ರಾಜಕಾಲುವೆ ಒತ್ತುವರಿ ತೆರವು, ಮುಂದುವರಿದ ಹೈಡ್ರಾಮ
ರಾಜಕಾಲುವೆ ಒತ್ತುವರಿ ಮಾಡಿದ್ದಾರೆ ಎನ್ನಲಾದ ಒರಾಯನ್ ಮಾಲ್, ಇಟಿಎ ಮಾಲ್ ಮತ್ತು ಜೆ.ಡಬ್ಲ್ಯೂ ಮ್ಯಾರಿಯಟ್ ಹೊಟೇಲ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಮರ್ಪಣಾ ಟ್ರಸ್ಟ್ ಸಲ್ಲಿಸಿದ್ದ ದೂರಿನ ವಿಚಾರಣೆ ಮತ್ತೆ ಮುಂದೂಡಿಕೆಯಾಗಿದೆ.
ಬೆಂಗಳೂರು, ಫೆಬ್ರವರಿ 6: ರಾಜಕಾಲುವೆ ಒತ್ತುವರಿ ಮಾಡಿದ್ದಾರೆ ಎನ್ನಲಾದ ಒರಾಯನ್ ಮಾಲ್, ಇಟಿಎ ಮಾಲ್ ಮತ್ತು ಜೆ.ಡಬ್ಲ್ಯೂ ಮ್ಯಾರಿಯಟ್ ಹೊಟೇಲ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಮರ್ಪಣಾ ಟ್ರಸ್ಟ್ ಸಲ್ಲಿಸಿದ್ದ ದೂರಿನ ವಿಚಾರಣೆ ಮತ್ತೆ ಮುಂದೂಡಿಕೆಯಾಗಿದೆ.
ಈ ಹಿಂದೆ ಒರಾಯನ್ ಮಾಲ್, ಇಟಿಎ ಮಾಲ್ ಹಾಗೂ ಜೆ.ಡಬ್ಲ್ಯೂ ಮ್ಯಾರಿಯಟ್ ಹೊಟೇಲ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಮರ್ಪಣಾ ಟ್ರಸ್ಟ್ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ನಂತರ ಕೋರ್ಟ್ ಪ್ರಕರಣವನ್ನು ವಿಚಾರಣೆ ನಡೆಸುವಂತೆ ಬಿಬಿಎಂಪಿ ಆಯುಕ್ತರಿಗೆ ಸೂಚಿಸಿತ್ತು. ಅದರಂತೆ ಎರಡು ವಿಚಾರಣೆಗಳನ್ನು ನಡೆಸಿದ ನಂತರ ಇಂದು (ಸೋಮವಾರ) ಮೂರನೇ ಸುತ್ತಿನ ವಿಚಾರಣೆ ಮಲ್ಲೇಶ್ವರಂನ ಐಪಿಪಿ ಕೇಂದ್ರದಲ್ಲಿ ನಿಗದಿಯಾಗಿತ್ತು.[ಫೆಬ್ರವರಿ 15ರಿಂದ ಬಿಎಂಟಿಸಿ ಸ್ಮಾರ್ಟ್ ಕಾರ್ಡ್ ಪಡೆಯಿರಿ]
ಆದರೆ ಬಿಬಿಎಂಪಿ ಆಯುಕ್ತರಾದ ಮಂಜುನಾಥ್ ಪ್ರಸಾದ್ ಅಧಿವೇಶನಕ್ಕೆ ತೆರಳಿದ್ದರು. ಇದರಿಂದಾಗಿ ವಿಚಾರಣೆಗೆ ಆಯುಕ್ತರೇ ಗೈರು ಹಾಜರಾಗಿದ್ದರು. ಪ್ರಸಾದ್ ಅನುಪಸ್ಥಿತಿಯಲ್ಲಿ ಬಿಬಿಎಂಪಿ ಕಾನೂನು ಸಲಹೆಗಾರ ದೇಶಪಾಂಡೆ ನೇತೃತ್ವದಲ್ಲಿ ಕಾಟಾಚಾರಕ್ಕೆ ಸಭೆ ನಡೆಸಲಾಯಿತು. ಸಭೆಯಲ್ಲಿ ಸಮರ್ಪಣಾ ಟ್ರಸ್ಟ್ ದೂರುದಾರ ಶಿವಕುಮಾರ್ ಹಾಗೂ ಓರಾಯನ್ ಮಾಲ್, ಇಟಿಎ ಮಾಲ್ ಮತ್ತು ಜೆ.