ಸೀತಾಮಾತೆಯನ್ನು ರಕ್ಷಿಸಿದ ಹಾಗೆ ನಾವೆಲ್ಲಾ ಆಂಜನೇಯರಾಗಬೇಕಿದೆ
ಬೆಂಗಳೂರು, ಆಗಸ್ಟ್ 3: ನಾವೆಲ್ಲರೂ ಆಂಜನೇಯರಾಗಬೇಕಿದೆ. ಯಾಕೆಂದರೆ ಗೋಮಾತೆ ಅಂದಿನ ಸೀತೆಯ ಹಾಗೆ ಶೋಕದಲ್ಲಿ ಮುಳುಗಿದ್ದಾಳೆ. ಗೋ ಮಾತೆಯ ಶೋಕವನ್ನು ನಾಶ ಮಾಡಬೇಕಿದೆ.
ಆಂಜನೇಯ ಸೀತಾಮಾತೆಯನ್ನು ರಕ್ಷಿಸಿದ ಹಾಗೆ ನಾವೆಲ್ಲಾ ಗೋಮಾತೆಯನ್ನು ರಕ್ಷಿಸೋಣ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳು ಹೇಳಿದರು. (ಭಾರತ ಗೋಮೂತ್ರ ರಫ್ತು ಮಾಡಲಿ)
ನಗರದ ಗಿರಿನಗರದ ಶಾಖಾ ಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ 16ನೇ ದಿನದ ಕಾರ್ಯಕ್ರಮದಲ್ಲಿ (ಆ 3) ಮಾತನಾಡುತ್ತಿದ್ದ ಶ್ರೀಗಳು, ಜಗದೀಶನಾಡಿದ ಜಗನ್ನಾಟಕಕ್ಕೆ ರಾಮಾಯಣ ಎಂದು ಹೆಸರು.
ಎಲ್ಲಾ ಪಾತ್ರಗಳಲ್ಲಿ ಅತ್ಯಂತ ಸುಂದರ ಪಾತ್ರ ಎಂದರೆ ಹನುಮಂತನದ್ದು. ಹನುಮಂತನ ಆಗಮನದವರೆಗೆ ದುಃಖದ ಸನ್ನಿವೇಶಗಳು, ಹನುಮಂತನ ಆಗಮನವಾದ ಮೇಲೆ ಎಲ್ಲಾ ಗೆಲುವುಗಳು ಎಂದು ಶ್ರೀಗಳು ಅಭಿಪ್ರಾಯ ಪಟ್ಟಿದ್ದಾರೆ.
ರಾಮನ ಬದುಕಿನಲ್ಲಿ ಗೆಲುವನ್ನು ತಂದ ಹನುಮ, ನಮ್ಮೆಲ್ಲರ ಜೀವನದಲ್ಲಿ ಗೆಲುವನ್ನೇ ತರಬಲ್ಲ. ನಾವೆಲ್ಲ ಹನುಮನ ಆದರ್ಶವನ್ನು ಎತ್ತಿ ಹಿಡಿದು ಗೋಮಾತೆಯನ್ನು ರಕ್ಷಿಸೋಣ ಎಂದು ಶ್ರೀಗಳು ಕರೆನೀಡಿದ್ದಾರೆ.
ಈ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಬೆಳಗೂರಿನ ಮಾರುತಿ ಪೀಠದ ಅವಧೂತ ಬಿಂದುಮಾಧವ ಶರ್ಮ ಸ್ವಾಮೀಜಿ, ನಮ್ಮ ಮತ್ತು ರಾಘವೇಶ್ವರ ಶ್ರೀಗಳ ಭೇಟಿ ಜೀವಾತ್ಮ ಮತ್ತು ಪರಮಾತ್ಮನ ಸಮ್ಮಿಲನದ ಸಂಕೇತ ಎಂದು ವಿಶ್ಲೇಷಿಸಿದ್ದಾರೆ.
ಇದು ನಮ್ಮ ಬಹು ಜನ್ಮದ ಪುಣ್ಯ ಎಂದ ಬಿಂದುಮಾಧವ ಶ್ರೀಗಳು, ಗೋವು ಅಂದರೆ ಧರ್ಮ, ಧರ್ಮವನ್ನು ಉದ್ಧಾರ ಮಾಡಲಿಕ್ಕಾಗಿ, ಜಗತ್ತಿಗೆ ಒಳಿತು ಮಾಡಲು ಶ್ರೀಗಳು ಅವತರಿಸಿದ್ದಾರೆ ಎಂದಿದ್ದಾರೆ.
ನಮ್ಮನ್ನು ರಕ್ಷಿಸುವ ಮಾತೆಯರಾದ ಗೋವು ಹಾಗೂ ಗಾಯತ್ರಿಯನ್ನು ನಾವು ಮರೆತಿದ್ದೇವೆ, ಹಾಗಾಗಿಯೇ ಪ್ರಪಂಚಕ್ಕೆ ಹೀನತ್ವ ಬಂದಿರುವುದು. ಗೋರಕ್ಷಣೆಯ ಮೂಲಕ ಧರ್ಮವನ್ನು ಕಾಯೋಣ ಬಿಂದುಮಾಧವ ಶ್ರೀಗಳು ಹೇಳಿದ್ದಾರೆ.
ದೇಶಿ ಗೋವಿನ ಹಾಲನ್ನು ಸಮಾಜಕ್ಕೆ ತಲುಪಿಸುವ ಕೆಲಸ ಮಾಡುತ್ತಿರುವ ಮಾಧವ ಎಂ. ಎಸ್. ಹೆಬ್ಬಾರ್ ಅವರಿಗೆ "ಗೋ ಸೇವಾ ಪುರಸ್ಕಾರ"ವನ್ನು ಈ ಸಂದರ್ಭದಲ್ಲಿ ನೀಡಲಾಯಿತು.
ಶ್ರೀಭಾರತೀಪ್ರಕಾಶನವು ಹೊರತಂದ ಸಾಧನಾಪಂಚಕ ಪ್ರವಚನಮಾಲಿಕೆಯ ವಿಸಿಡಿಯನ್ನು ಅವಧೂತ ಬಿಂಧುಮಾಧವ ಶರ್ಮ ಸ್ವಾಮೀಜಿ ಹಾಗೂ ಐ.ಡಿ ಗಣಪತಿ ಬರೆದ ಲೋಕಶಂಕರ ಯಕ್ಷಗಾನ ಪ್ರಸಂಗದ ಸಿಡಿಯನ್ನು ರಾಘವೇಶ್ವರ ಶ್ರೀಗಳು ಬಿಡುಗಡೆ ಮಾಡಿದರು.