ರವಿ ಬೆಳಗೆರೆ ಸಾಂಸ್ಕೃತಿಕ ಜಗತ್ತಿನ ಸನ್ನಿ ಲಿಯೋನ್ ಎಂದ ಅಗ್ನಿ ಶ್ರೀಧರ್
Recommended Video
ಬೆಂಗಳೂರು, ಡಿಸೆಂಬರ್ 11: "ನಾವೆಲ್ಲರೂ ಪರದೆ ಹಾಕಿಕೊಂಡು ಓಡಾಡ್ತಿದೀವಿ. ನಮ್ಮೆಲ್ಲರಲ್ಲೂ ಸಣ್ಣತನ, ಅಪರಾಧ ಮನಸ್ಥಿತಿ ಹಾಗೂ ವಿಕೃತ ಮನೋಭಾವ ಎಲ್ಲ ಇರುತ್ತದೆ. ಅದರಿಂದ ಹೊರಬರಲು ನಾವು ನೋಡಿಕೊಳ್ಳುವ ದಾರಿಯೇ ಸಾಹಿತ್ಯ, ಸಿನಿಮಾ ಮತ್ತೊಂದು. ಆದರೆ ರವಿ ಬೆಳಗೆರೆ ಅದರಿಂದ ಹೊರಗೆ ಬರಲೇ ಇಲ್ಲ, ಬೆಳೆಯಲೇ ಇಲ್ಲ" ಎಂದರು ಅಗ್ನಿ ಶ್ರೀಧರ್.
ಮುಂದಿನ ಎರಡು ವರ್ಷಗಳ ರವಿ ಬೆಳಗೆರೆ ಜಾತಕ ಫಲ
ಇಸ್ರೋ ಲೇಔಟ್ ನಲ್ಲಿರುವ ಅಗ್ನಿ ಪತ್ರಿಕೆ ಕಚೇರಿಯಲ್ಲಿ ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ರವಿ ಕೆಳಗೆ ಬಿದ್ದ ಸಂದರ್ಭದಲ್ಲಿ ನಾನೂ ಒಂದು ಕಲ್ಲೆಸೆದೆ ಅಂತಾಗಬಾರದು ಎಂಬ ಕಾರಣಕ್ಕೆ ಸುಮ್ಮನಿದ್ದೆ. ಆದರೆ ಸಾಹಿತಿಗಳು- ಚಿಂತಕರು ಹಾಗೂ ಕೆಲವು ಸ್ನೇಹಿತರ ಒತ್ತಡಕ್ಕೆ ಮಣಿದು ಹೀಗೆ ಪತ್ರಿಕಾಗೋಷ್ಠಿ ಕರೆದು ಮಾತನಾಡಬೇಕಾಯಿತು ಎಂದರು.
ಕೊಲೆ ಅಂದರೆ ರವಿ ಹುಡುಗಾಟ ಅಂದುಕೊಂಡಿದ್ದಾನೆ: ಅಗ್ನಿಶ್ರೀಧರ್ ಸಂದರ್ಶನ
"ಪಾಪಿಗಳ ಲೋಕದಲ್ಲಿ ಎಂಬ ಸರಣಿ ಬರೆಯುವುದರ ಮೂಲಕ ರವಿ ಬೆಳಗೆರೆ ಹೆಸರು ಮಾಡಿದ. ಆತನೇ ನನ್ನ ಬಳಿ ಹೇಳಿಕೊಂಡಿದ್ದಿದೆ: ಎಷ್ಟೋ ಒಳ್ಳೆ ಪುಸ್ತಕಗಳನ್ನು ಬರೆದಿದ್ದೆ. ಆದರೆ ಪಾಪಿಗಳ ಲೋಕದಲ್ಲಿ ಪುಸ್ತಕ ಹೆಸರು ತಂದುಕೊಟ್ಟಷ್ಟು ಇನ್ಯಾವುದೂ ತಂದುಕೊಡಲಿಲ್ಲ್" ಅಂತ ಎಂದು ಶ್ರೀಧರ್ ಹೇಳಿದರು.
