'ಆರ್.ಆರ್.ನಗರ ಟಿಕೆಟ್ ಕೈ ತಪ್ಪಲು ಸಂತೋಷ್ ಜಿ ಕಾರಣ'
ಬೆಂಗಳೂರು, ಏಪ್ರಿಲ್ 10 : ರಾಜರಾಜೇಶ್ವರಿ ನಗರದ ಬಿಜೆಪಿ ಟಿಕೆಟ್ ಕೈ ತಪ್ಪಿದ್ದರಿಂದ ಜಿ.ಎಚ್.ರಾಮಚಂದ್ರ ಅಸಮಾಧಾನಗೊಂಡಿದ್ದಾರೆ. ಮುಂದಿನ ನಿರ್ಧಾರ ಕೈಗೊಳ್ಳಲು ಪಕ್ಷದ ನಾಯಕರಿಗೆ ಅವಕಾಶ ನೀಡಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ಭಾನುವಾರ ರಾತ್ರಿ ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ 72 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರಕ್ಕೆ ಪಿ.ಎಂ.ಮುನಿರಾಜು ಗೌಡ ಅವರು ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ.
ಕೈ ತಪ್ಪಿದ ಆರ್.ಆರ್.ನಗರದ ಟಿಕೆಟ್, ಜಿ.ಎಚ್.ರಾಮಚಂದ್ರ ಜೆಡಿಎಸ್ಗೆ?
ಇದರಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಬಿಬಿಎಂಪಿಯ ಮಾಜಿ ಸದಸ್ಯ ಜಿ.ಎಚ್.ರಾಮಚಂದ್ರ ಅವರು ಅಸಮಾಧಾನಗೊಂಡಿದ್ದಾರೆ. ಸೋಮವಾರ ಸಂಜೆ ಅವರು ಬೆಂಬಲಿಗರ ಸಭೆ ನಡೆಸಿದರು, ಮುಂದಿನ ನಡೆ ಬಗ್ಗೆ ಚರ್ಚೆ ನಡೆಸಿದರು.
ನಂತರ ಪತ್ರಿಕಾಗೋಷ್ಠಿ ನಡೆಸಿದ ಅವರು, 'ಟಿಕೆಟ್ ಕೈ ತಪ್ಪಲು ಸಂತೋಷ್ ಜಿ ಅವರು ಕಾರಣ. ಎರಡು ದಿನದಲ್ಲಿ ಟಿಕೆಟ್ ನೀಡುವ ಕುರಿತು ಪಕ್ಷದ ನಾಯಕರು ತೀರ್ಮಾನ ಕೈಗೊಳ್ಳಬೇಕು. ಪಕ್ಷದ ಮುಖಂಡರಿಗೆ ಮತ್ತೊಂದು ಅವಕಾಶ ನೀಡಿ, ಮುಂದಿನ ನಿರ್ಧಾರವನ್ನು ಕೈಗೊಳ್ಳುತ್ತೇನೆ' ಎಂದು ಹೇಳಿದರು.
ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಎಚ್ಚರಿಕೆ
'ಆರ್.ಆರ್.ನಗರಕ್ಕೆ ಪಿ.ಎಂ.ಮುನಿರಾಜು ಗೌಡ ಅವರು ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ. ಅಭ್ಯರ್ಥಿ ಘೋಷಣೆ ಮಾಡಲಾಗಿದೆ ಅಷ್ಟೆ, ಆದರೆ ಬಿ ಫಾರಂ ನೀಡಿಲ್ಲ. ನನಗೆ ಬಿ ಫಾರಂ ನೀಡಬೇಕು' ಎಂದು ಜಿ.ಎಚ್.ರಾಮಚಂದ್ರ ಆಗ್ರಹಿಸಿದರು.
'ಟಿಕೆಟ್ ಕೈ ತಪ್ಪಿದ್ದಕ್ಕೆ ಬೇಸರವಾಗಿದೆ. ನನಗೆ ಈ ಬಾರಿಯ ಟಿಕೆಟ್ ಸಿಗಲಿದೆ ಎಂಬ ವಿಶ್ವಾಸವಿತ್ತು. ಕಳೆದ ಎರಡು ಬಾರಿಯೂ ನಾನು ಟಿಕೆಟ್ ಆಕಾಂಕ್ಷಿಯಾಗಿದ್ದೆ. ಪಕ್ಷದ ಹಿರಿಯದ ಮಾರ್ಗದರ್ಶನದಂತೆ ಟಿಕೆಟ್ ನಿರಾಕರಿಸಿದ್ದೆ' ಎಂದು ರಾಮಚಂದ್ರ ಹೇಳಿದರು.
ಹೊರಗಿನ ವ್ಯಕ್ತಿಗೆ ಟಿಕೆಟ್
'ಗ್ರಾಮ ಪಂಚಾಯಿತಿ ಚುನಾವಣೆಯಿಂದಲೂ ನಾನು ಪಕ್ಷದ ಪರವಾಗಿ ಕೆಲಸ ಮಾಡಿದ್ದೇನೆ. ಆದರೆ ಯಾರನ್ನೋ ಓಲೈಕೆ ಮಾಡಲು ಹೊರಗಿನವರಿಗೆ ಟಿಕೆಟ್ ನೀಡಲಾಗಿದೆ. ಮುನಿರಾಜು ಗೌಡ ಅವರು ನನ್ನ ವಿರುದ್ಧ ಷಡ್ಯಂತ್ರ ಮಾಡಿ ಟಿಕೆಟ್ ಕೈ ತಪ್ಪುವಂತೆ ಮಾಡಿದ್ದಾರೆ' ಎಂದು ಜಿ.ಎಚ್.ರಾಮಚಂದ್ರ ಆರೋಪಿಸಿದರು.
