ಬೆಂಗಳೂರಿನಲ್ಲಿ ಮಳೆ, ಗಾಳಿಗೆ ಧರೆಗೆ ಉರುಳಿದ ಮರಗಳು
ಬೆಂಗಳೂರು, ಮೇ.21: ನಗರದ ಹಲವೆಡೆ ಮಂಗಳವಾರ ಸಂಜೆ ಭಾರಿ ಮಳೆಯಾಗಿದ್ದು ಹಲವೆಡೆ ಮರಗಳು ಉರುಳಿವೆ. ಸತತ 2 ಗಂಟೆಗಳ ಕಾಲ ಸುರಿದ ಮಳೆಯಿಂದಾಗಿ ಸಂಚಾರ ದಟ್ಟಣೆ ಉಂಟಾಗಿ ಸವಾರರು ಪರದಾಡಿದರು.
ಕುಮಾರಸ್ವಾಮಿ ಬಡಾವಣೆಯ ಲವ ಕುಶ ಉದ್ಯಾನ, ಬನಶಂಕರಿ ಬಿಡಿಎ ಸಂಕೀರ್ಣ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬಳಿ ಮರಗಳು ಉರುಳಿ ಬಿದ್ದಿವೆ.
ಆನೇಕಲ್, ಮಹಾದೇವಪುರ, ದಾಸನಪುರದಲ್ಲಿ ಭಾರಿ ಮಳೆಯಾಗಿದೆ. ಜಯನಗರ ,ಬಿಟಿಎಂ ಲೇಔಟ್, ಕೆ.ಆರ್.ಪುರದಲ್ಲೂ ಮಳೆಯಾಗಿದೆ. ಮೇ.24ರವರೆಗೆ ರಾಜ್ಯದಲ್ಲಿ ಹಲವೆಡೆ ಮಳೆಯಾಗಲಿದೆ ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಮಹದೇವಪುರ ವಲಯದ ಬೆಳ್ಳಂದೂರಿನಲ್ಲಿ ಅತಿ ಹೆಚ್ಚು ಮಳೆ,30 ಮಿ.ಮೀ ಮಳೆ ದಾಖಲಾಗಿದ್ದರೆ, ಕೋಣನಕುಂಟೆಯಲ್ಲಿ 17 ಮಿ.ಮೀ, ಬಿಲೇಕಹಳ್ಳಿಯಲ್ಲಿ 15.5 ಮಿ.ಮೀ ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರದ ವೆಬ್ಸೈಟ್ ತಿಳಿಸಿದೆ.[ಜೂ.2ರಂದು ರಾಜ್ಯಕ್ಕೆ ಮುಂಗಾರು ಪ್ರವೇಶ ಸಾಧ್ಯತೆ]
ರಾತ್ರಿ ವೇಳೆ ಬೆಂಗಳೂರಿನಲ್ಲಿ ಜಡಿ ಮಳೆಯಾಗಿದ್ದು ಕನಿಷ್ಠ 1ಮಿ.ಮೀನಿಂದ ಗರಿಷ್ಠ 31 ಮಿ.ಮೀ ಮಳೆಯಾಗಿದೆ. ವೈಟ್ಫೀಲ್ಡ್, ಜೆ.ಪಿನಗರ, ಯಲಹಂಕ ನ್ಯೂ ಟೌನ್,ಬಾಣಸವಾಡಿ, ಇಂದಿರಾನಗರದ ಸುತ್ತಮುತ್ತ ಹಲವಡೆ ವಿದ್ಯುತ್ ವ್ಯತ್ಯಯ ಕಾಣಿಸಿಕೊಂಡಿತ್ತು.