ಸುಪಾರಿ ಕೇಸ್ : ರವಿಬೆಳಗೆರೆಗೆ 14 ದಿನಗಳ ನ್ಯಾಯಾಂಗ ಬಂಧನ
ಪತ್ರಿಕಾಗೋಷ್ಠಿಯಲ್ಲಿ ಅಗ್ನಿ ಶ್ರೀಧರ್ ಹೇಳಿದ ಆಯ್ದ ಅಂಶಗಳನ್ನು ಇಲ್ಲಿ ಕೊಡಲಾಗಿದೆ.
ಸೆಕ್ಸ್-ಕ್ರೈಂ ಹೆಚ್ಚು ಸೇಲಬಲ್
ಕನ್ನಡದಲ್ಲಿ ಅತಿ ಹೆಚ್ಚು ಪ್ರಸಾರ ಸಂಖ್ಯೆ ಇದ್ದಂಥದ್ದು ರತಿ ವಿಜ್ಞಾನ ನಿಯತಕಾಲಿಕಕ್ಕೆ. ಸೆಕ್ಸ್- ಕ್ರೈಂ ವಿಚಾರಗಳು ಹೆಚ್ಚು ಸೇಲಬಲ್. ಹಾಯ್ ಬೆಂಗಳೂರ್ ಕೂಡ ಸೆಕ್ಸ್- ಕ್ರೈಂ ಮ್ಯಾನುಯೆಲ್ ಆಗಿಬಿಟ್ಟಿತ್ತು. ಆದ್ದರಿಂದಲೇ ರವಿ ಬೆಳಗೆರೆಯನ್ನು ಕನ್ನಡ ಸಾಂಸ್ಕೃತಿಕ ಜಗತ್ತಿನ ಸನ್ನಿ ಲಿಯೋನ್ ಅಂತ ಕರೆಯುತ್ತಾರೆ.
ಹಾಯ್ ಬೆಂಗಳೂರ್ ಹೆಸರು ಸೂಚಿಸಿದವನು ನಾನು
ನನಗೆ ಮೂರು ಮಕ್ಕಳು. ಲಂಕೇಶ್ ಪತ್ರಿಕೆಯಲ್ಲಿ ಕೊಡುವ ಸಂಬಳ ಸಾಲಲ್ಲ. ಬಹಳ ಕಷ್ಟದಲ್ಲಿದ್ದೀನಿ. ಸಹಾಯ ಮಾಡಿ ಅಂತ ರವಿ ಬೆಳಗೆರೆ ನನ್ನ ಹತ್ತಿರ ಬಂದ. ಸದಾ ಜತೆಯಲ್ಲೇ ಇರುತ್ತಿದ್ದ. ಅವನಿಗೆ 'ಹಲೋ ಬೆಂಗಳೂರ್' ಎಂಬ ಹೆಸರಿನಲ್ಲಿ ಪತ್ರಿಕೆ ಮಾಡಬೇಕು ಅಂತ ಇತ್ತು. ಆ ಟೈಟಲ್ ಸಿಗದೇ ಇದ್ದಾಗ, 'ಹಾಯ್ ಬೆಂಗಳೂರ್' ಅಂತ ಹೆಸರಿಡಲು ಸೂಚಿಸಿದ್ದೇ ನಾನು. ಅಷ್ಟೇ ಅಲ್ಲ, ವಿದ್ಯಾಪೀಠದ ಸರ್ಕಲ್ ಹತ್ತಿರ ಸಂಗಾತಿ ವೆಂಕಟೇಶ್ ಗೆ ಸೇರಿದ ಅಂಗಡಿಯೊಂದನ್ನು ಒಂದು ವರ್ಷ ಬಾಡಿಗೆ ಇಲ್ಲದಂತೆ ಕೊಡಿಸಿದೆ.
