ಪಶ್ನೆ ಪತ್ರಿಕೆ ಸೋರಿಕೆ : ಬಿಬಿಎಂಪಿ ಮಾಜಿ ಸದಸ್ಯ ಬಂಧನ
ಬೆಂಗಳೂರು, ಜುಲೈ 28 : ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಬಿಬಿಎಂಪಿ ಮಾಜಿ ಸದಸ್ಯ ಗಂಗಬೈರಯ್ಯ ಅವರನ್ನು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 17 ಜನರನ್ನು ಬಂಧಿಸಲಾಗಿದೆ.
ರಾಜ್ಕುಮಾರ್ ವಾರ್ಡ್ನ ಮಾಜಿ ಪಾಲಿಕೆ ಸದಸ್ಯ (ಬಿಜೆಪಿ) ಗಂಗಬೈರಯ್ಯ ಅವರನ್ನು ದಾಸರಹಳ್ಳಿಯ ಬಳಿಯ ಅವರ ಮನೆಯಲ್ಲಿ ಗುರುವಾರ ಸಂಜೆ ಬಂಧಿಸಲಾಗಿದ್ದು, ರಾತ್ರಿ 8 ಗಂಟೆಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು.[ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ, ನಾಲ್ವರಿಗೆ ಜಾಮೀನು]
ಗಂಗಬೈರಯ್ಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಸಂಜೆಯೇ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಆರೋಪಿಯ ಹೆಚ್ಚಿನ ವಿಚಾರಣೆ ಅಗತ್ಯವಿರುವುದರಿಂದ ಪೊಲೀಸರ ವಶಕ್ಕೆ ನೀಡುವಂತೆ ಸಿಐಡಿ ಅಧಿಕಾರಿಗಳು ಕೋರ್ಟ್ಗೆ ಅರ್ಜಿ ಸಲ್ಲಿಸಲಿದ್ದಾರೆ.[ಪತ್ರಿಕೆ ಸೋರಿಕೆ : ಟೊಮೆಟೊ ಅಣ್ಣನ ಮಗ ಸಿಕ್ಕಿಬಿದ್ದ]
ಗಂಗಬೈರಯ್ಯ ಅವರು ದ್ವಿತೀಯ ಪಿಯುಸಿ ಓದುತ್ತಿದ್ದ ತಮ್ಮ ಮೊಮ್ಮಗನಿಗೆ ಪರೀಕ್ಷೆಗೆ ಮೊದಲೇ ಪ್ರಶ್ನೆಪತ್ರಿಕೆ ತರಿಸಿ ಕೊಟ್ಟಿದ್ದರು ಎಂಬ ಆರೋಪವಿದೆ. ಅಕ್ರಮವಾಗಿ ಪರೀಕ್ಷೆ ಬರೆಯಲು ಮುಂದಾಗಿದ್ದ ಕೆಲ ವಿದ್ಯಾರ್ಥಿಗಳು ಗಂಗಬೈರಯ್ಯ ಅವರ ಮನೆಯಲ್ಲೇ ತಯಾರಿ ನಡೆಸಿದ್ದರೂ ಎಂಬ ಆರೋಪವೂ ಇದೆ.....
ಒಟ್ಟು 17 ಜನರ ಬಂಧನ
ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ತನಿಖೆಯನ್ನು ಸಿಐಡಿ ನಡೆಸುತ್ತಿದೆ. ಹಗರಣದ ಪ್ರಮುಖ ಆರೋಪಿಗಳಾದ ಕಿರಣ್ ಮತ್ತು ಶಿವಕುಮಾರಸ್ವಾಮಿಯನ್ನು ಬಂಧಿಸಲಾಗಿದೆ. ಗಂಗಬೈರಯ್ಯ ಸೇರಿ ಇದುವರೆಗೂ ಈ ಪ್ರಕರಣದಲ್ಲಿ 17 ಆರೋಪಿಗಳನ್ನು ಬಂಧಿಸಲಾಗಿದೆ.
