ಇನ್ನೆರಡು ದಿನ ಬೆಂಗಳೂರಿಗರಿಗೆ ಮಳೆಕಾಟ ತಪ್ಪಿದ್ದಲ್ಲ!
Recommended Video
ಬೆಂಗಳೂರು, ಸೆಪ್ಟೆಂಬರ್ 9: ಅಯ್ಯೋ ಸಾಕಪ್ಪಾ ಈ ಮಳೆಯ ಸಹವಾಸ ಎಂದು ಮಳೆಗೆ ಶಾಪ ಹಾಕುತ್ತಿರುವವರೆಲ್ಲ ಇನ್ನೆರಡು ದಿನ ಇಂಥ ಮಳೆಯನ್ನು ಸಹಿಸಿಕೊಳ್ಳಲೇಬೇಕು! ಹೌದು, ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಇನ್ನೆರಡು(ಸೆ.9,10) ದಿನ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉದ್ಯಾನನಗರಿ ಬೆಂಗಳೂರಿನಲ್ಲಿ ಸೆ. 8 ರಂದು ಸುಮಾರು 50 ಮೀ.ಮೀ. ಮಳೆ ಸುರಿದಿದ್ದು, 4 ಜನ ಮೃತರಾಗಿದ್ದಾರೆ. ಹಲವು ವಾಹನಗಳು, ರಸ್ತೆಗಳು, ಕಟ್ಟಡಗಳು ಜಖಂಗೊಂಡಿವೆ. ಮಧ್ಯಾಹ್ನ ಎರಡು ಗಂಟೆಯೋ, ಸಂಜೆ ಆರಾಯಿತೋ ಎಂದು ಕನ್ ಫ್ಯೂಸ್ ಆಗುವ ಮಟ್ಟಿಗೆ ಮೋಡ ಕವಿದು ಧೋ ಎಂದು ಮಳೆ ಸುರಿಯುತ್ತಿದೆ.
ರಸ್ತೆಯ ತುಂಬೆಲ್ಲ ನೀರು ತುಂಬಿ ಸಂಚಾರ ಅಸ್ತವ್ಯಸ್ತವಾಗಿದೆ. ಉರುಳಿದ ಮರಗಳನ್ನಂತೂ ಲೆಕ್ಕವಿಟ್ಟವರಿಲ್ಲ. ಟ್ರಾಫಿಕ್ ಜಾಮ್, ರಸ್ತೆ ತುಂಬ ಕಸಕಡ್ಡಿ ತುಂಬಿ ಬೆಂಗಳೂರಿನ ಚಿತ್ರವೇ ಬದಲಾಗಿದೆ. ಕೆ.ಆರ್. ಸರ್ಕಲ್ ಅಂಡರ್ ಪಾಸ್, ಶೇಷಾದ್ರಿಪುರ ರೈಲ್ವೇ ಕೆಳಸೇತುವೆ, ಶಿವಾನಂದ ಸರ್ಕಲ್, ಕೆ.ಆರ್.ಮಾರುಕಟ್ಟೆ, ಬಸವೇಶ್ವರ ವೃತ್ತ, ಕೆ.ಆರ್.ರಸ್ತೆ, ಆರ್.ಟಿ.ನಗರ ಟ್ಯಾಗೂರ್ ಕೆಳಸೇತುವೆ, ಮೆಜೆಸ್ಟಿಕ್ ಸುತ್ತಮುತ್ತ ರಸ್ತೆಯಲ್ಲಿ ಆಳೆತ್ತರಕ್ಕೆ ನಿಂತಿದ್ದ ನೀರುಗಳು ವಾಹನ ಸಂಚಾರಕ್ಕೆ ಅಡ್ಡಿಪಡಿಸಿದವು.