ಎಸ್.ಎಂ ಕೃಷ್ಣ ಜತೆ ಅಂಬರೀಶನ್ನೂ ಬಿಜೆಪಿಗೆ ಸ್ವಾಗತಿಸಿದ ಆರ್.ಅಶೋಕ್!
ಬಿಜೆಪಿಗೆ ಬರುವುದಾದರೆ ಎಸ್.ಎಂ ಕೃಷ್ಣಾ ಮತ್ತು ಅಂಬರೀಶ್ ಗೆ ಮುಕ್ತ ಸ್ವಾಗತವಿದೆ ಎಂದು ಬಿಜೆಪಿ ನಾಯಕ ಆರ್ ಅಶೋಕ್ ಬೆಂಗಳೂರಿನಲ್ಲಿ ಹೇಳಿದ್ದಾರೆ.
ಬೆಂಗಳೂರು, ಜನವರಿ 31: ರೆಬೆಲ್ ಸ್ಟಾರ್ ಅಂಬರೀಶ್ ಬಿಜೆಪಿಗೆ ಬರುವುದಿದ್ದರೆ ನಮ್ಮ ಸ್ವಾಗತವಿದೆ ಎಂದು ಮಾಜಿ ಡಿಸಿಎಂ ಹಾಗೂ ಬಿಜೆಪಿ ನಾಯಕ ಆರ್ ಅಶೋಕ್ ಹೇಳಿದ್ದಾರೆ. ಎಸ್.ಎಂ ಕೃಷ್ಣಾ ಬೆನ್ನಿಗೆ ಇದೀಗ ಮತ್ತೊಬ್ಬ ಕಾಂಗ್ರೆಸ್ ನಾಯಕನನ್ನು ಬಿಜೆಪಿ ಪಕ್ಷಕ್ಕೆ ಆಹ್ವಾನಿಸಿದೆ.
ಬೆಂಗಳೂರಿನ ಜಯನಗರದಲ್ಲಿ ಸ್ಕೈವಾಕ್ ಉದ್ಘಾಟನೆಗೆ ಬಂದಿದ್ದ ಅಶೋಕ್ ಮಾಧ್ಯಮಗಳ ಜತೆ ಮಾತನಾಡಿದರು. ಎಸ್.ಎಂ ಕೃಷ್ಣಾ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ ಅವರು, "ಎಸ್.ಎಂ ಕೃಷ್ಣಾ ರಾಜ್ಯ ಕಂಡ ಅಪರೂಪದ ರಾಜಕಾರಣಿ. ರಾಜ್ಯಕ್ಕೆ ಹಲವಾರು ಕೊಡುಗೆಗಳನ್ನು ಕೊಟ್ಟಿದ್ದಾರೆ. ಇದೀಗ ಅವರು ಕಾಂಗ್ರೆಸ್ ನಡೆಸಿಕೊಂಡ ರೀತಿಯಿಂದ ಬೇಸತ್ತು ರಾಜೀನಾಮೆ ನೀಡಿದ್ದಾರೆ. ಪಕ್ಷಾತೀತವಾಗಿ ನಾನೂ ಅವರ ಅಭಿಮಾನಿ. ಕಷ್ಣಾ ತಮ್ಮ ರಾಜಕೀಯ ನಡೆ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ. ನಾನು ಅವರಿಗೆ ಯಾವ ಪಕ್ಷ ಸೇರಬೇಕು ಎಂದೂ ಹೇಳುವುದಿಲ್ಲ. ಆದರೆ ಅವರ ಅಭಿಮಾನಿಯಾಗಿ ಬಿಜೆಪಿ ಪಕ್ಷಕ್ಕೆ ಸ್ವಾಗತಿಸುತ್ತೇನೆ," ಎಂದು ಹೇಳಿದ್ದಾರೆ.[ಎಸ್ಸೆಂ ಕೃಷ್ಣ ಅವರೇ, ನಿಮ್ಮ ಉತ್ಸಾಹ ಮೆಚ್ಚತಕ್ಕದ್ದು, ಆದರೆ ಇನ್ನು ಸಾಕು!]
"ಮುಖ್ಯಮಂತ್ರಿ ಸಿದ್ಧರಾಮಯ್ಯನವರ ನಡೆಯಿಂದಾಗಿ ಕಾಂಗ್ರೆಸ್ ಒಡೆದ ಮನೆಯಾಗಿದೆ. ಹಿರಿಯ ನಾಯಕರು ಅಸಮಧಾನಗೊಂಡಿದ್ದಾರೆ. ಮುಖ್ಯಮಂತ್ರಿಗಳು ತಮ್ಮ ನಿಲುವು ಬದಲಾಯಿಸಿಕೊಳ್ಳದಿದ್ದರೆ ಕಾಂಗ್ರೆಸ್ ನ ಪತನವಾಗಲಿದೆ. ಕೃಷ್ಣಾ ರಾಜೀನಾಮೆಯಿಂದ ಕಾಂಗ್ರೆಸ್ ಕೌಂಟ್ ಡೌನ್ ಶುರುವಾಗಿದೆ ," ಎಂದು ಅಶೋಕ್ ವಿಶ್ಲೇಷಿಸಿದರು.[ಎಸ್ಸೆಂ ಕೃಷ್ಣ ಬಿಜೆಪಿ ಸೇರಲಿ: ಒನ್ಇಂಡಿಯಾ ಓದುಗರ ಬಹುಮತ]
ಅಂಬರೀಶ್ ಗೆ ಬಿಜೆಪಿ ಸ್ವಾಗತ
"ಹಿರಿಯ ರಾಜಕಾರಣಿ ಅಂಬರೀಶ್ ಅವರನ್ನು ಕಾಂಗ್ರೆಸ್ ನಲ್ಲಿ ಮೂಲೆಗುಂಪು ಮಾಡಲಾಗಿದೆ. ನಾನು ಅಂಬರೀಶ್ ಒಳ್ಳೆಯ ಸ್ನೇಹಿತರು. ಅವರು ಪಕ್ಷಕ್ಕೆ ಬರುವುದಕ್ಕೆ ನಮ್ಮ ಅಡ್ಡಿಯೇನೂ ಇಲ್ಲ. ಅಂಬರೀಶ್ ಪಕ್ಷಕ್ಕೆ ಬರುವುದಾದರೆ ನಮ್ಮ ಕಡೆಯಿಂದ ಮುಕ್ತ ಆಹ್ವಾನವಿದೆ. ಈಗಾಗಲೆ ಬಿಜೆಪಿ ಹಳೆ ಮೈಸೂರು ಭಾಗದಲ್ಲಿ ಭದ್ರವಾಗಿದೆ. ಕೃಷ್ಣಾ ಮತ್ತು ಅಂಬರೀಶ್ ಇಬ್ಬರೂ ನಾಯಕರು ಬಿಜೆಪಿಗೆ ಬಂದರೆ ಅಲ್ಲಿ ಪಕ್ಷ ಮತ್ತಷ್ಟು ಸದೃಢವಾಗಲಿದೆ," ಎಂದು ಆರ್. ಅಶೋಕ್ ಹೇಳಿದರು.