ಇಡೀ ಆಫೀಸಿನಲ್ಲಿ ಕೂಗಾಡಿದ್ದ
ಪತ್ರಿಕೆ ಆರಂಭ ಮಾಡಿದ ಮೇಲೆ ಪ್ರತಿ ದಿನ ಫೋನ್ ಮಾಡ್ತಿದ್ದೆ. ಅದೊಂದು ದಿನ ಫೋನೆತ್ತಿಕೊಂಡ ಆಫೀಸಿನ ಹುಡುಗಿ ಅವರು ಬಿಜಿಯಿದ್ದಾರೆ ಅಂತ ಡಿಸ್ ಕನೆಕ್ಟ್ ಮಾಡಿದಳು. ಆ ನಂತರ ಎರಡು ದಿನ ನಾನು ಕಾಲ್ ಮಾಡಲಿಲ್ಲ. ಆಮೇಲೆ ಅವನೇ ನನಗೆ ಕರೆ ಮಾಡಿದ. ಆಗ ನಾನು, ನೀನು ಬಹಳ ಬಿಜಿ ಕಣಪ್ಪ. ನಾನು ಕಾಲ್ ಮಾಡಿದ್ದೆ, ಹೀಗಾಯಿತು ಅಂದೆ. ಇಡೀ ಆಫೀಸಿನಲ್ಲಿ ಕೂಗಾಡಿಬಿಟ್ಟಿದ್ದ. ನೀನು ಈ ಪತ್ರಿಕೆಯ ಎಂ.ಡಿ. ಅಂತ ಹೇಳಬೇಕಿತ್ತು ಅಂದಿದ್ದ.
ಲೇಔಟ್ ಮಂಜನ ಕೊಲೆಗೆ ಕಾರಣ
ಲೇಔಟ್ ಮಂಜ ಕೊಲೆಯಾಗುವುದಕ್ಕೆ ಇದೇ ರವಿ ಬೆಳಗೆರೆ ಕಾರಣ. ಜೇಡರಹಳ್ಳಿ ಕೃಷ್ಣಪ್ಪ ಹಾಗೂ ಮಂಜನ ಮಧ್ಯೆ ಅಸಮಾಧಾನ ತಂದಿಟ್ಟು, ಮಂಜನ ಮನಸ್ಸನ್ನು ಹಾಳು ಮಾಡಿ, ಅವನ ಕೊಲೆಯಾಗುವುದಕ್ಕೆ ರವಿ ಬೆಳಗೆರೆ ಕಾರಣ. ಮುಲಾಮನ (ಲೋಕೇಶ್) ವಿಚಾರದಲ್ಲೂ ಹೀಗೆ ಮಾಡಲು ನೋಡಿದ. ಆದರೆ ನಾನು ತಡೆದೆ.
ಹಾಯ್ ಬೆಂಗಳೂರ್ ನನ್ನದೇ ಅಂದುಕೊಂಡಿದ್ದರು
ಹಾಯ್ ಬೆಂಗಳೂರ್ ಪತ್ರಿಕೆ ನನ್ನದೇ ಅಂತ ಎಲ್ಲರೂ ಅಂದುಕೊಂಡುಬಿಟ್ಟಿದ್ದರು. ಬಾಲ ಗಂಗಾಧರ ಸ್ವಾಮೀಜಿ ವಿರುದ್ಧ ರವಿ ಬೆಳಗೆರೆ ಬರೆದಾಗ ಇವನನ್ನು ಹೊಡೆಯಲು ಬಂದವರಿಂದ ಕಾಪಾಡಿದೆ. ಆ ವರದಿ ಮಾಡಲು ನಾನೇ ಹೇಳಿದ್ದು ಅಂತ ಹೇಳಿದೆ.
ಅಗ್ನಿ ಶ್ರೀಧರ್ ನನ್ನು ಮುಗಿಸಿಬಿಡ್ತಾರೆ
ಭೀಮಾ ತೀರದಲ್ಲಿ ನೆತ್ತರು ಹರಿಯುವುದಕ್ಕೆ ರವಿ ಬೆಳಗೆರೆಯೇ ಕಾರಣ. ಅವರ ಹತ್ತಿರ ಎಕೆ- 47 ಇದೆ ಅಂತ ಬರೆದ. ಆ ಹುಡುಗರಿಗೆ ಒಂದು ಮಾತನ್ನು ಹೇಳಿದರೆ ಶ್ರೀಧರ್ ನನ್ನು ಮುಗಿಸಿ ಬಿಡ್ತಾರೆ ಅಂತ ಹೇಳಿಕೊಂಡು ಓಡಾಡಿದ. ಆಗೆಲ್ಲ ನಕ್ಕು ಸುಮ್ಮನಾದೆ.
