ರವಿ ಬೆಳಗೆರೆ ಜಾಮೀನಿಗೆ ಕಂಟಕ ತಂದೊಡ್ಡಲಿದೆಯೇ ಕರೆ?
ಬೆಂಗಳೂರು, ಡಿಸೆಂಬರ್ 11: ಪತ್ರಕರ್ತ ರವಿ ಬೆಳಗೆರೆ ಸಹೋದ್ಯೋಗಿ ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ್ದ ಪ್ರಕರಣ ಕುರಿತಾಗಿ ರವಿ ಬೆಳಗೆರೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೆಲವೇ ಸಮಯದಲ್ಲಿ ನ್ಯಾಯಾಧೀಶರು ಕೈಗೆತ್ತಿಕೊಳ್ಳಲಿದ್ದಾರೆ, ಆದರೆ ರವಿ ಮಾಡಿದ್ದಾರೆ ಎಂದು ಹೇಳಲಾಗುತ್ತಿರುವ ತಪ್ಪೊಂದು ಜಾಮೀನು ನೀಡಿಕೆಗೆ ತೊಡಕಾಗುವ ಸಂಭವ ಇದೆ.
ಜ್ಯೋತಿಷ್ಯ: ರವಿಯನ್ನು ಬಿಟ್ಟೂಬಿಡದೆ ಕಾಡಲಿದೆ ಗುರುಚಾಂಡಾಲ ಯೋಗ
ರವಿ ಬೆಳಗೆರೆ ಅವರು ಜಾಮೀನು ಅರ್ಜಿ ವಿಚಾರಣೆಗೆ ಇಂದು (ಡಿಸೆಂಬರ್ 11) ನ್ಯಾಯಾಲಯದ ಮುಂದೆ ಹಾಜರಾಗಲಿದ್ದಾರೆ ಆದರೆ, ಇದೇ ಸಮಯದಲ್ಲಿ ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ 'ರವಿ ಬೆಳಗೆರೆ ಅವರು ನನಗೆ ಕರೆ ಮಾಡಿದ್ದಾರೆ' ಎಂದು ಸುಬ್ರಹ್ಮಣ್ಯಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದು ರವಿ ಬೆಳಗೆರೆ ಅವರ ಜಾಮೀನು ಅರ್ಜಿಗೆ ಹಿನ್ನೆಡೆ ಉಂಟು ಮಾಡಲಿದೆ.
LIVE: ರವಿ ಬೆಳಗೆರೆ ಜಾಮೀನು ಅರ್ಜಿ ವಿಚಾರಣೆ ಆರಂಭ
'ರವಿ ಬೆಳಗೆರೆ ಅವರು ನಿನ್ನೆ (ಡಿಸೆಂಬರ್ 10) ರಂದು ಹಾಯ್ ಬೆಂಗಳೂರು ಪತ್ರಿಕೆಯ ಹಳೆಯ ಓದುಗ ಬೆಳಗೆರೆ ಅವರ ಆತ್ಮೀಯ ಮಧು ಎನ್ನುವವರ ಮೊಬೈಲ್ ನಿಂದ ನನ್ನ ಮೊಬೈಲ್ ಗೆ ಕರೆ ಮಾಡಿದ್ದಾರೆ' ಎಂದು ಸುನಿಲ್ ಆರೋಪಿಸಿದ್ದಾರೆ.
