ಭಾರತ ಕಂಡ ಶ್ರೇಷ್ಠ ನಾಯಕನಿಗೆ ಅಂತಿಮ ವಿದಾಯ: ರಾಜೀವ್ ಚಂದ್ರಶೇಖರ್
ಬೆಂಗಳೂರು, ಆಗಸ್ಟ್ 16: ಭಾರತ ಶ್ರೇಷ್ಠ ನಾಯಕರ ನಿರ್ಗಮನವಾಗಿದೆ ಹಾಗೂ ಅವರು ಸ್ವರ್ಗದ ಕಡೆಗೆ ಸಾಗಿದ್ದಾರೆ ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
ತಾರಾ ಮೌಲ್ಯದ ರಾಜಕಾರಣಿ, ಅಸಾಮಾನ್ಯ ಕವಿ ನಮ್ಮೊಂದಿಗಿಲ್ಲ. ಅವರು ರಾಜಕಾರಣಿ ಮಾತ್ರ ಆಗಿರಲಿಲ್ಲ. ಒಳ್ಳೆ ಆಲೋಚನೆ ಇರುವ ನಾಯಕರಾಗಿದ್ದರು. ಅವರು ನನ್ನ ಪಾಲಿನ ಅತಿ ದೊಡ್ಡ ಸ್ಫೂರ್ತಿಯಾಗಿದ್ದರು ಮತ್ತು ನಾನು ರಾಜಕಾರಣಕ್ಕೆ ಬರಲು ಹಾಗೂ ಭಾರತೀಯ ಜನತಾ ಪಕ್ಷ ಬೆಂಬಲಿಸಲು ಅತಿ ಮುಖ್ಯ ಕಾರಣರಾಗಿದ್ದರು ಎಂದಿದ್ದಾರೆ.
ಅಗಲಿದ ನಾಯಕನಿಗೆ ಕಂಬನಿ ಸುರಿಸಿದ ರಾಜಕೀಯ ದಿಗ್ಗಜರು
ನಾನು ಯುವ ಉದ್ಯಮಿಯಾಗಿ ವಾಜಪೇಯಿ ಅವರನ್ನು ಹತ್ತಿರದಿಂದ ನೋಡಲು, ತಿಳಿಯಲು, ಅವರ ಜತೆ ಮಾತನಾಡಲು ಹಲವು ಅವಕಾಶಗಳು ಸಿಕ್ಕವು. ಟೆಲಿಕಾಂ ವಲಯದ ಆರಂಭಕ್ಕೆ ಅವರೇ ಕಾರಣರು. ದೇಶದಲ್ಲಿ ಟೆಲಿ ಕಮ್ಯುನಿಕೇಷನ್ ವಲಯ ವಿಸ್ತರಿಸಲು ಅವರು ರೂಪಿಸಿದ ನೀತಿಯು ಕಾರಣವಾಯಿತು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಈ ವರ್ಷಕ್ಕೆ ಟೆಲಿಕಾಂ ವಲಯದ ಸುಧಾರಣೆ ಆರಂಭವಾಗಿ ಇಪ್ಪತ್ತೈದು ವರ್ಷ ಪೂರ್ಣವಾಗುತ್ತಿದೆ. ನರಸಿಂಹರಾವ್ ಅವರ ಅವಧಿಯಲ್ಲಿ ಖಾಸಗಿ ಹೂಡಿಕೆಗೆ ಅವಕಾಶ ನೀಡಲು ಆರಂಭವಾಯಿತು. ಅದಕ್ಕೆ ವಾಜಪೇಯಿ ಅವರು ಪ್ರಧಾನಿ ಆಗಿದ್ದ ಅವಧಿಯಲ್ಲಿ ರೂಪಿಸಿದ ನೀತಿ ಮೂಲಕ ಉತ್ತೇಜನ ಸಿಕ್ಕಿತು.
ಪ್ರಧಾನ ಮಂತ್ರಿಗಳ ವ್ಯಾಪಾರ ಹಾಗೂ ಕೈಗಾರಿಕೆ ಕೌನ್ಸಿಲ್ ನ ಸದಸ್ಯನಾಗಿ ಹಾಗೂ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಸಲಹಾ ಸಮಿತಿಯಲ್ಲಿ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿತ್ತು. ಆಗ ಅವರ ದೂರದೃಷ್ಟಿ, ಬದ್ಧತೆ ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿತ್ತು ಎಂದಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ಬದುಕಿನ ಹೆಜ್ಜೆಗುರುತುಗಳು
ಭಾರತದ ಶ್ರೇಷ್ಠ ನಾಯಕರಾಗಿ ಪ್ರತಿಯೊಬ್ಬ ಭಾರತೀಯರ ಮನಸ್ಸಿನಲ್ಲಿ ಶಾಶ್ವತವಾಗಿ ವಾಜಪೇಯಿ ಇರುತ್ತಾರೆ. ಇನ್ನು ನನ್ನ ಪಾಲಿಗೆ ಈ ತಲೆಮಾರಿನಲ್ಲಿ ನೆಚ್ಚಿನ ಹಾಗೂ ಪ್ರೀತಿಯ ರಾಜಕೀಯ ನಾಯಕರು ವಾಜಪೇಯಿ. ಮೊದಲಿಗೆ ಸಂಸದರಾಗಿ ಹಾಗೂ ನಂತರ ಪ್ರಧಾನಿಯಾಗಿ ನಮ್ಮ ದೇಶದ ರಾಜಕಾರಣಕ್ಕೆ ಮಾನವೀಯತೆ ಹಾಗೂ ಪ್ರಾಮಾಣಿಕತೆ ತಂದವರು ವಾಜಪೇಯಿ ಎಂದು ಸ್ಮರಿಸಿದ್ದಾರೆ.
ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ (1924-2018) ವ್ಯಕ್ತಿಚಿತ್ರ
ನನಗೆ ಗೊತ್ತಿರುವಂತೆ ಭಾರತದ ಮಹಾನ್ ನಾಯಕರಲ್ಲಿ ವಾಜಪೇಯಿ ಒಬ್ಬರು. ಈ ದೇಶಕ್ಕೆ ಸೇವೆ ಸಲ್ಲಿಸಬೇಕು ಎಂದು ಬಯಸುವ ಲಕ್ಷಾಂತರ ಮಂದಿ ಪಾಲಿಗೆ ಸ್ಫೂರ್ತಿ. ನಿಮ್ಮ ಕೊಡುಗೆ ಹಾಗೂ ನಾಯಕತ್ವ ಗುಣವನ್ನು ಸದಾ ಸ್ಮರಿಸುತ್ತೇವೆ ಎಂದು ಹೇಳಿದ್ದಾರೆ ರಾಜೀವ್ ಚಂದ್ರಶೇಖರ್.