ಎಸ್ಆರ್ ಹಿರೇಮಠ ವಿರುದ್ಧ ಮಾನನಷ್ಟ ಮೊಕದ್ದಮೆ
ಬೆಂಗಳೂರು, ಫೆ.25 : ಹಿರಿಯ ಕಾಂಗ್ರೆಸ್ ಮುಖಂಡ ರಮೇಶ್ ಕುಮಾರ್ ಮತ್ತು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್ಆರ್ ಹಿರೇಮಠ ಅವರ ನಡುವಿನ ಗುದ್ದಾಟ ಕಾನೂನು ಸ್ವರೂಪ ಪಡೆದುಕೊಂಡಿದೆ. ಮಂಗಳವಾರ ರಮೇಶ್ ಕುಮಾರ್ ಹಿರೇಮಠ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಮಂಗಳವಾರ ಬೆಂಗಳೂರಿನ 8ನೇ ಎಸಿಎಂಎಂ ನ್ಯಾಯಾಲಯದಲ್ಲಿ ಎಸ್ಆರ್ ಹಿರೇಮಠ ವಿರುದ್ಧ ದೂರು ದಾಖಲಿಸಿರುವ ಶ್ರೀನಿವಾಸಪುರ ಶಾಸಕ ರಮೇಶ್ ಕುಮಾರ್, ತಾವು ಪ್ರಚಾರ ಪಡೆದುಕೊಳ್ಳುವ ಸಲುವಾಗಿ ಹಿರೇಮಠ, ತಮ್ಮ ವಿರುದ್ಧ ಮಾಧ್ಯಮಗಳಲ್ಲಿ ಅವಹೇಳನಕಾರಿ ಆರೋಪ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಎಸಿಎಂಎಂ ನ್ಯಾಯಾಲಯ ಮಂಗಳವಾರ ಅರ್ಜಿಯನ್ನು ದಾಖಲಿಸಿಕೊಂಡಿದ್ದು, ವಿಚಾರಣೆಗೆ ಒಪ್ಪಿಗೆ ಸೂಚಿಸಿದೆ. ಫೆ.26ರ ಬುಧವಾರ ಅರ್ಜಿಯ ವಿಚಾರಣೆ ನಡೆಯಲಿದೆ. ಈ ಮೂಲಕ ರಮೇಶ್ ಕುಮಾರ್ ಮತ್ತು ಎಸ್ಆರ್ ಹಿರೇಮಠ ಅಧಿಕೃತವಾಗಿ ಕಾನೂನು ಸಮರ ಆರಂಭಿಸಿದ್ದಾರೆ. [ರಮೇಶ್ ಕುಮಾರ್ ವಿರುದ್ಧ ದಾಖಲೆಗಳಿವೆ]
ಶಾಸಕ ರಮೇಶ್ ಕುಮಾರ್ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಹೊಸಹುಡ್ಯ ಗ್ರಾಮದ ಸರ್ವೆ ನಂ.1 ಮತ್ತು 2 ರಲ್ಲಿ 60 ಎಕರೆಗೂ ಹೆಚ್ಚು ಅರಣ್ಯ ಭೂ ಒತ್ತುವರಿಯನ್ನು ಮಾಡಿಕೊಂಡಿದ್ದಾರೆ ಎಂಬುದು ಸೇರಿದಂತೆ ಎಸ್ಆರ್ ಹಿರೇಮಠ ರಮೇಶ್ ಕುಮಾರ್ ವಿರುದ್ಧ ಹಲವು ಆರೋಪಗಳನ್ನು ಮಾಡುತ್ತಿದ್ದಾರೆ. [ಹಿರೇಮಠ ವಿರುದ್ಧ ಹಕ್ಕುಚ್ಯುತಿ ಮಂಡನೆ]
ಈ ಬಗ್ಗೆ ರಮೇಶ್ ಕುಮಾರ್ ಬಹಿರಂಗವಾಗಿಯೇ ಹಲವಾರು ಬಾರಿ ಅಸಮಾಧಾನ ಹೊರಹಾಕಿದ್ದಾರೆ. ತಮ್ಮನ್ನು ಭ್ರಷ್ಟ ಎಂದು ಕರೆಯಲು ಹಿರೇಮಠ ಅವರಿಗೆ ಅಧಿಕಾರ ನೀಡಿದರುವ ಯಾರು? ಎಂದು ಪ್ರಶ್ನಿಸಿದ್ದರು. ಬೆಳಗಾವಿಯಲ್ಲಿ ನಡೆದ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಹಿರೇಮಠ ವಿರುದ್ಧ ಹಕ್ಕುಚ್ಯುತಿ ಮಂಡಿಸಿದ್ದರು.[ಹಿರೇಮಠ ವಿರುದ್ಧ ಶಾಸಕರ ಅಸಮಾಧಾನ]
ರಮೇಶ್ ಕುಮಾರ್ ಬೆದರಿಕೆಗೆ ನಾನು ಜಗ್ಗುವುದಿಲ್ಲ. ಇದರಿಂದ ನನ್ನ ಆತ್ಮಸ್ಥೈರ್ಯವೂ ಕುಗ್ಗಿಲ್ಲ. ಹೋರಾಟ ಮುಂದುವರಿಸಲು ಮತ್ತಷ್ಟು ಉತ್ತೇಜನ ನೀಡಿದ್ದಾರೆ ಎಂದು ಹಿರೇಮಠ ತಿರುಗೇಟು ನೀಡಿದ್ದಾರೆ. ರಮೇಶ್ ಕುಮಾರ್ ಮೇಲೆ ಮಾಡಿರುವ ಆರೋಪಕ್ಕೆ ಅಗತ್ಯ ದಾಖಲೆಗಳು ನನ್ನ ಬಳಿ ಇವೆ ಎಂದು ಹೇಳಿದ್ದರು. ಸದ್ಯ ಇಬ್ಬರ ನಡುವಿನ ಗುದ್ದಾಟ ಕಾನೂನು ಸ್ವರೂಪ ಪಡೆದುಕೊಂಡಿದ್ದು ಹಿರೇಮಠ ಅವರ ವಿರುದ್ಧ ರಮೇಶ್ ಕುಮಾರ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.