ರವಿ ಬೆಳಗೆರೆ ಪ್ರಕರಣ: ಮತ್ತೊಬ್ಬ ಆರೋಪಿಯ ಹುಡುಕಾಟ ತೀವ್ರಗೊಳಿಸಿದ ಸಿಸಿಬಿ
ಸುನಿಲ್ ದೂರು ನೀಡಿರುವ ಹಿನ್ನೆಲೆಯಲ್ಲಿ, ಸಿಸಿಬಿ ವಶದಲ್ಲಿರುವ ರವಿ ಬೆಳಗೆರೆ ಕರೆ ಮಾಡಿದ್ದು ಹೇಗೆ, ಅವರಿಗೆ ಮೊಬೈಲ್ ನೀಡಿದವರು ಯಾರು ಎಂಬಿತ್ಯಾದಿ ಪ್ರಶ್ನೆಗಳು ಹುಟ್ಟಿಕೊಂಡಿವೆ. ಆದರೆ ಸುನಿಲ್ ಅವರ ಆರೋಪವನ್ನು ರವಿ ಅವರ ಮಗಳಾದ ಚೇತನಾ ಬೆಳಗೆರೆ ತಳ್ಳಿಹಾಕಿದ್ದಾರೆ
ಮೊಬೈಲ್ ಬಳಸಿಲ್ಲ
ಸುನಿಲ್ ಅವರ ಆರೋಪವನ್ನು ಸಾರಾಸಗಟಾಗಿ ತಳ್ಳಿಹಾಕಿರುವ ರವಿ ಬೆಳಗೆರೆ ಮಗಳಾದ ಚೇತನಾ ಬೆಳಗೆರೆ 'ರವಿ ಅವರ ಮೊಬೈಲ್, ಅವರ ಲ್ಯಾಪ್ಟಾಪ್ ಅನ್ನು ಸಿಸಿಬಿ ಅವರು ವಶಪಡಿಸಿಕೊಂಡಿದ್ದಾರೆ, ಅಷ್ಟೇ ಅಲ್ಲದೆ ಅವರ ಯೋಗಕ್ಷೇಮ ನೋಡಿಕೊಳ್ಳುತ್ತಿರುವ ನಾವೂ ಸಹ ಮೊಬೈಲ್ ಬಳಸದಂತೆ ಸಿಸಿಬಿ ಸೂಚಿಸಿದೆ ಹೀಗಿದ್ದ ಮೇಲೆ ರವಿ ಬೆಳಗೆರೆ ಕರೆ ಮಾಡಲು ಹೇಗೆ ಸಾಧ್ಯ' ಎಂದಿದ್ದಾರೆ.
'ರವಿ ಬೆಳಗೆರೆ ಅವರಿಗೆ ಜಾಮೀನು ದೊರಕಬಾರದು ಎಂಬ ಉದ್ದೇಶದಿಂದಲೇ ಸುನಿಲ್ ಬೇಕೆಂದೆ ಸುಳ್ಳು ಕೇಸು ದಾಖಲಿಸಿದ್ದಾರೆ ಎಂದು ಚೇತನಾ ಆರೋಪಿಸಿದ್ದಾರೆ.
ಜಾಮೀನು ಸಿಗದಿರಲಿ
'ಸಿಸಿಬಿ ಕಚೇರಿಯಲ್ಲಿದ್ದುಕೊಂಡು ನನಗೆ ಕರೆ ಮಾಡಿರುವ ರವಿ ಬೆಳಗೆರೆ ಮತ್ತೊಬ್ಬ ಸುಪಾರಿ ಕೊಲೆಗಾರನಿಗೆ ಕರೆ ಮಾಡಿ ನನ್ನನ್ನು ಕೊಲ್ಲುವಂತೆ ಹೇಳಿರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ, ಅವರಿಗೆ ರಾಜ್ಯದ ಬಹುತೇಕ ಕುಖ್ಯಾತರ ಸಂಪರ್ಕ ಇದೆ' ಎಂದು ಸುನಿಲ್ ಹೇಳಿದ್ದಾರೆ.
ಸಿಸಿಬಿ ವಶದಲ್ಲಿದ್ದುಕೊಂಡೆ ನನಗೆ ಕರೆ ಮಾಡಿರುವ ರವಿ ಬೆಳಗೆರೆ ಜಾಮೀನಿನ ಮೇಲೆ ಹೊರಬಂದರೆ ನನ್ನನ್ನು ಏನು ಮಾಡಬಹುದು ಎಂದು ನನಗೆ ಚಿಂತೆ ಆಗುತ್ತಿದೆ ಹಾಗಾಗಿ ಅವರಿಗೆ ಜಾಮೀನು ನೀಡಬಾರದು ಎಂಬುದು ನನ್ನ ಮನವಿ ಎಂದು ಅವರು ಹೇಳಿದ್ದಾರೆ.
