ಇನ್ನೂ ಮೂರು ದಿನ ಮಳೆ, ಬೆಂಗಳೂರಿಗರೇ ನಿಮ್ಮ ರಕ್ಷಣೆಗೆ ನೀವೇ ಹೊಣೆ
ಬೆಂಗಳೂರು, ಅಕ್ಟೋಬರ್ 6: ಅಬ್ಬರದ ಮಳೆ, ಉಕ್ಕಿ ಹರಿಯುತ್ತಿರುವ ನೀರು, ಮನೆಗಳಿಗೆ ನುಗ್ಗಿದ ನೀರು, ಮಳೆಯಿಂದ ಟ್ರಾಫಿಕ್ ಜಾಮ್...ಇಂಥ ಎಲ್ಲ ಮಾತುಗಳು ಈಗ ಆತಂಕವನ್ನೇನು ಹುಟ್ಟಿಸುತ್ತಿಲ್ಲ. ಏಕೆಂದರೆ ಇವೆಲ್ಲ ನಿತ್ಯದ ವಿದ್ಯಮಾನ. ಬೆಟ್ಟದ ಮೇಲೆ ಮನೆ ಮಾಡಿ ಹುಲಿ-ಕರಡಿಗಳಿಗೆ ಅಂಜಿದೊಡೆಂತಯ್ಯ ಎಂಬಂತಾಗಿದೆ.
ಚಿತ್ರಗಳು : ಮಳೆ ನೀರಿನಲ್ಲಿ ಮುಳುಗಿತು ಬೆಂಗಳೂರಿಗರ ಬದುಕು
ಶುಕ್ರವಾರ ಸಂಜೆ ಕೂಡ ಮಾಮೂಲಿನಂತೆ ಮಳೆ. ಹಲವು ರಸ್ತೆಗಳಲ್ಲಿ ಮೊಳಕಾಲಿನವರೆಗೆ ನೀರು. ಎಲೆಕ್ಟ್ರಾನಿಕ್ ಸಿಟಿ, ಸಿಲ್ಕ್ ಬೋರ್ಡ್, ಬಿಟಿಎಂ ಲೇಔಟ್, ಅಕ್ಕಿತಿಮ್ಮನಹಳ್ಳಿ ಅಲ್ಲಿ ಇಲ್ಲಿ ಎಲ್ಲ ಕಡೆಯೂ ಟ್ರಾಫಿಕ್ ಜಾಮ್. ರಸ್ತೆ ಮೇಲೆಲ್ಲ ಮಳೆ ನೀರಿನ ಜತೆಗೆ ಚರಂಡಿ ನೀರಿನ ಮಿಶ್ರಣ.
ರಾಜ್ಯದಾದ್ಯಂತ ಇನ್ನೂ ಮೂರು ದಿನ ಭಾರೀ ಮಳೆ ಆಗುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲಿಗೆ ಅಕ್ಟೋಬರ್ ಒಂಬತ್ತರವರೆಗೆ, ಮಳೆರಾಯನಿಗೆ ಪ್ರೀತಿ ಮೂಡಿದರೆ ಮತ್ತೂ ಮಳೆ ಮುಂದುವರಿಯಬಹುದು. ಗಮನಿಸಿ ನೋಡಿ, ಎಲೆಕ್ಟ್ರಾನಿಕ್ ಸಿಟಿ, ಸಿಲ್ಕ್ ಬೋರ್ಡ್, ಬೆಳ್ಳಂದೂರು ಅವೇ ಪ್ರದೇಶಗಳಲ್ಲಿ ಮಳೆಯ ಅವಘಡಗಳು ಸಂಭವಿಸುತ್ತಿವೆ.
ಯಾವ ಕೆರೆ ತುಂಬಿತು, ಯಾವ ಹೊಲಕೆ ನೀರು ನುಗ್ಗಿತು?
ಈ ಪ್ರದೇಶಗಳಲ್ಲೇ ಹೀಗೆ ಅನಾಹುತ ಸಂಭವಿಸುತ್ತವೆ ಏಕೆ ಎಂಬುದು ಸಂಶೋಧನೆಗೆ ಯೋಗ್ಯವಾದ ವಿಷಯ. ಜಯನಗರದಂಥ ಬಡಾವಣೆಯಲ್ಲಿರುವ ಅಪಾರ್ಟ್ ಮೆಂಟ್ ನ ಪಾರ್ಕಿಂಗ್ ತುಂಬ ನೀರು ತುಂಬಿ, ನಿವಾಸಿಗಳು ಗಾಬರಿಯಾಗಿದ್ದಾರೆ. ಈ ಬಗ್ಗೆ ತೀರ್ಥಹಳ್ಳಿ ಮೂಲದ ಸುನೀತಾ ಎಂಬುವವರು ಒನ್ಇಂಡಿಯಾ ಕನ್ನಡದ ಜತೆ ಮಾತನಾಡಿದ್ದಾರೆ.
"ಅಪಾರ್ಟ್ ಮೆಂಟ್ ಕುಸಿದು ಹೋಗಿಬಿಡುತ್ತದೇನೋ ಎಂದು ಗಾಬರಿಯಾಗುತ್ತದೆ. ಮೊನ್ನೆ ಮೊನ್ನೆ ಆರ್ಮುಗಂ ಸರ್ಕಲ್ ಹತ್ತಿರದ ಅಪಾರ್ಟ್ ಮೆಂಟ್ ಮೇಲೆ ಮರ ಬಿದ್ದಿದ್ದನ್ನು ನೋಡಿದಾಗಿನಿಂದ ಫ್ಲ್ಯಾಟ್ ನೊಳಗೆ ಇರುವಾಗ ಎದೆ ಹೊಡೆದುಕೊಳ್ಳಲು ಆರಂಭವಾಗುತ್ತದೆ" ಎಂದು ಹೇಳಿದರು.
ಮನೆಯ ಮುಂದೆ ತುಂಬ ಹಳೇ ಮರ, ದುರ್ಬಲವಾಗಿರುವ ವಿದ್ಯುತ್ ಕಂಬ, ಟ್ರಾನ್ಸ್ ಫಾರ್ಮರ್, ದೊಡ್ಡ ಚರಂಡಿ ಹೀಗೆಲ್ಲ ಇದ್ದರೆ ಜಾಗ್ರತೆಯಾಗಿರಿ. ಇನ್ನೂ ಮೂರು ದಿನ ಭಾರೀ ಮಳೆ ಆಗಬಹುದು ಎಂಬ ಸುದ್ದಿ ಇದೆ.