ವಿರೋಧಿಗಳನ್ನು ಹಕ್ಕಿಯ ಪಿಕ್ಕೆಗೆ ಹೋಲಿಸಿದ ರಮ್ಯಾ: ಇನ್ಸ್ಟಾದಲ್ಲಿ ವಿಡಿಯೋ
ಬೆಂಗಳೂರು, ಡಿಸೆಂಬರ್ 6: ಸರ್ದಾರ್ ವಲ್ಲಭ ಭಾಯ್ ಪಟೇಲ್ ಪ್ರತಿಮೆಯ ಕೆಳಗೆ ಪ್ರಧಾನಿ ನರೇಂದ್ರ ಮೋದಿ ನಿಂತಿದ್ದ ಚಿತ್ರವನ್ನು ಹಕ್ಕಿಯ ಪಿಕ್ಕೆಗೆ ಹೋಲಿಸಿ ವಿವಾದ ಸೃಷ್ಟಿಸಿದ್ದ ರಮ್ಯಾ, ಅಂಬರೀಶ್ ಅವರ ಅಂತ್ಯಕ್ರಿಯೆಗೆ ಗೈರು ಹಾಜರಾಗುವ ಮೂಲಕ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದರು.
ಮೋದಿಯನ್ನು 'ಹಕ್ಕಿ ಪಿಕ್ಕೆ' ಎಂದ ರಮ್ಯಾಗೆ ಮಹಾಮಂಗಳಾರತಿ!
ಈಗ ಮತ್ತೆ ಇನ್ಸ್ಟಾಗ್ರಾಂನಲ್ಲಿ ಸ್ಟೇಟಸ್ ಹಾಕಿರುವ ರಮ್ಯಾ, ಅದರಲ್ಲಿ ಹಾಕಿರುವ ವಿಡಿಯೋ ಮತ್ತೊಂದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಅಂಬಿ ಅಂತ್ಯಕ್ರಿಯೆಗೆ ರಮ್ಯಾ ಬಂದಿದ್ದರೆ ಅವರ ಮೇಲೆ ಹಲ್ಲೆ ನಡೆಯುತ್ತಿತ್ತೇ?
ಅಕ್ಟೋಬರ್ನಲ್ಲಿ ಕಾಲಿನ ಆಪರೇಷನ್ ಬಗ್ಗೆ ರಮ್ಯಾ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದರು. ಅಂಬರೀಶ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳದಿರಲು ಇದೇ ಕಾರಣ ಎಂದು ರಮ್ಯಾ ಪರ ಅನೇಕರು ವಕಾಲತ್ತು ವಹಿಸಿದ್ದರು. ಆದರೆ, ಇದುವರೆಗೂ ರಮ್ಯಾ ಅದರ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.
ಇನ್ಸ್ಟಾಗ್ರಾಂನಲ್ಲಿ ತಾವು ನಡೆಯುತ್ತಿರುವ ವಿಡಿಯೋ ಪೋಸ್ಟ್ ಮಾಡಿರುವ ರಮ್ಯಾ, ಅದರಲ್ಲಿಯೂ ವ್ಯಂಗ್ಯದ ಬಾಣ ತೂರಿದ್ದಾರೆ.
'ಪ್ರತಿ ವೈದ್ಯಕೀಯ ಚಿಕಿತ್ಸೆಯ ಬಳಿಕ ನಾನು ಹೆಚ್ಚು ಶಕ್ತಿಶಾಲಿಯಾಗುತ್ತಿದ್ದೇನೆ. ಮತ್ತು ನಾನು ಹಕ್ಕಿ ಪಿಕ್ಕೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ' ಎಂದು ಸ್ಮೈಲಿಯೊಂದಿಗೆ ಇನ್ಸ್ಟಾಗ್ರಾಂ ಸ್ಟೇಟಸ್ನಲ್ಲಿ ವಿಡಿಯೋ ಹಾಕಿದ್ದಾರೆ.
ಅಂಬರೀಶ್ ಅವರ ಸಾವಿನ ಬಗ್ಗೆ ಒಂದು ಟ್ವೀಟ್ ಹೊರತಾಗಿ ಪ್ರತಿಕ್ರಿಯೆ ನೀಡದೆ, ಅವರ ಅಂತಿಮ ದರ್ಶನಕ್ಕೂ ಬಾರದೆ ತೀವ್ರ ಟೀಕೆಗೆ ಒಳಗಾಗಿದ್ದ ರಮ್ಯಾ, ತಮ್ಮ ವಿರೋಧಿಗಳನ್ನು ಹಕ್ಕಿಯ ಪಿಕ್ಕೆಗೆ ಹೋಲಿಸಿದ್ದಾರೆ.
ತಾವು ದೈಹಿಕವಾಗಿ ಗಟ್ಟಿಗೊಳ್ಳುತ್ತಿರುವುದರ ಜೊತೆಗೆ ಮಾನಸಿಕವಾಗಿಯೂ ಟೀಕೆಗಳ ವಿರುದ್ಧ ಬಲಗೊಂಡಿರುವುದಾಗಿ ಸಂದೇಶ ನೀಡಿದ್ದಾರೆ.