ತನಿಖೆ ಸಾಧ್ಯತೆ
ರವಿ ಬೆಳಗೆರೆ ಅವರ ವಿರುದ್ಧ ಸುನಿಲ್ ಕೊಲೆ ಬೆದರಿಕೆ ದೂರು ದಾಖಲಿಸಿರುವುದು ರವಿ ಬೆಳಗೆರೆ ಜೊತೆಗೆ ಸಿಸಿಬಿ ಅಧಿಕಾರಿಗಳಿಗೂ ಸಂಕಷ್ಟ ತಂದೊಡ್ಡುವ ಸಂಭವ ಇದೆ. ಸಿಸಿಬಿ ವಶದಲ್ಲಿರುವ ವ್ಯಕ್ತಿಗೆ ಮೊಬೈಲ್ ದೊರಕಿದ್ದು, ಹೇಗೆ ಎಂದು ನ್ಯಾಯಾಲಯ ತನಿಖೆಗೆ ಆದೇಶಿಸಿ, ಸಿಸಿಬಿ ಅಧಿಕಾರಿಗಳ ನಿರ್ಲಕ್ಷ್ಯತನಕ್ಕೆ ಶಿಕ್ಷೆ ನೀಡುವ ಸಾಧ್ಯತೆಯೂ ಇದೆ.
ವ್ಹೀಲ್ ಚೇರ್ ಮೇಲೆ ಓಡಾಟ
ರವಿ ಬೆಳಗೆರೆ ಅವರ ಆರೋಗ್ಯದಲ್ಲಿ ಇಂದು ತೀರ್ವ ಏರುಪೇರಾಗಿದ್ದು, ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ, ಹಾಗೂ ಸಕ್ಕರೆ ಅಂಶ ತೀರ್ವವಾಗಿ ಕಡಿಮೆಯಾಗಿ ವಿಪರೀತ ಬೆವರುತ್ತಿದ್ದಾರೆ ಎನ್ನಲಾಗಿದೆ.
ಜಾಮೀನು ಅರ್ಜಿ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರು ಪಡಿಸುವ ಮುನ್ನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಸಿ ನಂತರ ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ರವಿ ಬೆಳಗೆರೆ ನಡೆದಾಡಲು ಸಮಸ್ಯೆ ಎದುರಿಸುತ್ತಿರುವ ಕಾರಣ ರವಿ ಅವರನ್ನು ವ್ಹೀಲ್ ಚೇರ್ ಮೇಲೆ ಕರೆದುಕೊಂಡು ಹೋಗಲಾಗುತ್ತಿದೆ.
ವಿಚಾರಣೆ ಮುಗಿಯದೆ ಜಾಮೀನು ಸಾಧ್ಯವಿಲ್ಲ
ರವಿ ಬೆಳಗೆರೆ ಅವರ ಜಾಮೀನು ಅರ್ಜಿಗೆ ಸರ್ಕಾರಿ ವಕೀಲರು ಆಕ್ಷೇಪಣೆ ಒಡ್ಡಲಿದ್ದಾರೆ, ರವಿ ಅವರು ತಮ್ಮ ಪ್ರಭಾವ ಬಳಸಿ ಸಾಕ್ಷ್ಯ ನಾಶಪಡಿಸಬಹುದು ಎಂದು ಅವರು ನ್ಯಾಯಾಲಯದ ಮುಂದೆ ವಾದ ಮಂಡಿಸಲಿದ್ದಾರೆ. ಅದಲ್ಲದೆ ಪ್ರಕರಣದ ಮೂರನೇ ಆರೋಪಿ ವಿಜು ಬಡಿಗೇರ ಇನ್ನೂ ಸಿಸಿಬಿಗೆ ದೊರಕಿಲ್ಲವಾದ್ದರಿಂದ ವಿಚಾರಣೆ ಪೂರ್ಣಗೊಳ್ಳದೆ ಜಾಮೀನು ನೀಡಬಾರದು ಎಂದು ಸಿಸಿಬಿ ಮನವಿ ಮಾಡುವ ಸಾಧ್ಯತೆ ಇದೆ.
ತೀರ್ವ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ರವಿ ಬೆಳಗೆರೆ ಆರೋಗ್ಯ ಸಮಸ್ಯೆಯ ವಿಷಯವನ್ನು ಮುಂದೆ ಮಾಡಿ ಜಾಮೀನು ಗಿಟ್ಟಿಸಿಕೊಳ್ಳುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.