ದೇಶದಲ್ಲಿ ವೈವಿಧ್ಯಮಯ ಹವಾಮಾನವಿದೆ. ಅದೇ ರೀತಿ ವಿವಿಧ ಬೆಳೆಗಳನ್ನೂ ನಾವು ಬೆಳೆಯುತ್ತೇವೆ. ಬೆಳೆಯುವ ರೈತರಿಗೆ ಕೃಷಿ ಹೆಚ್ಚು ಆಕರ್ಷಣೀಯವಾಗಬೇಕು. ಕೃಷಿ ಅವಲಂಬಿತರ ಆದಾಯ ಹೆಚ್ಚಾಗಬೇಕು. ಇದಕ್ಕಾಗಿ ಹೊಸ ಹೊಸ ಅವಿಷ್ಕಾರಗಳ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
60 ವರ್ಷಗಳಿಂದೀಚೆಗೆ ಆಹಾರದಲ್ಲಿ ಸ್ವಾವಲಂಬನೆ ಸಾಧಿಸಲು ಹಾಗೂ ಆಹಾರ ಪದಾರ್ಥಗಳ ರಫ್ತಿಗಾಗಿ ಕೃಷಿಯಲ್ಲಿ ಹಳೆಯ ಪದ್ಧತಿಯನ್ನು ಬಿಟ್ಟು ಹೊಸ ಪದ್ಧತಿಯೆಡೆಗೆ ಸಾಗುತ್ತಿದ್ದೇವೆ. ನಾವು ಸಣ್ಣವರಿದ್ದಾಗ ಕೃಷಿಯಲ್ಲಿ ರಾಸಾಯನಿಕಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತಿರಲಿಲ್ಲ.
ಈಗ ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ. ಆದರೆ, ನಮ್ಮ ಪೂರ್ವಿಕರು ಹೆಚ್ಚಾಗಿ ಸಾವಯವ ಕೃಷಿಯನ್ನೇ ಮಾಡುತ್ತಿದ್ದರು. ಇಳುವರಿ ಹೆಚ್ಚಿಸಲು ಹೆಚ್ಚಾಗಿ ರಾಸಾಯನಿಕಗಳನ್ನು ಬಳಸಲಾಯಿತು. ಇದರಿಂದ ನಾವು ಆಹಾರದ ಭದ್ರತೆ ಸಾಧಿಸಿದ್ದೇವೆ. ಹಾಗೆಯೇ ಅದರಿಂದ ಆದ ದುಷ್ಪರಿಣಾಮಗಳ ಕಡೆಗೂ ಕಣ್ಣು ಹಾಯಿಸಬೇಕು. ಆ ಕುರಿತು ಗಂಭೀರವಾಗಿ ಆಲೋಚಿಸುವ ಸ್ಥಿತಿಗೆ ಬಂದಿದ್ದೇವೆ.
ಜನಸಂಖ್ಯೆ ಹೆಚ್ಚಾಗುತ್ತಿದ್ದಂತೆ ಭೂಮಿಯ ಇಳುವರಿಯೂ ಕಡಿಮೆಯಾಗುತ್ತಿದೆ. ಈ ಹಿಂದೆ ಹತ್ತಾರು ಎಕರೆ ಜಮೀನು ಹೊಂದಿದವರ ಬಳಿ ಈಗ 10-20 ಗುಂಟೆ ಇದೆ. ಕೃಷಿ ಲಾಭದಾಯಕ ಅಲ್ಲ ಎಂಬ ಕಾರಣಕ್ಕೆ ಜನ ಹಳ್ಳಿ ಬಿಟ್ಟು ಪಟ್ಟಣ ಸೇರುತ್ತಿದ್ದಾರೆ. ಬೇರೆ ಬೇರೆ ಉದ್ಯೋಗಗಳನ್ನು ನೋಡಿಕೊಳ್ಳುತ್ತಿದ್ದಾರೆ. ವಿದ್ಯಾವಂತರು ಉದ್ಯೋಗ ಅರಸಿ ಹೋಗುವುದು ಬೇರೆ. ಆದರೆ, ಕೃಷಿ ಅವಲಂಬಿತರೇ ವಲಸೆ ಹೋಗುತ್ತಿದ್ದಾರೆ.
