ಬೆಂಗಳೂರು ರೈಲ್ವೇ ನಿಲ್ದಾಣಕ್ಕೆ ಪಿಯೂಷ್ ಗೋಯಲ್ ಅಚ್ಚರಿಯ ಭೇಟಿ
ಬೆಂಗಳೂರು, ಜನವರಿ 18: ಇಂದು ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣಕ್ಕೆ ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ಅಚ್ಚರಿಯ ಭೇಟಿ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು ಶೀಘ್ರದಲ್ಲೇ ಬೆಂಗಳೂರಿಗೆ ಸಬ್ ಅರ್ಬನ್ ರೈಲು ಬರಲಿದೆ ಎಂದು ಹೇಳಿದರು.
"ಈಗಾಗಲೇ ಕೇಂದ್ರ ರೈಲ್ವೇ ಇಲಾಖೆ ಸಬ್ ಅರ್ಬನ್ ರೈಲ್ವೇ ಪ್ಲಾನ್ ರೆಡಿ ಮಾಡಿಕೊಂಡಿದೆ. 22 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸಬ್ ಅರ್ಬನ್ ರೈಲ್ವೇ ಸೇವೆಗೆ ಕೇಂದ್ರ ಸರಕಾರ ಒಪ್ಪಿಗೆ ನೀಡಿದೆ. ಬೆಂಗಳೂರಿಗೆ ಈಗಾಗಲೆ ಮೆಟ್ರೋ ಬಂದಿದೆ. ಇದೀಗ ಸಬ್ ಅರ್ಬನ್ ರೈಲ್ವೇ ಸೇವೆಗೂ ಕೇಂದ್ರ ಸಿದ್ಧವಾಗಿದೆ," ಎಂದು ಪಿಯೂಷ್ ಗೋಯಲ್ ಮಾಹಿತಿ ನೀಡಿದರು.
"ಬೆಂಗಳೂರಿನ ಸಂಚಾರ ದಟ್ಟಣೆಗೆ ಕೇಂದ್ರ ಪರಿಹಾರ ಹುಡುಕಿದೆ. ಮುಂದಿನ ಮೂರುವರೆ ವರ್ಷಗಳಲ್ಲಿ ಸಬ್ ಅರ್ಬನ್ ರೈಲು ನಗರದಲ್ಲಿ ಸಂಚಾರ ಮಾಡುವ ಸಾಧ್ಯತೆಯಿದೆ. ಮೈಸೂರು ರಸ್ತೆ, ಹೊಸೂರು ರಸ್ತೆ, ನೆಲಮಂಗಲ ರಸ್ತೆ, ದೇವನಹಳ್ಳಿ ರಸ್ತೆ, ವೈಟ್ ಫೀಲ್ಡ್ ರಸ್ತೆ, ಕನಕಪುರ ರಸ್ತೆ, ಎಲೆಕ್ಟ್ರಾನಿಕ್ ಸಿಟಿ ರಸ್ತೆಗಳಲ್ಲಿ ಸಬ್ ಅರ್ಬನ್ ರೈಲು ಬರಲಿದೆ. ಅಂದಾಜು 2022 ಕ್ಕೆ ನಗರದಲ್ಲಿ ಸಬ್ ಅರ್ಬನ್ ರೈಲು ಓಡಾಟ ಆರಂಭವಾಗಬಹುದು," ಎಂದು ಪಿಯೂಷ್ ಗೋಯಲ್ ಹೇಳಿದರು.
"160 ಕಿಮೀ ಉದ್ದದ ಸಬ್ ಅರ್ಬನ್ ರೈಲು ಸೇವೆಗೆ ಕೇಂದ್ರ ಒಪ್ಪಿಗೆ ನೀಡಿದೆ. ಅಂದಾಜು 35 ಸಾವಿರ ಕೋಟಿ ರೂಪಾಯಿಗಳ ಯೋಜನೆ ಇದು," ಎಂದು ಗೋಯಲ್ ವಿವರ ನೀಡಿದರು.
ಭೇಟಿ ವೇಳೆ ಕೇಂದ್ರ ಸಚಿವ ಅನಂತ್ ಕುಮಾರ್, ಬೆಂಗಳೂರು ಕೇಂದ್ರ ಸಂಸದ ಪಿಸಿ ಮೋಹನ್, ಶಾಸಕ ಅರವಿಂದ ಲಿಂಬಾವಳಿ, ಆರ್. ಅಶೋಕ್ ಉಪಸ್ಥಿತರಿದ್ದರು.