ಹರಿಹರದ ಯೋಧನ ಕುಟುಂಬಕ್ಕೆ ರಾಜೀವ್ ಸಹಾಯಹಸ್ತ
ದಾವಣಗೆರೆ, ಫೆಬ್ರವರಿ 16 : ರಾಜಸ್ತಾನದ ಪೋಖ್ರಾನ್ ನಲ್ಲಿ ಫೆಬ್ರವರಿ 12ರಂದು ವೀರಮರಣವನ್ನಪ್ಪಿದ ಹರಿಹರದ ನಿವಾಸಿ ಯೋಧ ಜಾವೇದ್ ಅವರ ಕುಟುಂಬಕ್ಕೆ ಸಂಸದ ರಾಜೀವ್ ಚಂದ್ರಶೇಖರ್ ಅವರು ಸಂತಾಪ ಸೂಚಿಸಿದ್ದು, 2 ಲಕ್ಷ ರುಪಾಯಿಯನ್ನು ಯೋಧನ ಕುಟುಂಬಕ್ಕೆ ನೀಡಿದ್ದಾರೆ.
ಕರ್ನಾಟಕದಿಂದ ಸ್ವತಂತ್ರ ಅಭ್ಯರ್ಥಿಯಾಗಿ ರಾಜ್ಯಸಭೆಗೆ ಆಯ್ಕೆಯಾಗಿರುವ ರಾಜೀವ್ ಚಂದ್ರಶೇಖರ್ ಅವರ ತಂಡ ಮತ್ತು ಫ್ಲಾಗ್ಸ್ ಆಫ್ ಆನರ್ ಫೌಂಡೇಶನ್ ಜಾವೇದ್ ಅವರ ಕುಟುಂಬವನ್ನು ಭೇಟಿಯಾಗಿ ಶುಕ್ರವಾರ ಹಣವನ್ನು ಚೆಕ್ ಮೂಲಕ ನೀಡಿತು.
ವಾಯುಪಡೆಗೆ ಯುದ್ಧ ವಿಮಾನ ಉಡುಗೊರೆ ಕೊಟ್ಟ ರಾಜೀವ್ ಚಂದ್ರಶೇಖರ್
ಮುಂದೆಯೂ ಕೂಡ ಜಾವೇದ್ ಅವರ ಪತ್ನಿ ಸರ್ತಾಜ್ ಬಾನು ಮತ್ತು ಇಬ್ಬರು ಪುಟ್ಟ ಹೆಣ್ಣು ಮಕ್ಕಳಿಗೆ ಬೇಕಾದ ಎಲ್ಲ ರೀತಿಯ ಸಹಾಯವನ್ನು ಒದಗಿಸುವುದಾಗಿ ರಾಜೀವ್ ಚಂದ್ರಶೇಖರ್ ಅವರ ತಂಡ ಭರವಸೆ ನೀಡಿದೆ. ಜಾವೇದ್ ಮತ್ತು ಸರ್ತಾಜ್ ಅವರು 5 ವರ್ಷಗಳ ಹಿಂದೆ ಮದುವೆಯಾಗಿದ್ದರು.
ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ ನಲ್ಲಿ ತರಬೇತಿ ಪಡೆಯುವ ವೇಳೆಗೆ ಆಕಸ್ಮಿಕವಾಗಿ ಬಾಂಬ್ ಸಿಡಿದು ಜಾವೇದ್ ಅವರು ಅಸುನೀಗಿದ್ದರು. ಹರಿಹರದ ನಿವಾಸಿ ಅಬ್ದುಲ್ ಖಾದರ್ ಅವರ ಮಗನಾಗಿರುವ ಜಾವೇದ್ ಅವರು 2014ರಲ್ಲಿ ಸೈನ್ಯವನ್ನು ಸೇರಿದ್ದರು.
ಕೇವಲ ಒಂದೂವರೆ ತಿಂಗಳ ಹಿಂದೆ ಜಾವೇದ್ ಅವರು ತವರೂರಿಗೆ ಬಂದು ಕುಟುಂಬದೊಡನೆ ಆನಂದವಾಗಿ ಕಾಲಕಳೆದು ವಾಪಸ್ ಮರಳಿದ್ದರು. ಜೋಧಪುರದಿಂದ ವಿಶೇಷ ವಿಮಾನದಲ್ಲಿ ಬಂದ ಅವರ ಕಳೇಬರಕ್ಕೆ ಸಕಲ ಗೌರವಗಳೊಂದಿಗೆ ಗುರುವಾರ ಸ್ವಗ್ರಾಮದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.