ಕೃಷಿಯ ವಾಸ್ತವಿಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಅದನ್ನು ಅಭಿವೃದ್ಧಿಪಡಿಸುವುದು, ಯುವಕರ ವಲಸೆ ತಪ್ಪಿಸುವುದು, ಕೃಷಿ ಅವಲಂಬನೆಯನ್ನು ಹೆಚ್ಚಿಸುವುದರ ಕಡೆಗೆ ಹೆಚ್ಚಿನ ಗಮನ ಹರಿಸುವ ಸನ್ನಿವೇಶ ಈಗ ನಿರ್ಮಾಣವಾಗಿದೆ.
ಕರ್ನಾಟಕ ಪದೇ ಪದೇ ಬರಗಾಲಕ್ಕೆ ತುತ್ತಾಗುವ ರಾಜ್ಯವಾಗಿದೆ. ಕಳೆದ ಹದಿನಾರು ವರ್ಷದಲ್ಲಿ ಹದಿಮೂರು ವರ್ಷ ಬರಗಾಲ ಇತ್ತು. ಕಳೆದ ಮೂರು ವರ್ಷವಂತೂ ಭೀಕರ ಬರಗಾಲವನ್ನು ನಾವು ಎದುರಿಸಿದ್ದೇವೆ. ಇದರಿಂದ ಅಂತರ್ಜಲ ಮಟ್ಟವೂ ಕುಸಿದಿದೆ.
ಹೀಗಾಗಿಯೇ ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲು ನಾವು ನಿರ್ಧರಿಸಿದ್ದೇವೆ. ದೇಶದಲ್ಲೇ ಮೊದಲ ಬಾರಿಗೆ 2004ರಲ್ಲಿ ಸಾವಯವ ಕೃಷಿ ನೀತಿ ಘೋಷಣೆ ಮಾಡಿದ ರಾಜ್ಯ ನಮ್ಮದು. 2017ರಲ್ಲಿ ಪರಿಷ್ಕøತ ನೀತಿಯನ್ನು ಜಾರಿಗೊಳಿಸಿದ್ದೇವೆ.
ಕೃಷಿ ಸಚಿವ ಕೃಷ್ಣ ಬೈರೇಗೌಡರು ಸಾವಯವ ಕೃಷಿ ಪದ್ಧತಿ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿಯೇ ಎರಡೂವರೆ ಸಾವಿರ ಹೆಕ್ಟೇರ್ನಲ್ಲಿದ್ದ ಸಾವಯವ ಕೃಷಿ ಈಗ ಒಂದು ಲಕ್ಷ ಹೆಕ್ಟೇರ್ಗೂ ಹೆಚ್ಚಿನ ಪ್ರದೇಶಕ್ಕೆ ವಿಸ್ತರಣೆಯಾಗಿದೆ. ರೈತರಲ್ಲಿಯೂ ಸಾವಯವ ಕೃಷಿ ಕುರಿತು ಹೆಚ್ಚಿನ ಆಸಕ್ತಿ ಬರಬೇಕು. ಹೊಸ ತಳಿ, ತಂತ್ರಜ್ಞಾನ, ಯಂತ್ರೋಪಕರಣಗಳು ಕೃಷಿಕರನ್ನು ತಲುಪಬೇಕು. ಪ್ರಯೋಗಾಲಯಗಳಲ್ಲಿ ನಡೆಯುವ ಸಂಶೋಧನೆಯ ಫಲ ರೈತರಿಗೆ ಸಿಗಬೇಕು. ಆಗ ಮಾತ್ರ ನಡೆಸಿದ ಸಂಶೋಧನೆಗಳು ಸಾರ್ಥಕವಾಗುತ್ತದೆ.