ಗೋಸೇವೆಗಾಗಿ ನೂರು ದಿನ ನೂರು ಜನ ವಿಶಿಷ್ಟ ಅಭಿಯಾನ
ಗೋಸೇವೆಗಾಗಿ 'ನೂರು ದಿನ ನೂರು ಜನ' ಎಂಬ ವಿಶಿಷ್ಟ ಅಭಿಯಾನವನ್ನು ಹಮ್ಮಿಕೊಳ್ಳಲು ಕರ್ನಾಟಕ ರಾಜ್ಯ ಗೋ ಪರಿವಾರ ನಿರ್ಧರಿಸಿದೆ. ನವೆಂಬರ್ ತಿಂಗಳಲ್ಲಿ ಅಭಯಾಕ್ಷರ ಸಪ್ತಾಹವನ್ನು ಆಯೋಜಿಸುವ ಮೂಲಕ ಅಭಯಾಕ್ಷರ ಆಂದೋಲನಕ್ಕೆ ವೇಗ ನೀಡಲು ಕೂಡಾ ನಿರ್ಧಾರ.
ಬೆಂಗಳೂರು, ಅ 15: ಗೋಸೇವೆಗಾಗಿ 'ನೂರು ದಿನ ನೂರು ಜನ' ಎಂಬ ವಿಶಿಷ್ಟ ಅಭಿಯಾನವನ್ನು ಹಮ್ಮಿಕೊಳ್ಳಲು ಕರ್ನಾಟಕ ರಾಜ್ಯ ಗೋ ಪರಿವಾರ ನಿರ್ಧರಿಸಿದೆ.
ರಾಘವೇಶ್ವರ ಭಾರತೀ ಸ್ವಾಮೀಜಿಯವರ ಸಮ್ಮುಖದಲ್ಲಿ ಭಾನುವಾರ ( ಅ 15) ನಡೆದ ರಾಜ್ಯ ಗೋಪರಿವಾರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಅಧ್ಯಕ್ಷ ಪಾಂಡುರಂಗ ಮಹಾರಾಜ್, ಪ್ರಧಾನ ಕಾರ್ಯದರ್ಶಿ ಡಾ.ವೈ.ವಿ.ಕೃಷ್ಣಮೂರ್ತಿ, ಯೋಜಕರಾದ ಚಕ್ರವರ್ತಿ ಸೂಲಿಬೆಲೆ, ವಿದ್ವಾನ್ ಜಗದೀಶ್ ಶರ್ಮಾ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
ದೇಶದಲ್ಲಿ ಗೋಸಂರಕ್ಷಣೆ ಮತ್ತು ಸಂವರ್ಧನೆಗಾಗಿ ಪ್ರಧಾನಿ ಹಾಗೂ ಮುಖ್ಯಮಂತ್ರಿಗಳಿಗೆ ಐದು ಕೋಟಿ ಮಂದಿ ಪ್ರತ್ಯೇಕ ಅರ್ಜಿಯ ಮೂಲಕ ಹಕ್ಕೊತ್ತಾಯ ಮಂಡಿಸುವ ಬೃಹತ್ ಆಂದೋಲನವನ್ನು ಭಾರತೀಯ ಗೋ ಪರಿವಾರ ವತಿಯಿಂದ ಹಮ್ಮಿಕೊಳ್ಳಲಾಗಿದ್ದು, ರಾಜ್ಯಾದ್ಯಂತ ಇದರ ಸಮನ್ವಯಕ್ಕೆ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುವ ಸೇವಾಸಕ್ತರು ಈ ಅಭಿಯಾನದಲ್ಲಿ ತೊಡಗಿಸಿಕೊಳ್ಳಬಹುದಾಗಿದೆ.
ಈ ಅಹಿಂಸಾತ್ಮಕ ಆಂದೋಲನದಲ್ಲಿ ಕನಿಷ್ಠ ನೂರು ದಿನ ಸೇವೆ ಸಲ್ಲಿಸಲು ಆಸಕ್ತಿ ಇರುವ ಯುವಕರಿಗೆ ಅಗತ್ಯ ತರಬೇತಿ ನೀಡಿ, ರಾಜ್ಯದ ವಿವಿಧ ತಾಲೂಕುಗಳಿಗೆ ನಿಯೋಜಿಸಲಾಗುವುದು. ಸೇವಾರ್ಥಿಗಳ ಊಟ, ವಸತಿ, ಪ್ರಯಾಣವೆಚ್ಚವನ್ನು ಗೋಪರಿವಾರ ಭರಿಸಲಿದೆ.
ಆಸಕ್ತರು ಗೋ ಪರಿವಾರ ಕಾರ್ಯಾಲಯ ಕಾರ್ಯದರ್ಶಿ ಡಾ. ರವಿ (9483942776) ಅವರನ್ನು ಸಂಪರ್ಕಿಸಬಹುದು.
ರಾಜ್ಯದಲ್ಲಿ ನವೆಂಬರ್ ತಿಂಗಳಲ್ಲಿ ಅಭಯಾಕ್ಷರ ಸಪ್ತಾಹವನ್ನು ಆಯೋಜಿಸುವ ಮೂಲಕ ಅಭಯಾಕ್ಷರ ಆಂದೋಲನಕ್ಕೆ ವೇಗ ನೀಡಲು ಕೂಡಾ ನಿರ್ಧರಿಸಲಾಯಿತು.
ಡಿಸೆಂಬರ್ 3ರಂದು ಕಲ್ಬುರ್ಗಿಯಿಂದ ಆರಂಭವಾಗುವ ಅಭಯ ಗೋಯಾತ್ರೆ ಉದ್ಘಾಟನಾ ಸಮಾರಂಭದ ಬಗ್ಗೆ ಮತ್ತು ಜನವರಿ 21ರಂದು ಬೆಂಗಳೂರಿನಲ್ಲಿ ನಡೆಯುವ ಸಮಾರೋಪ ಸಮಾರಂಭದ ಕಾರ್ಯಯೋಜನೆ ಬಗ್ಗೆಯೂ ವಿಸ್ತೃತ ಚರ್ಚೆ ನಡೆಯಿತು.