ಇಪ್ಪತ್ತು ವರ್ಷದಿಂದ ಇದೇ ಕೆಲಸ
ರವಿ ಬೆಳಗೆರೆ ಅರೆಸ್ಟ್ ಆಗಿದ್ದರಲ್ಲಾಗಲಿ ಅಥವಾ ಸುಪಾರಿ ನೀಡಿದ್ದರಲ್ಲಾಗಲಿ ನನಗೆ ಯಾವುದೇ ಆಶ್ಚರ್ಯ ಇಲ್ಲ. ಆದರೆ ಪೊಲೀಸರು ಇವನ ಬಂಧನಕ್ಕೆ ಮುಂದಾದರಲ್ಲಾ ಅನ್ನೋದು ಆಶ್ಚರ್ಯ. ಏಕೆಂದರೆ ಇಪ್ಪತ್ತು ವರ್ಷದಿಂದ ಇವನು ಇದೇ ಮಾಡಿಕೊಂಡು ಬರ್ತಾ ಇದ್ದಾನೆ.
ಬೇಡದ ವಿಚಾರಕ್ಕೆ ಸಿಕ್ಕಿಹಾಕಿಕೊಂಡ
ಮೊನ್ನೆ ಟಿ.ವಿಯಲ್ಲಿ ಬರುತ್ತಿದ್ದ ದೃಶ್ಯಗಳನ್ನು ನೋಡಿ ನನಗೆ ಛೇ ಅನ್ನಿಸಿತು. ಈ ಮನುಷ್ಯ ಬಹಳ ಕಷ್ಟಪಟ್ಟವನು. ಮೂವತ್ತು ವರ್ಷಗಳ ಕಾಲ ಸಾಕಷ್ಟು ಅವಮಾನ ಎದುರಿಸಿದವನು. ಅಂಥವನು ಈಗ ಸುಖ ಪಡಬೇಕಾದ ಕಾಲ- ವಯಸ್ಸಿನಲ್ಲಿ ಇದ್ಯಾವುದೋ ಬೇಡದ ವಿಚಾರಕ್ಕೆ ಸಿಕ್ಕಿಹಾಕಿಕೊಂಡನಲ್ಲ ಅಂತ ವಿಷಾದ ಆಗುತ್ತದೆ.
ನಾನು ನಿಂತಿರುವಷ್ಟು ಹೊತ್ತು ರವಿ ಬೆಳಗೆರೆಗೆ ಕೂತುಕೊಳ್ಳೋಕೆ ಆಗುತ್ತಾ?
ಆದರೆ, ಈಚೆಗೆ ನನ್ನ ಮನೆ ಮೇಲೆ ಪೊಲೀಸರು ದಾಳಿ ಮಾಡಿದಾಗ ವಿಡಿಯೋ ಮಾಡಿ, ಶ್ರೀಧರ್ ಗಿಂತ ನನ್ನ ಆರೋಗ್ಯ ಚೆನ್ನಾಗಿದೆ ಅಂತಾನೆ. ಅಲ್ಲಾ, ನಾನು ನಿಂತುಕೊಳ್ಳುವಷ್ಟು ಹೊತ್ತು ಇವನಿಗೆ ಕೂತುಕೊಳ್ಳಲು ಸಾಧ್ಯವಿಲ್ಲ. ಇನ್ನು ಚಂಪಾ ಅವರನ್ನು ಮುದಿ ಸೂಳೆ ಅಂತ ಬರೀತಾನೆ. ಮೊನ್ನೆ ಸಾಹಿತ್ಯ ಸಮ್ಮೇಳನದಲ್ಲಿ ಎರಡು ಗಂಟೆ ನಿಂತು ಭಾಷಣ ಮಾಡಿದರು ಅವರು. ಅಷ್ಟು ಕಾಲ ಇವನಿಗೆ ಕೂತುಕೊಳ್ಳುವುದಕ್ಕಾದರೂ ಸಾಧ್ಯವಾ?