ಡಬ್ಲ್ಯೂ ಮ್ಯಾರಿಯಟ್ ಹೊಟೇಲ್ ಅಧಿಕಾರಿಗಳೂ ಭಾಗಿಯಾಗಿದ್ದರು.[ಫೆಬ್ರವರಿ 6ರಿಂದ ನಿಮ್ಮ ಮನೆಬಾಗಿಲಿಗೆ ಹಾಪ್ಕಾಮ್ಸ್ ಹಣ್ಣು, ತರಕಾರಿ]
2 ನಿಮಿಷ ಸಭೆ ನಡೆಸಿದ ದೇಶಪಾಂಡೆ ವಿಚಾರಣೆಯನ್ನು ಮುಂದೂಡಿದರು. ಆದರೆ ಮುಂದಿನ ವಿಚಾರಣೆ ದಿನಾಖ ನಿಗದಿಯಾಗಿಲ್ಲ. ಅಧಿವೇಶನ ಮುಗಿದ ಬಳಿಕ ವಿಚಾರಣೆ ನಡೆಸಲಾಗುವುದು ಎಂದು ದೇಶಪಾಂಡೆ ಹೇಳಿದ್ದಾರೆ. "ಇವತ್ತಿನ ದಿನ ಅಧಿವೇಶನ ಇರುವುದರಿಂದ ಆಯುಕ್ತರು ಇಲ್ಲ. ಹಾಗಾಗಿ ಇವತ್ತಿನ ವಿಚಾರಣೆ ನಡೆಸ
ಲು ಸಾಧ್ಯವಾಗಿಲ್ಲ. ಮುಂದಿನ ವಿಚಾರಣೆ ಬಗ್ಗೆ ನೋಟೀಸ್ ಕಳಿಸಲಾಗುವುದು. ಬಿಡಿಎ ಕಡೆಯಿಂದ ಇವತ್ತು ಕೆಲವು ದಾಖಲೆಗಳೂ ಬಂದಿವೆ. ಅದನ್ನು ಪರಿಶೀಲಿಸಲಾಗುವುದು," ಎಂದು ದೇಶಪಾಂಡೆ ಸಭೆಯ ನಂತರ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ಸಮರ್ಪಣಾ ಸಂಸ್ಥೆ ದೂರುದಾರ ಶಿವ ಕುಮಾರ್ "ನಿರೀಕ್ಷಿತ ತಪ್ಪುಗಳನ್ನು ಪಾಲಿಕೆ ಮಾಡುತ್ತಿದೆ. ವಿಚಾರಣೆಯನ್ನು ಪದೇ ಪದೇ ಮುಂದೂಡಲಾಗುತ್ತಿದೆ. ಪಾಲಿಕೆ ಅಧಿಕಾರಿಗಳಿಗೆ ಅಧಿವೇಶನ ಇರುವುದು ಗೊತ್ತಿಲ್ಲ ಅನ್ನುವುದೇ ಹಾಸ್ಯಾಸ್ಪದ. ಬಡವರ 141 ಮನೆಗಳನ್ನು ಒಡೆಯಲಾಗಿದೆ. ಆದರೆ ಶ್ರೀಮಂತರ ಒರಾಯನ್, ಇಟಿಎ ಮಾಲ್, ಜೆ.ಡಬ್ಲ್ಯೂ ಮ್ಯಾರಿಯಟ್ ಹೊಟೇಲನ್ನು ಒಡೆಯುತ್ತಿಲ್ಲ. ಅಧಿಕಾರಿಗಳು ಎಷ್ಟೇ ನಾಟಕ ಆಡಿದರೂ ನಮ್ಮ ಕಾನೂನು ಹೋರಾಟ ಮುಂದುವರೆಯುತ್ತೆ. ಅಧಿಕಾರಿಗಳು ವಿನಾಕಾರಣ ಕಾಲಹರಣ ಮಾಡುತ್ತಿದ್ದಾರೆ," ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.