'ಜನರಿಗೆ ಗುಂಡಿ ಭಾಗ್ಯ, ಕಾಂಗ್ರೆಸ್ಗೆ ಹುಂಡಿ ಭಾಗ್ಯ'
ಬೆಂಗಳೂರು, ಅಕ್ಟೋಬರ್ 11 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು. ಬೆಂಗಳೂರು ನಗರದ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿತ್ತು.
ಬೆಂಗಳೂರು: ದಂಪತಿಯನ್ನು ಬಲಿತೆಗೆದುಕೊಂಡ ರಸ್ತೆ ಗುಂಡಿ
ಬೆಂಗಳೂರು ನಗರ ಬಿಜೆಪಿ ಘಟಕ ಬುಧವಾರ ಬಿಬಿಎಂಪಿ ವಿರುದ್ಧ ಪ್ರತಿಭಟನೆ ಆಯೋಜಿಸಿತ್ತು. ರಸ್ತೆ ಗುಂಡಿ ಮುಚ್ಚುವಂತೆ ಆಗ್ರಹಿಸಿ ಬಿಬಿಎಂಪಿ ಕಚೇರಿಗೆ ಮುತ್ತಿಗೆ ಹಾಕಲು ತೀರ್ಮಾನಿಸಲಾಗಿತ್ತು. ಪ್ರತಿಭಟನೆ ಆರಂಭವಾದ ಕೆಲವು ಹೊತ್ತಿನಲ್ಲಿ ಎಲ್ಲಾ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು.
ಆರ್.ಅಶೋಕ್, ಅರವಿಂದ ಲಿಂಬಾವಳಿ, ಶೋಭಾ ಕರಂದ್ಲಾಜೆ, ನೆ.ಲ.ನರೇಂದ್ರ ಬಾಬು ಸೇರಿದಂತೆ ವಿವಿಧ ನಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ರಾಜ್ಯ ಸರ್ಕಾರ, ಬಿಬಿಎಂಪಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಿಜೆಪಿ ಪ್ರತಿಭಟನೆ ಬಿಬಿಎಂಪಿ ಕೇಂದ್ರ ಕಚೇರಿ ತಲುಪದಂತೆ ಗೇಟ್ಗಳನ್ನು ಬಂದ್ ಮಾಡಲಾಯಿತು.
ಸಿದ್ದರಾಮಯ್ಯ ಬೆಂಗಳೂರು ರೌಂಡ್ಸ್, ಗುಂಡಿ ಮುಚ್ಚಲು 15 ದಿನದ ಗಡುವು
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಆರ್.ಆಶೋಕ್, 'ಬೆಂಗಳೂರಿನ ಜನರಿಗೆ ಗುಂಡಿ ಭಾಗ್ಯ. ಕಾಂಗ್ರೆಸ್ಗೆ ಹುಂಡಿ ಭಾಗ್ಯ' ಎಂದು ಸರ್ಕಾರವನ್ನು ವ್ಯಂಗ್ಯವಾಡಿದರು. 'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿದ್ರೆಯಿಂದ ಎಚ್ಚೆತ್ತು, ನಗರದ ರಸ್ತೆಗಳ ಗುಂಡಿಗಳನ್ನು ಮುಚ್ಚಲು ಸೂಚನೆ ನೀಡಬೇಕು' ಎಂದು ಒತ್ತಾಯಿಸಿದರು.
ಬಿಜೆಪಿ ನಾಯಕರು ನೂರಾರು ಕಾರ್ಯಕರ್ತರ ಜೊತೆ ಬಿಬಿಎಂಪಿ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಲು ಬಂದಾಗ ಪೊಲೀಸರು ಗೇಟ್ ಬಳಿ ಅವರನ್ನು ತಡೆದರು. ಗೇಟ್ ಮುಂದೆ ಕುಳಿತು ಪ್ರತಿಭಟನೆ ನಡೆಸುತ್ತಿದ್ದ ನಾಯಕರು, ಕಾರ್ಯಕರ್ತರನ್ನು ವಶಕ್ಕೆ ಪಡೆದು ಕಬ್ಬನ್ ಪಾರ್ಕ್ ಠಾಣೆಗೆ ಕರೆದುಕೊಂಡು ಹೋಗಲಾಯಿತು.