ರಾಘವೇಶ್ವರ ಶ್ರೀಗಳ ಚಾತುರ್ಮಾಸ್ಯ ವ್ರತದಲ್ಲಿ ಬದಲಾವಣೆ
ರಾಘವೇಶ್ವರ ಶ್ರೀಗಳ ಚಾತುರ್ಮಾಸ್ಯ ವ್ರತದಲ್ಲಿ ಬದಲಾವಣೆ
ಬೆಂಗಳೂರು, ಜುಲೈ 25: ರಾಮಚಂದ್ರಾಪುರ ಮಠದ ಪೀಠಾಧಿಪತಿ ರಾಘವೇಶ್ವರ ಶ್ರೀಗಳ 2018ನೇ ಚಾತುರ್ಮಾಸ್ಯವ್ರತ ನಗರದ ಗಿರಿನಗರದಲ್ಲಿರುವ ಶಾಖಾಮಠದಲ್ಲಿ ನಡೆಯಲಿದೆ. ಬೆಂಗಳೂರಿನ ಗಿರಿನಗರದ ಮಠದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಳ್ಳಲು ಶಿಷ್ಯರ ಮತ್ತು ಭಕ್ತವೃಂದದ ಆಗ್ರಹದ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭಾನ್ಕುಳಿ ಶ್ರೀ ರಾಮದೇವ ಮಠದಲ್ಲಿ ತಮ್ಮ 25ನೇ ಚಾತುರ್ಮಾಸ್ಯ ವ್ರತವನ್ನು ಕೈಗೊಳ್ಳಬೇಕೆಂದು, ರಾಘವೇಶ್ವರ ಶ್ರೀಗಳು ಈ ಹಿಂದೆ ಯೋಚಿಸಿದ್ದರು.
ಬುಧವಾರ (ಜುಲೈ 25) ಸಮಾಜದ ಹಾಗೂ ಶಿಷ್ಯ ಸಮುದಾಯದ ಪದಾಧಿಕಾರಿಗಳೊಂದಿಗೆ ಸಮ್ಮುಖ ಸರ್ವಾಧಿಕಾರಿಗಳಾದ ತಿಮ್ಮಪ್ಪಯ್ಯ ಮಡಿಯಾಲರವರು ಹಾಗೂ ಮುಖ್ಯ ನಿರ್ವಹಣಾಧಿಕಾರಿಗಳಾದ ಕೆ. ಜಿ. ಭಟ್ಟ ರವರು ಶ್ರೀಗಳನ್ನು ಭೇಟಿ ಮಾಡಿದ್ದರು.
ಕಿಡ್ನಿ ಸ್ಟೋನ್ ಗೆ ಸಂಬಂಧಿಸಿದ ಸಣ್ಣ ಪುಟ್ಟ ಚಿಕಿತ್ಸೆಯ ಅವಶ್ಯಕತೆ ಇರುವದರಿಂದಲೂ, ವಿಶ್ರಾಂತಿಯ ಅಗತ್ಯ ಇರುವದರಿಂದಲೂ ಚಾತುರ್ಮಾಸ್ಯವನ್ನು ಬೆಂಗಳೂರಿನಲ್ಲಿಯೇ ಕೈಗೊಂಡು, ವಿಶ್ರಾಂತಿಯನ್ನೂ ಪಡೆಯುತ್ತಾ ಗೋಸ್ವರ್ಗದ ಕುರಿತು ಹೆಚ್ಚಿನ ಮಾರ್ಗದರ್ಶನ ನೀಡಬೇಕೆಂದು ಶ್ರೀಗಳಲ್ಲಿ ವಿನಂತಿಸಿದರು.
ಇವರೆಲ್ಲರ ಒಕ್ಕೊರಲ ವಿನಂತಿಯನ್ನು ಮನ್ನಿಸಿದ ಶ್ರೀಗಳು ಈ ವರ್ಷ ಸಂಕಲ್ಪಿಸಿದ ಗೋಸ್ವರ್ಗ ಚಾತುರ್ಮಾಸ್ಯವನ್ನು ಇದೇ ಬರುವ ಆಷಾಢ ಕೃಷ್ಣ ಚತುರ್ಥಿಯಿಂದ (01-08-2018 - 25.09.2018) ಬೆಂಗಳೂರಿನ ಗಿರಿನಗರ ಮಠದಲ್ಲಿ ಕೈಗೊಳ್ಳುವದಾಗಿ ಸಮ್ಮತಿ ಸೂಚಿಸಿದ್ದಾರೆ.
ಎಲ್ಲಾ ಶಿಷ್ಯ ಭಕ್ತ ಸಮಾಜ ಬಾಂಧವರು ಈ ಬದಲಾವಣೆಯನ್ನು ಗಮನಿಸಿ, ಚಾತುರ್ಮಾಸ್ಯದ ಪವಿತ್ರ ಸಂದರ್ಭದಲ್ಲಿ ಬೆಂಗಳೂರಿನ ಗಿರಿನಗರದ ಶ್ರೀ ರಾಮಾಶ್ರಮಕ್ಕೆ ಆಗಮಿಸಿ, ಶ್ರೀಗಳವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಮಠದ ಪತ್ರಿಕಾ ಪ್ರಕಟಣೆಯ ಮೂಲಕ ಮನವಿ ಮಾಡಲಾಗಿದೆ.