ಬೆಂಗಳೂರು ನಗರ ಸ್ವತಂತ್ರ ಖಾತೆ ಹೊಣೆ ಯಾರ ಹೆಗಲಿಗೆ?
ಬೆಂಗಳೂರು, ಸೆಪ್ಟೆಂಬರ್, 18 : ಬೆಂಗಳೂರು ನಗರದ ಅಭಿವೃದ್ಧಿಗಾಗಿ ಪ್ರತ್ಯೇಕ ಸಚಿವರನ್ನು ನೇಮಕ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಬಿಎಂಪಿ ಚುನಾವಣೆ ಪ್ರಚಾರದ ಸಮಯದಲ್ಲಿ ಘೋಷಣೆ ಮಾಡಿದ್ದಾರೆ. ಈಗ ಸಂಪುಟ ವಿಸ್ತರಣೆ ಕಸರತ್ತು ಆರಂಭವಾಗಿದ್ದು, ಯಾರು ಬೆಂಗಳೂರಿನ ಅಭಿವೃದ್ಧಿ ಸಚಿವರಾಗಲಿದ್ದಾರೆ? ಎಂಬುದು ಕುತೂಹಲ ಮೂಡಿಸಿದೆ.
ಬಿಬಿಎಂಪಿ ಚುನಾವಣೆ ಪ್ರಚಾರದ ಸಂದರ್ಭದಲ್ಲಿ 'ಬೆಂಗಳೂರು ನಗರದ ಅಭಿವೃದ್ಧಿಗಾಗಿ ಪ್ರತ್ಯೇಕ ಸಚಿವ ಸ್ಥಾನ ಹುಟ್ಟು ಹಾಕುವುದಾಗಿ ಸಿದ್ದರಾಮಯ್ಯ ಹೇಳಿದ್ದರು. ಬೆಂಗಳೂರು ನಗರ ಎಂಬ ಸ್ವತಂತ್ರ ಖಾತೆ ಹುಟ್ಟು ಹಾಕಿ ಅದಕ್ಕೆ ಒಬ್ಬರು ಸಚಿವರನ್ನು ನೇಮಕ ಮಾಡಲಾಗುತ್ತದೆ' ಎಂದು ತಿಳಿಸಿದ್ದರು. [ಸಂಪುಟ ವಿಸ್ತರಣೆ : ಸೆ.24ರಂದು ಮಹತ್ವದ ಸಭೆ]
ಸೆ.24ರಂದು ಸಚಿವ ಸಂಪುಟ ವಿಸ್ತರಣೆ ಕುರಿತು ದೆಹಲಿಯಲ್ಲಿ ಸೋನಿಯಾ ಗಾಂಧಿ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಅಂದು ಬೆಂಗಳೂರು ಅಭಿವೃದ್ಧಿ ಸಚಿವರ ಬಗ್ಗೆ ಚರ್ಚೆಯಾಗಲಿದೆ. ಈಗಾಗಲೇ ಬೆಂಗಳೂರು ನಗರವನ್ನು ಪ್ರತಿನಿಧಿಸುವ ಐವರು ಸಚಿವರು ಸಿದ್ದರಾಮಯ್ಯ ಸಂಪುಟದಲ್ಲಿದ್ದಾರೆ. ಈಗ ಮತ್ತೊಬ್ಬರು ಸಚಿವರು ನೇಮಕವಾಗಲಿದ್ದಾರೆ. [ಬೆಂಗಳೂರು ಅಭಿವೃದ್ಧಿಗೊಂದು ಖಾತೆ, ಸಚಿವರ ನೇಮಕ]
'ಬೆಂಗಳೂರಿನ ಅಭಿವೃದ್ಧಿಗಾಗಿ ಪ್ರತ್ಯೇಕ ಸಚಿವರನ್ನು ನೇಮಕ ಮಾಡುವ ಅಗತ್ಯವಿಲ್ಲ. ಖಾತೆ ಮುಖ್ಯಮಂತ್ರಿಗಳ ಬಳಿಯೇ ಇರಲಿ' ಎಂದು ಬೆಂಗಳೂರು ನಗರ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಕೆಲವು ದಿನಗಳ ಹಿಂದೆ ಹೇಳಿದ್ದರು. ಹಾಗಾದರೆ ಬೆಂಗಳೂರು ಅಭಿವೃದ್ಧಿ ಸಚಿವರ ಪಟ್ಟಿಯಲ್ಲಿ ಯಾರಿದ್ದಾರೆ ನೋಡೋಣ ಬನ್ನಿ....
