ಜಯನಗರದಲ್ಲಿ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯ ಎಲೆಕ್ಷನ್ ಪ್ರಚಾರ ಶುರು
ಬೆಂಗಳೂರು, ನವೆಂಬರ್ 27 : 2018ರ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ತಮ್ಮ ಪುತ್ರಿಯನ್ನು ಜಯನಗರದಿಂದ ಅಖಾಡಕ್ಕಿಳಿಸಲು ತಯಾರಿ ನಡೆಸಿದ್ದಾರೆ.
ಇದಕ್ಕೆ ಪೂರಕವೆಂಬಂತೆ ರಾಮಲಿಂಗಾ ರೆಡ್ಡಿ ಮತ್ತು ಸೌಮ್ಯ ರೆಡ್ಡಿ ಭಾನುವಾರ ಜಯನಗರದ ಸ್ವಾಗತ್ ಗರುಡಾ ಮಾಲ್ ಬಳಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಹಾಗೂ ನಟ ಕಮಲ್ ಹಾಸನ್ ಹುಟ್ಟುಹಬ್ಬದ ಬೃಹತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಷ್ಟೇ ಅಲ್ಲದೇ ಈ ಕಾರ್ಯಕ್ರಮದಲ್ಲಿ ತಂದೆ-ಮಗಳ ಬ್ಯಾನರ್ ಗಳು ರಸ್ತೆ ಪಕ್ಕದಲ್ಲಿ ರಾರಾಜಿಸುತ್ತಿದ್ದವು.
ಜಯನಗರದಿಂದ ಸ್ಪರ್ಧಿಸಲು ನನ್ನ ಮಗಳು ಸಿದ್ಧ: ರಾಮಲಿಂಗಾರೆಡ್ಡಿ
ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷೆಯಾಗಿರುವ ಸೌಮ್ಯ ರೆಡ್ಡಿ ಅವರು ಈಗಾಗಲೇ ಜಯನಗರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಜಯನಗರದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಹಾಜರಾಗಿ ಚುನಾವಣೆ ಪ್ರಚಾರವನ್ನು ಶುರು ಮಾಡಿಕೊಂಡಿದ್ದಾರೆ. ಇದಕ್ಕೆ ತಂದೆ ರಾಮಲಿಂಗಾ ರೆಡ್ಡಿ ಅವರು ಸಹ ಹಾಗಾಗ ಜಯನಗರದಲ್ಲಿ ಸುಳಿದಾಡುತ್ತಿದ್ದಾರೆ. ಇದಕ್ಕೆ ಪುಷ್ಠಿ ನೀಡುವಂತೆ ಇತ್ತೀಚೆಗೆ ಜಯನಗರದ 3ನೇ ಬ್ಲಾಕ್ ನಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು.
ಜಯನಗರದಿಂದ ಸೌಮ್ಯ ರೆಡ್ಡಿ ನಿಲ್ಲುವುದು ಪಕ್ಕಾ
ಜಯನಗರ ಕ್ಷೇತ್ರದಲ್ಲಿ ಸೌಮ್ಯ ರೆಡ್ಡಿ ಅವರ ಬ್ಯಾನರ್ ಗಳ ರಾರಾಜಿಸುತ್ತಿರುವುದು ಹಾಗೂ ಸೌಮ್ಯ ಅವರು ಕಾರ್ಯಕ್ರಮಗಳಲ್ಲಿ ಸಕ್ರೀಯಾಗಿ ತೊಡಗಿಕೊಳ್ಳುತ್ತಿರುವುದನ್ನು ನೋಡಿದರೆ ಮುಂದಿನ ಚುನಾವಣೆಗೆ ಟಿಕೆಟ್ ಸಿಗುವುದು ಪಕ್ಕಾ ಎನ್ನುವಂತಿದೆ. ಇದರಿಂದ ಸಕ್ರೀಯವಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಸೌಮ್ಯ ಅವರು ಜಯನಗರದಿಂದ ಸ್ಪರ್ಧಿಸುವುದು ನಿಜ ಅಂತ ರಾಮಲಿಂಗಾ ರೆಡ್ಡಿ ಸಂಬಂಧಿಕರೊಬ್ಬರು ತಿಳಿಸಿದ್ದಾರೆ.
