ಬೆಂಗಳೂರು ಉತ್ತರ : ಯುವ ಕಾಂಗ್ರೆಸ್ ಸದಸ್ಯರಿಗೆ ಸನ್ಮಾನ
ಬೆಂಗಳೂರು, ಜ.23 : ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಕಾರ್ಯಕರ್ತರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿದ ಯುವ ಕಾಂಗ್ರೆಸ್ ಸದಸ್ಯರನ್ನು ಎಐಸಿಸಿ ಮಾಧ್ಯಮ ವಿಭಾಗದ ಸಂಪನ್ಮೂಲ ವ್ಯಕ್ತಿ ಪ್ರೊ.ಎಂ.ವಿ.ರಾಜೀವ್ ಗೌಡ ಬುಧವಾರ ಸನ್ಮಾನಿಸಿದರು. ಮುಂದಿನ ಲೋಕಸಭೆ ಚುಣಾವಣೆಗೆ ಸಿದ್ಧರಾಗಿ ಎಂದು ಈ ಸಮಯದಲ್ಲಿ ಯುವ ಕಾಂಗ್ರೆಸ್ ಸದಸ್ಯರಿಗೆ ಕರೆ ನೀಡಲಾಯಿತು.
ಬುಧವಾರ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಅತಿ ಹೆಚ್ಚು ಕಾರ್ಯಕರ್ತರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿದ ಯುವ ಕಾಂಗ್ರೆಸ್ ಸದಸ್ಯರನ್ನು ಸನ್ಮಾನಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕೃಷಿ ಸಚಿವ ಕೃಷ್ಣ ಭೈರೇಗೌಡ, ಯುವ ಕಾಂಗ್ರೆಸ್ ಅಧ್ಯಕ್ಷ ಅರ್ಷದ್ ರಿಜ್ವಾನ್, ಬಿಬಿಎಂಪಿ ಉಪ ಮೇಯರ್ ಇಂದಿರಾ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಚಿತ್ತಾಪುರ ಶಾಸಕ ಪ್ರಿಯಾಂಕ ಖರ್ಗೆ, ಮನೆ-ಮನೆ ಪ್ರಚಾರ ನಡೆಸುವ ಕುರಿತು ಯುವ ಕಾಂಗ್ರೆಸ್ ಸದ್ಯರಿಗೆ ಸಲಹೆಗಳನ್ನು ನೀಡಿದರು. ಇಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಿಕೊಂಡು ಪ್ರಚಾರ ನಡೆಸುವ ಅಗತ್ಯವಿದೆ ಎಂದು ಹೇಳಿದರು. ಪ್ರೊ.ರಾಜೀವ್ ಗೌಡ ಅವರು, ಯುವ ಕಾಂಗ್ರೆಸ್ ಸದಸ್ಯರಿಗೆ ನಾಯಕತ್ವದ ಕುರಿತು ತರಬೇತಿ ನೀಡಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದರು.
ಹೆಬ್ಬಾಳ ಕ್ಷೇತ್ರದ ರೆಹಮಾನ್ ಪರೀಫ್, ಕೆಪಿಸಿಸಿ ಕಾರ್ಮಿಕ ವಿಭಾಗದ ಅಧ್ಯಕ್ಷ ಪ್ರಕಾಶಂ, ಮಾಜಿ ಸಚಿವ ನಾಸೀರ್ ಅಹಮದ್, ಕರ್ನಾಟಕ ಯುವ ಕಾಂಗ್ರೆಸ್ ಉಪಾಧ್ಯಕ್ಷ ವರುಣ್ ಪ್ರಸನ್ನ ಕುಮಾರ್ ಸೇರಿದಂತೆ 150ಕ್ಕೂ ಅಧಿಕ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಅಂದಹಾಗೆ ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಯಶವಂತಪುರ, ಮಹಾಲಕ್ಷ್ಮೀ ಲೇ ಔಟ್, ಕೆ.ಆರ್.ಪುರಂ, ಹೆಬ್ಬಾಳ, ಬ್ಯಾಟರಾಯನಪುರ, ಮಲ್ಲೇಶ್ವರಂ, ಪುಲಕೇಶಿ ನಗರ, ದಾಸರಹಳ್ಳಿ ವಿಧಾನಸಭಾ ಕ್ಷೇತ್ರಗಳು ಒಳಪಡುತ್ತದೆ.