ಮಲ್ಲೇಶ್ವರದ ಮಂತ್ರಿಮಾಲ್ ಪುನಾರಂಭ ಸದ್ಯಕ್ಕಿಲ್ಲ
ಮಂತ್ರಿ ಮಾಲ್ ಗುಣಮಟ್ಟ ಅಳೆಯಲು ನೇಮಿಸಲಾಗಿದ್ದ ತಜ್ಞರ ಸಮಿತಿ ವರದಿ ಸಲ್ಲಿಸಿದ್ದು, ಆ ಬಗ್ಗೆ ಚರ್ಚಿಸಿದ ನಂತರ ಮಾಲ್ ಪುನರಾರಂಭಕ್ಕೆ ಹಸಿರು ನಿಶಾನೆ ಸಾಧ್ಯತೆ
ಬೆಂಗಳೂರು, ಫೆಬ್ರವರಿ 2: ಹಿಂಬದಿಯ ಗೋಡೆ ಕುಸಿತದಿಂದಾಗಿ ಕಳೆದ 16ರಿಂದ ಮುಚ್ಚಲ್ಪಟ್ಟಿರುವ ಮಂತ್ರಿ ಮಾಲ್ ಸದ್ಯಕ್ಕೆ ಪುನರಾರಂಭವಾಗುವ ಸಂಭವವಿಲ್ಲ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಗೆ (ಬಿಬಿಎಂಪಿ) ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಕಟ್ಟಡದಲ್ಲಿ ಅಳವಡಿಸಲಾಗಿರುವ ಹವಾ ನಿಯಂತ್ರಿತ ವ್ಯವಸ್ಥೆಯಿಂದ ಬಂದ ನೀರು ಕಟ್ಟಡದ ಹಿಂಬದಿಯ ಗೋಡೆಯನ್ನು ತೀವ್ರವಾಗಿ ಹಸಿಗೊಳಿಸಿದ್ದ ಕಾರಣದಿಂದ ಆ ಗೋಡೆ ಕುಸಿದಿದೆ ಎಂದು ಆಯುಕ್ತರು ವಿವರಿಸಿದರು.
ಕಳೆದ ತಿಂಗಳ ಗೋಡೆ ಕುಸಿತದಿಂದಾಗಿ ಮಾಲ್ ನ ಇಬ್ಬರು ಕೆಲಸಗಾರರು ಸೇರಿದಂತೆ ನಾಲ್ವರು ಗಾಯಗೊಂಡಿದ್ದರು. ಅಂದಿನಿಂದ ಸುರಕ್ಷತೆಯ ದೃಷ್ಟಿಯಿಂದ ಮಾಲ್ ಅನ್ನು ಮುಚ್ಚಲಾಗಿದೆ.
ಈ ಪ್ರಕರಣದ ನಂತರ, ಕಟ್ಟಡದ ಗುಣಮಟ್ಟವನ್ನು ಪರೀಕ್ಷಿಸಲು ಬಿಬಿಎಂಪಿ ನೇಮಿಸಿದ್ದ ತಜ್ಞರ ಸಮಿತಿ ತನ್ನ ವರದಿಯನ್ನು ಬಿಬಿಎಂಪಿಗೆ ಸಲ್ಲಿಸಿದೆ. ಆದರೆ, ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಆಯುಕ್ತರು ತಜ್ಞರ ವರದಿ ಅಂಶಗಳನ್ನು ಬಹಿರಂಗಗೊಳಿಸಲಿಲ್ಲ.
ತಜ್ಞರ ವರದಿಯ ಬಗ್ಗೆ ಕೂಲಂಕಷ ಚರ್ಚೆ ನಡೆಸಿದ ನಂತರವಷ್ಟೇ ಮಂತ್ರಿ ಮಾಲ್ ಪುನರಾರಂಭಕ್ಕೆ ಅನುಮತಿ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ. ತಜ್ಞರ ಸಮಿತಿಯು ಸುಮಾರು ಎಂಟು ವಿಧಗಳಲ್ಲಿ ಕಟ್ಟಡದ ಗುಣಮಟ್ಟವನ್ನು ಪರೀಕ್ಷಿಸಿದ್ದು, ಕಟ್ಟಡ ನಿರ್ಮಾಣಕ್ಕೆ ಉಪಯೋಗಿಸಲಾಗಿರುವ ಸಿಮೆಂಟ್, ಕಬ್ಬಿಣ, ಉಕ್ಕು ಮುಂತಾದ ಸಾಮಗ್ರಿಗಳ ಗುಣಮಟ್ಟವನ್ನೂ ಅದು ಅಳೆದಿದೆ ಎಂದಷ್ಟೇ ಆಯುಕ್ತರು ಹೇಳಿದ್ದಾರೆ.