ಫೋನ್ ನಲ್ಲಿ ಮಾತನಾಡೋದು ದೊಡ್ಡ ವಿಷಯ ಅಲ್ಲ
ರವಿ ಬೆಳಗೆರೆ ಮಕ್ಕಳು ಹಾಗೂ ಅಳಿಯಂದಿರು ತುಂಬ ಸಭ್ಯರು. ಆ ಮಕ್ಕಳು ಈಗ, ನನ್ನ ತಂದೆ ನಿರಪರಾಧಿ ಅನ್ನುತ್ತಿದ್ದಾರೆ. ಈ ಮಾತು ಹೇಳೋದು ತಪ್ಪು. 'ಅವರು ಆರೋಪ ಮುಕ್ತರಾಗಿ ಬರ್ತಾರೆ' ಅಂತ ಬೇಕಾದರೆ ಹೇಳಲಿ. ಇನ್ನು ಸಿಸಿಬಿ ಕಸ್ಟಡಿಯಲ್ಲಿರುವಾಗ ಫೋನ್ ನಲ್ಲಿ ಸುನೀಲ್ ಹೆಗ್ಗರವಳ್ಳಿ ಜತೆ ರವಿ ಬೆಳಗೆರೆ ಮಾತನಾಡಿದ್ದಾನೆ ಎಂಬ ಸುದ್ದಿ ಬಂದಿದೆ. ನಾವೂ ಜೈಲಲ್ಲಿರುವಾಗ ಫೋನ್ ನಲ್ಲಿ ಮನೆಯವರ ಜತೆ ಮಾತನಾಡಿದ್ದೀವಿ. ಅದೇನೋ ಪೊಲೀಸರ ವೈಫಲ್ಯ ಅನ್ನೋಕ್ಕಾಗಲ್ಲ. ಆದರೆ ಹಾಗೆ ಮಾತನಾಡಬಾರದಿತ್ತು.
ಸ್ಪ್ಲಿಟ್ ಪರ್ಸನಾಲಿಟಿ
ರವಿ ಬೆಳಗೆರೆಯದು ಸ್ಪ್ಲಿಟ್ ಪರ್ಸನಾಲಿಟಿ. ಭಾವನಾತ್ಮಕವಾಗಿ ಬರೆಯುವ ಬೆಳಗೆರೆಯ ಒಳಗೆ ಅಪರಾಧಿಯ ಮನಸ್ತತ್ವವೂ ಇದೆ. ಆದ್ದರಿಂದಲೇ ಹೀಗೆ ಆಲೋಚನೆ ಮಾಡುತ್ತಾನೆ. ಕ್ರೈಂ ವರದಿಗಾರಿಕೆ ಮಾಡುವಾಗ ಹೀಗೆ ಆಗುತ್ತದೆ. ಆದರೆ ಅದರಿಂದ ಆಚೆ ಬರಬೇಕು. ಅಪರಾಧ ಸುದ್ದಿಯನ್ನು ಹಾಗೇ ನೋಡಬೇಕು. ಅದನ್ನು ನಮ್ಮೊಳಗೆ ತೆಗೆದುಕೊಳ್ಳಬಾರದು.
ಈಗಿನ ಕೇಸ್ ನಿಲ್ಲೋದಿಲ್ಲ
ಈಗ ಎದುರಾಗಿರುವ ಪ್ರಕರಣ ದೊಡ್ಡದಲ್ಲ. ಇದು ನಿಲ್ಲೋದೂ ಇಲ್ಲ. ಅನಾರೋಗ್ಯದ ಸಮಸ್ಯೆ ಇರುವ ರವಿ ಬೆಳಗೆರೆಗೆ ಜಾಮೀನು ಕೂಡ ಸುಲಭವಾಗಿ ಸಿಗುತ್ತದೆ. ಆದರೆ ಇನ್ನು ಮುಂದಾದರೂ ನೆಮ್ಮದಿಯಿಂದ ಬಾಳಲಿ. ಕೆಡಕಿನ ಕಡೆಗೆ ಮನಸ್ಸು ಹೋಗದಿರಲಿ. ಈ ಹಿಂದೆ ಬಹಳ ಕಷ್ಟ ಪಟ್ಟಿರುವ ಆತ, ಮುಂದೆ ಕುಟುಂಬ ಸಮೇತವಾಗಿ ನೆಮ್ಮದಿಯಿಂದ ಇರಲಿ.