'ಯಾವ ಮಾನದಂಡವಿಟ್ಟುಕೊಂಡು ಮುನಿರಾಜು ಅವರಿಗೆ ಟಿಕೆಟ್ ನೀಡಲಾಗಿದೆ ಎಂಬುದು ಗೊತ್ತಿಲ್ಲ. ಹಿಂದೆಯೂ ಜೆಡಿಎಸ್ ಪಕ್ಷಕ್ಕೆ ಕರೆದಿದ್ದರು. ಆಗ ನಾನು ಪಕ್ಷವನ್ನು ಬಿಟ್ಟಿರಲಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದ್ದೇನೆ. ರಾಜಕೀಯ ಅನುಭವವಿಲ್ಲದವರಿಗೆ ಟಿಕೆಟ್ ನೀಡಲಾಗಿದೆ' ಎಂದು ದೂರಿದರು.
ಪಕ್ಷದ ನಾಯಕರಿಗೆ ಅವಕಾಶ
'ಪಕ್ಷದ ನಾಯಕರಿಗೆ ಎರಡು ದಿನಗಳ ಕಾಲ ಅವಕಾಶ ನೀಡುವೆ. ಟಿಕೆಟ್ ನೀಡುವ ಕುರಿತು ಅವರು ತೀರ್ಮಾನವನ್ನು ಕೈಗೊಳ್ಳಲಿ. ಇಲ್ಲವಾದಲ್ಲಿ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ' ಎಂದು ಜಿ.ಎಚ್.ರಾಮಚಂದ್ರ ಎಚ್ಚರಿಕೆ ನೀಡಿದರು.
'ಕ್ಷೇತ್ರದ ಟಿಕೆಟ್ ಕೈ ತಪ್ಪಿದ್ದಕ್ಕೆ ಬೇಸರವಿದೆ. ಬಿಬಿಎಂಪಿ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗೆ ಟಿಕೆಟ್ ನೀಡಿದ್ದು ಸರಿಯಲ್ಲ. ಪಕ್ಷ ಸಂಘಟನೆ ಮಾಡಿದವರಿಗೆ ಆದ್ಯತೆ ನೀಡಬೇಕಿತ್ತು' ಎಂದು ರಾಮಚಂದ್ರ ಅವರು ಹೇಳಿದರು.
ನನಗೂ ಬೇಸರವಾಗಿದೆ
ಜಿ.ಎಚ್.ರಾಮಚಂದ್ರ ಅವರ ಜೊತೆ ಪತ್ರಿಕಾಗೋಷ್ಠಿಯಲ್ಲಿ ನಟಿ ಅಮೂಲ್ಯ ಅವರು ಇದ್ದರು. 'ಮಾವನಿಗೆ ಟಿಕೆಟ್ ಕೈ ತಪ್ಪಿದ್ದು ನನಗೂ ಬೇಸರವಾಗಿದೆ. ಈ ಬಾರಿ ಅವರಿಗೆ ಟಿಕೆಟ್ ನೀಡಬೇಕಿತ್ತು. ನಮ್ಮ ಮಾವ ಪಕ್ಷ ಸಂಘಟನೆಗೆ ಸಾಕಷ್ಟು ಶ್ರಮ ವಹಿಸಿದ್ದಾರೆ. ಅವರ ಶ್ರಮಕ್ಕೆ ಬೆಲೆ ಸಿಗಬೇಕು' ಎಂದು ಹೇಳಿದರು.
ಬಿಜೆಪಿ ನಾಯಕರು ಜಿ.ಎಚ್.ರಾಮಚಂದ್ರ ಅವರಿಗೆ ಟಿಕೆಟ್ ನೀಡುವ ಕುರಿತು ಯಾವ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ.
ಆರ್.ಆರ್.ನಗರದ ಟಿಕೆಟ್ ಘೋಷಣೆ
ಮುನಿರಾಜು ಗೌಡ ಅವರನ್ನು ಆರ್.ಆರ್.ನಗರದ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ. ಪಿ.ಎಂ.ಮುನಿರಾಜು ಗೌಡ ಅವರು ಬಿಜೆಪಿಯ ರಾಜ್ಯ ಕಾರ್ಯದರ್ಶಿಯಾಗಿದ್ದಾರೆ.
2014ರ ಲೋಕಸಭೆ ಚುನಾವಣೆಗೆ ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿ ಕಾಂಗ್ರೆಸ್ನ ಡಿ.ಕೆ.ಸುರೇಶ್ ವಿರುದ್ಧ ಸೋಲು ಕಂಡಿದ್ದರು.
ಪಿ.ಎಂ.ಮುನಿರಾಜು ಗೌಡ ಅವರು ಸ್ಥಳೀಯರು ಅಲ್ಲ ಎಂಬುದು ಸ್ಥಳೀಯ ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.