ಬೊಮ್ಮನಹಳ್ಳಿ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಸೌಮ್ಯ
ಸೌಮ್ಯ ರೆಡ್ಡಿ ಬೊಮ್ಮನಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿದ್ದವು. ಆದರೆ, ಇದೀಗ ಜಯನಗರದಲ್ಲಿ ಸೌಮ್ಯ ಅವರು ಸುತ್ತಾಡುತ್ತಿರುವುದನ್ನು ನೋಡಿದರೆ ಬೊಮ್ಮನಹಳ್ಳಿಯಿಂದ ಹಿಂದೆ ಸರಿದು ಜಯನಗರಕ್ಕೆ ಲಗ್ಗೆ ಇಡುವುದು ಪಕ್ಕಾ ಆದಂತಾಗಿದೆ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ.
ರಾಮಲಿಂಗ ರೆಡ್ಡಿ ಲೆಕ್ಕಾಚಾರವೇನು?
ರಾಮಲಿಂಗಾ ರೆಡ್ಡಿ ಅವರು ಬಿ.ಟಿ.ಎಂ. ಕ್ಷೇತ್ರದಿಂದಲೇ ಸ್ಪರ್ಧಿಸುವುದು ಖಚಿತವಾಗಿದೆ. ಈ ಹಿನ್ನೆಯಲ್ಲಿ ಪಕ್ಕದ ಕ್ಷೇತ್ರವಾಗಿರುವ ಜಯನಗರದಿಂದ ಸೌಮ್ಯ ಅವರನ್ನು ನಿಲ್ಲಿಸಿದರೆ ಪ್ರಚಾರಕ್ಕೆ ಅನುಕೂಲವಾಗಲಿದೆ ಎನ್ನುವುದು ರಾಮಲಿಂಗಾ ರೆಡ್ಡಿ ಅವರ ಲೆಕ್ಕಾಚಾರವಾಗಿದೆ.
ವಿಜಯ್ ಕುಮಾರ್ ಗೆ ತೀವ್ರ ಪೈಪೋಟಿ
ಒಂದು ವೇಳೆ ಸೌಮ್ಯ ಅವರು ಮುಂದಿನ ಚುನಾವಣೆಯಲ್ಲಿ ಜಯನಗರದಿಂದ ಸ್ಪರ್ಧಿಸುವುದು ಖಚಿತವಾದರೆ ಹಾಲಿ ಬಿಜೆಪಿ ಶಾಸಕ ವಿಜಯ್ ಕುಮಾರ್ ಅವರಿಗೆ ಭಾರೀ ಹೊಡೆತ ಬೀಳಲಿದೆ. ಪಕ್ಕದ ಬಿಟಿಎಂ ಲೇಔಟ್ ನಿಂದ ಪ್ರಭಾವಿಯಾಗಿರುವ ರಾಮಲಿಂಗಾ ರೆಡ್ಡಿ ಸ್ಪರ್ಧಿಸುತ್ತಿದ್ದರಿಂದ ಸಹಜವಾಗಿ ಜಯನಗರದ ಕ್ಷೇತ್ರದ ಮೇಲೆ ಪ್ರಭಾವ ಬೀಳಲಿದೆ. ಹಿನ್ನೆಯಲ್ಲಿ ಜಯನಗರ ಕ್ಷೇತ್ರ ತೀವ್ರ ಪೈಪೋಟಿಯಿಂದ ಕೂಡುವುದರಲ್ಲಿ ಯಾವುದೇ ಅನುಮಾನವೇ ಇಲ್ಲ.