ಗೋವು ಸಂಚರಿಸುವ ಸ್ಥಳಗಳನ್ನು ಪ್ಲಾಸ್ಟಿಕ್ ಮುಕ್ತವಾಗಿಸಬೇಕು
ಬೆಂಗಳೂರು, ಸೆ 8: ಅಮೃತವನ್ನು ಕೊಡುವ ಗೋವಿಗೆ ನಾವು ಪ್ಲಾಸ್ಟಿಕ್ ರೂಪದ ವಿಷವನ್ನು ಕೊಡಬಾರದು, ಮಾನವರಿಗೆ ಮಾತ್ರ ಬದುಕುವ ಹಕ್ಕಿದೆ ಎಂಬುದರಲ್ಲಿ ಅರ್ಥವಿಲ್ಲ. ಎಲ್ಲಾ ಜೀವಿಗಳಿಗೂ ಬದುಕುವ ಹಕ್ಕಿದೆ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ಅಭಿಪ್ರಾಯ ಪಟ್ಟಿದ್ದಾರೆ.
ಗಿರಿನಗರದ ಶಾಖಾಮಠದಲ್ಲಿ ಬುಧವಾರ (ಸೆ 7) ಗೋಚಾತುರ್ಮಾಸ್ಯದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ರಾಘವೇಶ್ವರ ಶ್ರೀಗಳು, 'ಮರ್ನೆವಾಲಾ ಕ್ಯಾ ನಹಿ ಕಾಯೇಗಾ' ಎಂಬ ಹಿಂದಿ ನುಡಿಗಟ್ಟನ್ನು ಉಲ್ಲೇಖಿಸಿ, ಇಂದು ಕಾಡಿನ ನಾಶ, ಗೋಮಾಳ- ಕೆರೆಗಳ ಅತಿಕ್ರಮಣಗಳಿಂದಾಗಿ ಹಸುಗಳಿಗೆ ಮೇವು ಇಲ್ಲದಂತಾಗಿದೆ. (ಕಾಲ ಕೆಟ್ಟಿದೆಯೆಂದು ಕೂರಬೇಡ, ತನ್ನ ತನವ ಬಿಡಬೇಡ)
ಬೀದಿಬದಿಯಲ್ಲಿ ಬಿದ್ದಿರುವ ಪ್ಲಾಸ್ಟಿಕ್ ವಸ್ತುಗಳನ್ನು ಹಸುಗಳು ತಿನ್ನುತ್ತಿವೆ, ಪ್ಲಾಸ್ಟಿಕ್ ಜೀರ್ಣವಾಗದೆ, ಮಾರಣಾಂತಿಕೆ ನೋವಿನೊಂದಿಗೆ ಸಾವನ್ನಪ್ಪುತ್ತಿವೆ. ಹಾಗಾಗಿ ಗೋವುಗಳು ಸಂಚರಿಸುವ ಜಾಗಗಳನ್ನು ಪ್ಲಾಸ್ಟಿಕ್ ಮುಕ್ತವಾಗಿಸುವುದು ಅನಿವಾರ್ಯವಾಗಿದೆ ಎಂದು ಶ್ರೀಗಳು ಹೇಳಿದ್ದಾರೆ.
ಪ್ಲಾಸ್ಟಿಕ್ ಕುರಿತು ಜಾಗೃತಿ ಮೂಡಿಸಲು ಮತ್ತು ಗೋವು ಸಂಚರಿಸುವ ಜಾಗಗಳನ್ನು ಪ್ಲಾಸ್ಟಿಕ್ ಮುಕ್ತವಾಗಿಸುವ ಕುರಿತು ರಾಮಚಂದ್ರಾಪುರ ಮಠವು ಬೃಹತ್ ಆಂದೋಲನವನ್ನು ಹಂಬಿಕೊಂಡಿದ್ದು, ಇದಕ್ಕೆ 'ಅಮೃತಪಥ' ಎಂದು ಹೆಸರಿಸಲಾಗಿದೆ.
ಗೋವಿನ ಬಗ್ಗೆ ಕಳಕಳಿ ಇರುವವರೆಲ್ಲರೂ ಈ ಆಂದೋಲನದಲ್ಲಿ ಭಾಗವಹಿಸಬಹುದಾಗಿದ್ದು, ಗೋವುಗಳಿಗೆ ಮೃತ್ಯು ಪಥವಾಗಿರುವ ಪರಿಸರವನ್ನು ಅಮೃತಪಥವನ್ನಾಗಿಸಬೇಕಾಗಿದೆ.