ನಾಲ್ವರು ಆರೋಪಿಗಳಿಗೆ ಜಾಮೀನು ಸಿಕ್ಕಿದೆ
ಕಳೆದವಾರ ಕರ್ನಾಟಕ ಹೈಕೋರ್ಟ್ ಆರೋಪಿಗಳಾದ ರುದ್ರಪ್ಪ, ರಂಗನಾಥ್, ಓಬಳರಾಜು ಮತ್ತು ಮಂಜುನಾಥ್ ಅವರಿಗೆ ಷರತ್ತುಬದ್ಧ ಜಾಮೀನು ನೀಡಿದೆ. ಪ್ರತಿಯೊಬ್ಬ ಆರೋಪಿಗಳಿಗೂ 2 ಲಕ್ಷ ಬಾಂಡ್, ಇಬ್ಬರ ಶ್ಯೂರಿಟಿ ಆಧಾರದ ಮೇಲೆ ಜಾಮೀನು ನೀಡಲಾಗಿದೆ.
ಎರಡು ಬಾರಿ ಪಶ್ನೆ ಪತ್ರಿಕೆ ಸೋರಿಕೆಯಾಗಿತ್ತು
2016ರ ಮಾರ್ಚ್ನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆದಿತ್ತು. ಮಾರ್ಚ್ 21 ರಂದು ನಡೆದ ರಸಾಯನಶಾಸ್ತ್ರ ಪರೀಕ್ಷೆಯನ್ನು ಪ್ರಶ್ನೆ ಪತ್ರಿಕೆ ಸೋರಿಕೆಯಾದ ಕಾರಣ ರದ್ದು ಮಾಡಲಾಗಿತ್ತು. ಮಾರ್ಚ್ 31 ರಂದು ಮರು ಪರೀಕ್ಷೆ ನಡೆಯಬೇಕಿತ್ತು. ಆದರೆ, ಅಂದು ಬೆಳಗ್ಗೆ ಪತ್ರಿಕೆ ಪುನಃ ಸೋರಿಕೆಯಾಗಿತ್ತು. ಈ ಹಗರಣದ ತನಿಖೆಯನ್ನು ಸರ್ಕಾರ ಸಿಐಡಿ ತನಿಖೆಗೆ ಒಪ್ಪಿಸಿದೆ.
ಹಾನಗಲ್ನಲ್ಲಿ ಪತ್ರಿಕೆ ಸೋರಿಕೆ
'ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಹಾನಗಲ್ ಉಪ ಖಜಾನೆಯಿಂದ ಸೋರಿಕೆಯಾಗಿತ್ತು' ಎಂದು ಸಿಐಡಿ ಡಿಜಿಪಿ ಕಿಶೋರ್ ಚಂದ್ರ ಹೇಳಿದ್ದಾರೆ. ಉಪ ಖಜಾನೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಸಂತೋಷ್ ಖಜಾನೆಗೆ ಪತ್ರಿಕೆ ಬರುತ್ತಿದ್ದಂತೆ ಬಂಡಲ್ ಸೀಲ್ ಓಪನ್ ಮಾಡಿ, ಪತ್ರಿಕೆಯ ಫೋಟೋ ತೆಗೆದುಕೊಂಡು ಪುನಃ ಸೀಲ್ ಮಾಡಿ ಇಟ್ಟಿದ್ದರು. ನಂತರ ಸಂತೋಷ್ ಕೈಯಿಂದ ಪತ್ರಿಕೆ ಸೋರಿಕೆಯಾಗಿತ್ತು.
ಕೋಕಾ ಕಾಯ್ದೆ ಪ್ರಯೋಗ
ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಹಗರಣದಲ್ಲಿ ಸಿಕ್ಕಿಬಿದ್ದಿರುವ ಆರೋಪಿಗಳ ವಿರುದ್ಧ ಸಿಐಡಿ ಪೊಲೀಸರು ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆಯಡಿ ಕರ್ನಾಟಕದಲ್ಲಿ 4 ಬಾರಿಗೆ ಪ್ರಕರಣ ದಾಖಲಿಸಲಾಗಿದೆ.