ಯಡಿಯೂರಪ್ಪ ಪರಿಶುದ್ಧ, ಪ್ರಾಮಾಣಿಕ: ಜೇಠ್ಮಲಾನಿ
'ರಾಜಕೀಯ ಜಗತ್ತಿನಲ್ಲಿ ಎಲ್ಲ ರೀತಿಯ ಆಕ್ರಮಣಗಳು ಯಡಿಯೂರಪ್ಪ ಮೇಲೆ ಆಗಿದ್ದು, ಅವನ್ನೆಲ್ಲ ಮೀರಿ ಸ್ವಚ್ಛ ರಾಜಕಾರಣಿಯಾಗಿದ್ದಾರೆ' ಎಂದು ಯಡಿಯೂರಪ್ಪ ಅವರನ್ನು ಜೇಠ್ಮಲಾನಿ ಕೊಂಡಾಡಿದರು.
ಈ ಸಂದರ್ಭದಲ್ಲಿ ನಿವೃತ್ತ ಲೋಕಾಯುಕ್ತ ನ್ಯಾ ಎನ್ ಸಂತೋಷ್ ಹೆಗ್ಡೆ ಅವರನ್ನು ತರಾಟೆಗೆ ತೆಗೆದುಕೊಂಡ ಜೇಠ್ಮಲಾನಿ, ಜಸ್ಟೀಸ್ ಹೆಗ್ಡೆ ಸಲ್ಲಿಸಿದ್ದ ಅಕ್ರಮ ಗಣಿಗಾರಿಕೆ ವರದಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಹಾಗಾಗಿ ಈಗಲೂ ಯಡಿಯೂರಪ್ಪ ಮೇಲೆ ಗೂಬೆ ಕೂರಿಸುವುದು ತರವಲ್ಲ. ಅವರೊಬ್ಬ ಸ್ವಚ್ಛ ರಾಜಕಾರಣಿ ಎಂದು ಜೇಠ್ಮಲಾನಿ ಅಭಿಪ್ರಾಯಪಟ್ಟರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ವರದಿಯನ್ನು ಸಿದ್ಧಪಡಿಸುವ ಮುನ್ನ ಮುಖ್ಯಮಂತ್ರಿಗಳ ಅಭಿಪ್ರಾಯ ಪಡೆದುಕೊಳ್ಳಬೇಕು. ಅಕ್ರಮ ಗಣಿಗಾರಿಕೆ ಪ್ರಕರಣ ಬಗ್ಗೆ ವರದಿ ನೀಡುವಾಗ ಜಸ್ಟೀಸ್ ಹೆಗ್ಡೆ ಸಹ ಯಡಿಯೂರಪ್ಪನವರ ಪ್ರತಿಕ್ರಿಯೆ ಕೇಳಬೇಕಿತ್ತು. ಸುಪ್ರೀಂಕೋರ್ಟಿನ ನ್ಯಾಯಮೂರ್ತಿಯಾಗಿದ್ದ ಸಂತೋಷ್ ಹೆಗ್ಡೆ ಅವರು ಅಂತಹ ಒಂದು ಸರಳ ವಿಷಯವನ್ನು ಮರೆತಿದ್ದರು. ಅದಕ್ಕೆ ಅವರ ವರದಿಯನ್ನು ಹೈಕೋರ್ಟ್ ತಳ್ಳಿ ಹಾಕಿದೆ ಎಂದು ಜೇಠ್ಮಲಾನಿ ಹೇಳಿದರು.
ಯಡಿಯೂರಪ್ಪ ಪರಿಶುದ್ಧ, ಪ್ರಾಮಾಣಿಕ ಆಡಳಿತಗಾರ. ಆದರೆ ಕೆಲವು ಸಂದರ್ಭ ಅಥವಾ ಕೆಟ್ಟ ಗಳಿಗೆ ಅವರನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ ಎಂದೂ ಯಡಿಯೂರಪ್ಪ ಬಗ್ಗೆ ಜೇಠ್ಮಲಾನಿ ಹೇಳಿದರು.
ಪುಸ್ತಕದ ಕೇಂದ್ರ ವ್ಯಕ್ತಿ ಯಡಿಯೂರಪ್ಪ ಮಾತನಾಡಿ, ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ನನ್ನನ್ನು ಬಲಿಪಶು ಮಾಡಿದ್ದು ಹೆಚ್ಚು ಘಾಸಿ ಮಾಡಿದೆ. ಈ ಕೃತಿಯಲ್ಲಿ ನನ್ನ ಬದುಕಿನ ಶೇ. 10ರಷ್ಟು ಘಟನಾವಳಿಗಳು ಮಾತ್ರ ದಾಖಲಾಗಿವೆ. ಉಳಿದವನ್ನು ನಾನು ದಿನಚರಿಯಲ್ಲಿ ಬರೆದಿಟ್ಟಿದ್ದು, ಅಗತ್ಯ ಬಿದ್ದಾಗ ಹೇಳುತ್ತಿರುತ್ತೇನೆ. ಅವುಗಳಲ್ಲಿ ಹಾವೇರಿ ಗೋಲಿಬಾರ್, ಅಂಬೇಡ್ಕರ್ ಭಾವಚಿತ್ರ ತೆಗೆಸಿಹಾಕಿಸಿದೆ ಎಂಬ ಅಪಪ್ರಚಾರ, ರಾಜ್ಯಪಾಲರು ಮಾಡುತ್ತಿದ್ದ ಟೀಕೆ, ಅಮೆರಿಕ ವಿವಿ ಡಾಕ್ಟರೇಟ್ ನೀಡಿದಾಗ ಕೇಳಿಬಂದ ಟೀಕೆ ಮುಂತಾದ ವಿಷಯಗಳ ಬಗ್ಗೆ ನಡೆದಿದ್ದೇನು ಎಂಬುದನ್ನು ನಾನು ಹೇಳಬೇಕಾಗಿದೆ ಎಂದು ಹೇಳಿದರು.
ವಿಧಾನಸಭೆ ಮಾಜಿ ಅಧ್ಯಕ್ಷ ರಮೇಶ್ ಕುಮಾರ್, ಮಾಜಿ ಸಿಎಂ ಜಗದೀಶ್ ಶೆಟ್ಟರ್, B.S. Yeddyurappa, his vision and passions ಪುಸ್ತಕ ಬರೆದಿರುವ ರಾಮಚಂದ್ರ ಮುಂತಾದವರು ಪಸ್ತಕ ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದರು.