ರಾಮ್ ರಹೀಮ್ ಸಿಂಗ್ ಬೆಂಗಳೂರಿನ ಆಶ್ರಮಕ್ಕೆ ಬೀಗ
ಬೆಂಗಳೂರು, ಆಗಸ್ಟ್. 27 : ಗುರ್ಮಿತ್ ರಾಮ್ ರಹೀಮ್ ಸಿಂಗ್ ಬೆಂಗಳೂರಿನಲ್ಲಿಯೂ ಆಶ್ರಮ ಹೊಂದಿದ್ದು, ಶುಕ್ರವಾರದ ತೀರ್ಪಿನ ಬಳಿಕ ಆಶ್ರಮಕ್ಕೆ ಬೀಗ ಜಡಿಯಲಾಗಿದೆ. ನಾಲ್ಕು ಜನರು ಬೆಂಗಳೂರಿನಲ್ಲಿನ ಆಶ್ರಮದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ರಾಮ್ ರಹೀಮ್ ತೀರ್ಪು : ನ್ಯಾಯಮೂರ್ತಿಗಳಿಗೆ ಝಡ್ ಪ್ಲಸ್ ಭದ್ರತೆ?
ಪೀಣ್ಯ ಸಮೀಪದ ರುಕ್ಮಿಣಿ ನಗರದಲ್ಲಿ ರಾಮ್ ರಹೀಮ್ ಸಿಂಗ್ ಆಶ್ರಮವಿದೆ. ಇಲ್ಲಿ ಬಾಬಾಗೆ ಯಾವುದೇ ಅನುಯಾಯಿಗಳಿಲ್ಲ. ಆದರೆ, ಬೆಂಗಳೂರಿಗೆ ವಲಸೆ ಬಂದಿರುವ ಬಾಬಾ ಭಕ್ತರಿಗಾಗಿ ಈ ಆಶ್ರಮ ಕಟ್ಟಲಾಗಿದೆ.
ಶುಕ್ರವಾರ ರಾಮ್ ರಹೀಮ್ ಸಿಂಗ್ ಅತ್ಯಾಚಾರ ಪ್ರಕರಣದ ತೀರ್ಪು ಹೊರ ಬಂದ ಬಳಿಕ ಆಶ್ರಮಕ್ಕೆ ಬೀಗ ಜಡಿಯಲಾಗಿದೆ. ಅಲ್ಲಿದ್ದ ನಾಲ್ವರು ತಮ್ಮ ತವರು ರಾಜ್ಯಕ್ಕೆ ವಾಪಸ್ ತೆರಳಿದ್ದಾರೆ. ಡಿಸಿಪಿ ಚೇತನ್ ರಾಥೋಡ್ ಶುಕ್ರವಾರ ಆಶ್ರಮದ ಹೊರಗೆ ಭದ್ರತೆಗಾಗಿ ಕೆಲವು ಪೊಲೀಸರನ್ನು ನಿಯೋಜನೆ ಮಾಡಿದ್ದರು.
ಪೊಲೀಸ್ ಇಲಾಖೆ ಒನ್ ಇಂಡಿಯಾಕ್ಕೆ ನೀಡಿರುವ ಮಾಹಿತಿಯಂತೆ ಈ ಆಶ್ರಮ ತುಂಬಾ ಚಿಕ್ಕದಾಗಿದ್ದು, ಕೇವಲ ಐದು ಜನರು ಈ ಆಶ್ರಮದಲ್ಲಿದ್ದಾರೆ. ಶುಕ್ರವಾರ ಆಶ್ರಮದಲ್ಲಿದ್ದವರು ಹರ್ಯಾಣಕ್ಕೆ ತೆರಳಿದ್ದರಿಂದ ಆಶ್ರಮಕ್ಕೆ ನೀಡಿದ್ದ ಪೊಲೀಸ್ ಭದ್ರತೆಯನ್ನು ವಾಪಸ್ ಪಡೆಯಲಾಗಿದೆ.
ಅತ್ಯಾಚಾರ ಪ್ರಕರಣದಲ್ಲಿ ರಾಮ್ ರಹೀಮ್ ಸಿಂಗ್ ಅಪರಾಧಿ ಎಂದು ಶುಕ್ರವಾರ ಸಿಬಿಐ ವಿಶೇಷ ಕೋರ್ಟ್ ತೀರ್ಪು ನೀಡಿದೆ. ಬಾಬಾರನ್ನು ರೋಹ್ಟಕ್ ಜೈಲಿಗೆ ಕಳಿಸಲಾಗಿದ್ದು, ಸೋಮವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಾಗುತ್ತದೆ.