ರಾಮಲಿಂಗಾ ರೆಡ್ಡಿ ಆಯ್ಕೆಯಾಗುತ್ತಾರಾ?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಾರಿಗೆ ಸಚಿವರಾಗಿರುವ ರಾಮಲಿಂಗಾ ರೆಡ್ಡಿ ಅವರು ಸದ್ಯ ಬೆಂಗಳೂರು ನಗರ ಉಸ್ತುವಾರಿ ಸಚಿವರೂ ಹೌದು. ಇವರೇ ಬೆಂಗಳೂರು ನಗರ ಸ್ವತಂತ್ರ ಖಾತೆಯ ಹೊಣೆ ವಹಿಸಿಕೊಳ್ಳಲಿದ್ದಾರೆಯೇ ಎಂಬುದು ಸದ್ಯದ ಪ್ರಶ್ನೆ. ಸಾರಿಗೆಯಂತಹ ಪ್ರಭಾವಿ ಖಾತೆ ಹೊಂದಿರುವುದರಿಂದ ಇವರಿಗೆ ಬೆಂಗಳೂರು ಅಭಿವೃದ್ಧಿ ಸಚಿವ ಸ್ಥಾನ ನೀಡುವುದಿಲ್ಲ ಎಂಬ ಮಾತುಗಳಿವೆ. ಅಲ್ಲದೇ ಬೆಂಗಳೂರಿಗೆ ಪ್ರತ್ಯೇಕ ಸಚಿವರ ಅಗತ್ಯವಿಲ್ಲ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ದಿನೇಶ್ ಗುಂಡೂರಾವ್ ಆಯ್ಕೆಯಾಗಲಿದ್ದಾರೆಯೇ?
ಬೆಂಗಳೂರಿನ ಗಾಂಧಿನಗರದ ಶಾಸಕರಾದ ದಿನೇಶ್ ಗುಂಡೂರಾವ್ ಅವರು ಸಿದ್ದರಾಮಯ್ಯ ಸಂಪುಟದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿದ್ದಾರೆ ಜೊತೆಗೆ ಧಾರವಾಡ ಜಿಲ್ಲಾ ಉಸ್ತುವಾರಿ ಜವಾಬ್ದಾರಿಯೂ ಇವರ ಮೇಲಿದೆ. ಇವರಿಗೆ ಬೆಂಗಳೂರು ನಗರ ಸ್ವತಂತ್ರ ಖಾತೆ ಹೊಣೆ ನೀಡಬಹುದು ಎಂಬ ಸುದ್ದಿಯೂ ಇದೆ.
ಕೃಷಿ ಸಚಿವರ ಮಡಿಲಿಗೆ ಬೆಂಗಳೂರು ಅಭಿವೃದ್ಧಿ?
ಬ್ಯಾಟರಾಯನಪುರ ಕ್ಷೇತ್ರದ ಶಾಸಕ ಕೃಷ್ಣ ಭೈರೇಗೌಡ ಅವರಿಗೆ ಬೆಂಗಳೂರು ನಗರ ಸ್ವತಂತ್ರ ಖಾತೆ ಹೊಣೆ ವಹಿಸುವ ಸಾಧ್ಯತೆ ಇದೆ. ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಅವರು ಕೃಷಿ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಒಂದು ವೇಳೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಸಂಪುಟ ಸೇರಿದರೆ ಕೃಷ್ಣ ಭೈರೇಗೌಡರು ಕೆಪಿಸಿಸಿ ಅಧ್ಯಕ್ಷರಾಗಬಹುದು ಎಂಬ ಮಾತುಗಳು ಇವೆ.
ಎಸ್.ಟಿ.ಸೋಮಶೇಖರ್ಗೆ ಸಚಿವ ಸ್ಥಾನ?
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಿದವರು ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್. ಬೆಂಗಳೂರು ನಗರ ಸ್ವತಂತ್ರ ಖಾತೆಗೆ ಅವರನ್ನು ನೇಮಕ ಮಾಡುವ ಸಾಧ್ಯತೆ ಇದೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಸೋಮಶೇಖರ್ ಅವರಿಗೆ ಸಚಿವ ಸ್ಥಾನ ನೀಡಿದರೆ ಗ್ರಾಮೀಣ ಬೆಂಗಳೂರು ಭಾಗಕ್ಕೂ ಆದ್ಯತೆ ನೀಡಿದಂತಾಗುತ್ತದೆ ಎಂಬುದು ಲೆಕ್ಕಾಚಾರ.
ಸಂಪುಟ ಸೇರಲಿದ್ದಾರೆ ಹ್ಯಾರೀಸ್?
ಶಾಂತಿನಗರ ಕ್ಷೇತ್ರದ ಶಾಸಕ ಎನ್.ಎ.ಹ್ಯಾರೀಸ್ ಅವರು ಹಲವು ಬಾರಿ ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದರು. ಆದ್ದರಿಂದ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡು ಬೆಂಗಳೂರು ನಗರ ಸ್ವತಂತ್ರ ಖಾತೆಯನ್ನು ಅವರಿಗೆ ನೀಡುವ ಸಾಧ್ಯತೆಯೂ ಇದೆ.