ಇದು ಸರ್ಕಾರದ ಕರ್ತವ್ಯವಾಗಿದ್ದು, ಸ್ವಚ್ಛ ಭಾರತ ಅಭಿಯಾನದಂತಹ ಯೋಜನೆಗಳನ್ನುಈ ದಿಶೆಯಲ್ಲಿ ಬಳಸಲು ಸರ್ಕಾರಗಳು ಗಮನ ಹರಿಸಬೇಕಾಗಿದೆ ಎಂದು ರಾಘವೇಶ್ವರ ಶ್ರೀಗಳು ಹೇಳಿದ್ದಾರೆ.
ಬೀದರ್ ಚಿದಂಬರಾಶ್ರಮದ ಶಿವಕುಮಾರ ಮಹಾಸ್ವಾಮಿಗಳು ಸಂತಸಂದೇಶ ನೀಡಿ, ಗಂಗಾಮಾತಾ, ಗೋಮಾತಾ, ಗೀತಾಮಾತ ಹಾಗೂ ಭಾರತಮಾತಾ ನಮಗೆ ಪವಿತ್ರವಾಗಿದ್ದು, ನಮ್ಮ ಮಕ್ಕಳಿಗೆ ನಾವು ಸಂಸ್ಕಾರವನ್ನು ನೀಡದಿರುವ ಪರಿಣಾಮ ಅವರಿಗೆ ಇವುಗಳ ಬಗ್ಗೆ ಅರಿವಿಲ್ಲ ಎಂದು ವಿಷಾದಿಸಿದರು.
ಕಲಾವಿದರಾಗಿ, ಕಲೆಗಳ ಮೂಲಕವೇ ಗೋ ಸೇವೆಯಲ್ಲಿ ತೊಡಗಿಕೊಂಡಿರುವ ಶ್ರೀಧರ ಹೊಳ್ಳ ದಂಪತಿಗಳು ಹಾಗೂ ಪಂಚಗವ್ಯ ಗುರುಕುಲಂನ ಆಚಾರ್ಯ ನಿರಂಜನ ವರ್ಮಾಜಿ ಅವರಿಗೆ ಶ್ರೀಗಳು ಗೋಸೇವಾ ಪುರಸ್ಕಾರವನ್ನು ಅನುಗ್ರಹಿಸಿದರು. (ಹಾಲಿಗೆ ಹಾಲೇ ಪರ್ಯಾಯ, ಹಾಲಾಹಲವಲ್ಲ)
ಶ್ರೀಭಾರತೀಪ್ರಕಾಶನವು ಹೊರತಂದ ಋಗ್ವೇದ ಪಂಚ ಸೂಕ್ತ ಹಾಗೂ ಸಾಧನಾಪಂಚಕ ಪ್ರವಚನ ಮಾಲಿಕೆಯ ದೃಶ್ಯ ಮುದ್ರಿಕೆಯನ್ನು ಸಾನ್ನಿಧ್ಯ ವಹಿಸಿದ್ದ ಸಂತರು ಲೋಕಾರ್ಪಣೆ ಮಾಡಿದರು.
ಸಭಾ ಕಾರ್ಯಕ್ರಮದ ನಂತರ ಕಲಾರಾಮ ವೇದಿಕೆಯಲ್ಲಿ ಸುಬ್ರಹ್ಮಣ್ಯಂ ಅಕಾಡಮಿ ಆಫ್ ಪರ್ಫಾರ್ಮಿಂಗ್ ಆರ್ಟ್ ವಿದ್ಯಾರ್ಥಿಗಳಿಂದ ವಾಯ್ಲಿನ್ ವಾದನ ನಡೆಯಿತು.
ಮಾಜಿ ಶಾಸಕರಾದ ಬೇಳೂರು ಗೋಪಾಲಕೃಷ್ಣ, ಪಂಚಗವ್ಯ ಗುರುಕುಲಂನ ಸದಸ್ಯರು ಉಪಸ್ಥಿತರಿದ್ದು ಶ್ರೀಗಳಿಂದ ಆಶೀರ್ವಾದ ಪಡೆದರು. ಶ್ರೀಮಠದ ಪದಾಧಿಕಾರಿಗಳು, ವಿವಿಧ ಭಾಗಗಳ ಶಿಷ್ಯ ಭಕ್ತರು ಉಪಸ್ಥಿತರಿದ್ದರು.