ಸಿಐಡಿ ಮನವಿ ವಜಾ : ರಾಘವೇಶ್ವರ ಶ್ರೀ ಸದ್ಯಕ್ಕೆ ನಿರಾಳ
ಬೆಂಗಳೂರು, ಫೆ. 16: ಅತ್ಯಾಚಾರ ಆರೋಪ ಎದುರಿಸುತ್ತಿರುವ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳಿಗೆ ನೀಡಿರುವ ಜಾಮೀನು ರದ್ದುಪಡಿಸಬೇಕೆಂದು ಕೋರಿ ಸಿಐಡಿ ಸಲ್ಲಿಸಿದ್ದ ಮನವಿಯನ್ನು ಬೆಂಗಳೂರಿನ 51ನೇ ಸೆಶನ್ಸ್ ನ್ಯಾಯಾಲಯ ಸೋಮವಾರ ತಳ್ಳಿಹಾಕಿದೆ.
ತಮ್ಮ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣದಲ್ಲಿ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು ವೈದ್ಯಕೀಯ ಪರೀಕ್ಷೆ ಸಂದರ್ಭದಲ್ಲಿ ಮೂರು ಪರೀಕ್ಷೆಗಳಿಗೆ ಸಹಕರಿಸಿಲ್ಲ. ಆದ್ದರಿಂದ ಅವರಿಗೆ ನೀಡಿರುವ ಜಾಮೀನು ರದ್ದುಪಡಿಸಬೇಕೆಂದು ಕೋರಿ ಸಿಐಡಿ ಪೊಲೀಸರು ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದರು. [ರಾಘವೇಶ್ವರ ಶ್ರೀಗಳಿಗೆ 13 ಪರೀಕ್ಷೆ]
ವೈದ್ಯರು 16 ವಿವಿಧ ಪರೀಕ್ಷೆಗಳನ್ನು ನಡೆಸಲು ಸಿದ್ಧತೆ ನಡೆಸಿದ್ದರು. ಆದರೆ, ರಾಘವೇಶ್ವರ ಶ್ರೀಗಳು ಕೇವಲ 13 ಪರೀಕ್ಷೆಗಳಿಗೆ ಮಾತ್ರ ಒಪ್ಪಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಇನ್ನೂ ಮೂರು ಪರೀಕ್ಷೆಗಳನ್ನು ನಡೆಸಿಲ್ಲ ಎಂದು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ದುಗ್ಗಪ್ಪ ತಿಳಿಸಿದ್ದರು. [ಡಿಎನ್ಎ ವರದಿ ಪಾಸಿಟಿವ್]
ಆದರೆ, ಶ್ರೀ ರಾಘವೇಶ್ವರ ಸ್ವಾಮಿಗಳಿಗೆ ನೀಡಿರುವ ಜಾಮೀನು ರದ್ದುಪಡಿಸಲು ಯಾವುದೇ ಕಾರಣಗಳಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಈ ಕಾರಣದಿಂದ ಜಾಮೀನಿಗೆ ತಡೆಯೊಡ್ಡಲು ನಿರಾಕರಿಸಿದೆ. [ಮೇಲ್ಮನವಿ ವಜಾ]
ಶ್ರೀಗಳಿಗೆ ನಡೆಸಿದ್ದ ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯಾಚಾರ ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಸಿಐಡಿ ಮಧ್ಯಂತ ವರದಿ ಸಲ್ಲಿಸಿತ್ತು. ಅಲ್ಲದೆ, ಅತ್ಯಾಚಾರ ಪ್ರಕರಣದಲ್ಲಿ ಡಿಎನ್ಎ ವರದಿ ಪಾಸಿಟಿವ್ ಆಗಿದೆ ಎಂದು ಪ್ರಕರಣದ ತನಿಖೆಯ ಕುರಿತು ಹೈ ಕೋರ್ಟ್ಗೆ ಅಡ್ವೋಕೇಟ್ ಜನರಲ್ ಪ್ರೊ. ರವಿವರ್ಮಕುಮಾರ್ ಮಾಹಿತಿ ನೀಡಿದ್ದರು. [ಪ್ರೇಮಲತಾ ಸಂದರ್ಶನ]
ತಮ್ಮ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣವನ್ನೇ ರದ್ದುಪಡಿಸಬೇಕೆಂದು ಕೋರಿ ಶ್ರೀ ರಾಘವೇಶ್ವರ ಸ್ವಾಮಿಗಳು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಆದರೆ, ಈ ಬೇಡಿಕೆಯನ್ನು ಹೈ ಕೋರ್ಟ್ ವಜಾಗೊಳಿಸಿತ್ತು.