ರಾಜ್ಯದ ಹಲವೆಡೆ ಮಳೆ, ಸಿಡಿಲಿಗೆ ಸಿಡಿಮದ್ದು ಸಿಡಿದು ಬೆಂಗಳೂರಲ್ಲಿ ಇಬ್ಬರು ಸಾವು
ಬೆಂಗಳೂರು, ಮೇ 18:: ಕರ್ನಾಟಕ ನಾನಾ ಜಿಲ್ಲೆಗಳಲ್ಲಿ ಗುರುವಾರ ಒಳ್ಳೆ ಮಳೆಯಾಗಿದೆ. ಬರೀ ಮಳೆಯಷ್ಟೇ ಅಲ್ಲ. ಬೆಂಗಳೂರಿನ ತಾವರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಿಡಿಮದ್ದಿಗೆ ಸಿಡಿಲು ಬಡಿದು ತಮಿಳುನಾಡು ಮೂಲದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಚಿಂತಾಮಣಿಯಲ್ಲಿ ಸಿಡಿಲು ಬಡಿದು ಐವರಿಗೆ ಗಾಯಗಳಾಗಿವೆ. ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಶಿವಮೊಗ್ಗ ಸೇರಿದಂತೆ ವಿವಿಧೆಡೆ ಮಳೆಯಾಗಿದೆ.
ಬುಧವಾರ ರಾತ್ರಿ ಬೆಂಗಳೂರಿನಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಿ, ಮರಗಳು ನೆಲಕ್ಕೆ ಉರುಳಿದ್ದನ್ನು ಕೂಡ ಸ್ಮರಿಸಬಹುದು. ನಗರದ ವಿವಿಧೆಡೆ ಗುರುವಾರ ಸಹ ಭಾರೀ ಮಳೆಯಾಗಿದೆ. ಮೆಜೆಸ್ಟಿಕ್, ಪೀಣ್ಯ, ಯಶವಂತಪುರ, ಜೆಪಿ ನಗರ, ಜಯನಗರ ಸೇರಿದ ಕಡೆ ನಾನಾ ಕಡೆ ಮಳೆಯಿಂದ ಮರಗಳು ನೆಲಕ್ಕುರುಳಿವೆ. ಇನ್ನು ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿದ ಘಟನೆ ಬೆಂಗಳೂರಿನ ಮಾದಪಟ್ಟಣದಲ್ಲಿ ಸಂಭವಿಸಿದೆ.
ಈ ಘಟನೆಯಲ್ಲಿ ಎಂಟು ಮಂದಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ. ಅಂದಹಾಗೆ ಶಿವಮೊಗ್ಗ ಜಿಲ್ಲೆಯಲ್ಲೂ ಮರ ಹಾಗೂ ವಿದ್ಯುತ್ ಕಂಬಗಳು ನೆಲಕ್ಕುರುಳಿ ಸಂಚಾರ ಅಸ್ತವ್ಯಸ್ತವಾಗಿದೆ. ಒಟ್ಟಿನಲ್ಲಿ ಮಳೆಯಿಂದ ರಾಜ್ಯದ ನಾನಾ ಕಡೆ ಹಾನಿಗಳಾದ ಬಗ್ಗೆ ವರದಿಯಾಗುತ್ತಿದೆ. ಈ ಬಾರಿ ಒಂದು ವಾರಕ್ಕೂ ಮೊದಲೇ ಮುಂಗಾರು ರಾಜ್ಯದಲ್ಲಿ ಪ್ರವೇಶವಾಗುತ್ತದೆ ಎಂಬ ಸುದ್ದಿ ನಿಜವಾಗುತ್ತಿದೆ.
ಮಳೆಯಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಿದೆ. ರಾತ್ರಿ ಏಳು ಗಂಟೆ ನಂತರ ಯಾವುದೇ ವಿಮಾನ ಹಾರಾಟ ನಡೆಸಿಲ್ಲ. ಬೆಂಗಳೂರಿಗೆ ಬರಬೇಕಿದ್ದ ವಿಮಾನಗಳು ಮಾರ್ಗ ಬದಲಾವಣೆ ಮಾಡಿವೆ. ಬೆಸ್ಕಾಂಗೆ ಸಂಜೆಯ ನಂತರ ಮೂರು ಸಾವಿರಕ್ಕೂ ಹೆಚ್ಚು ದೂರುಗಳು ಬಂದಿವೆ.