ಭ್ರಷ್ಟಾಚಾರ ಬಯಲಿಗೆಳೆದು ಪರಪ್ಪನ ಕೈದಿಗಳೇ ಬರೆದ ಪತ್ರ
ಬೆಂಗಳೂರು, ಡಿಸೆಂಬರ್ 25: ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಭ್ರಷ್ಟಾಚಾರ ಮತ್ತು ಅನೈತಿಕ ಚಟವಟಿಕೆಗಳು ನಡೆಯುತ್ತಿರುವ ವಿಷಯವಾಗಿ ಕೈದಿಗಳು ಬರೆದರು ಎನ್ನಲಾದ ಪತ್ರವೊಂದು ಬಯಲಾಗಿದೆ.
ಜನವರಿ 26 ರಂದು ಸನ್ನಡತೆ ಆಧಾರ ಮೇಲೆ ಕೈದಿಗಳನ್ನು ಬಿಡುಗಡೆ ಮಾಡುವ ವಿಚಾರವಾಗಿ ಭ್ರಷ್ಟಾಚಾರ ನಡೆದಿದೆ ಎಂದು ಪ್ರತದಲ್ಲಿ ವಿವರಿಸಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಸನ್ನಡತೆ ಆಧಾರದ ಮೇಲೆ ಅನೇಕ ಕೈದಿಗಳನ್ನು ಬಿಡುಗಡೆ ಮಾಡುವ ವಿಷಯ ಕುರಿತು ಅಧಿಕಾರಿಗಳು ಮಾಡಿರುವ ಪಟ್ಟಿಯಲ್ಲಿ ನಟೋರಿಯಸ್, ರೌಡಿ ಶೀಟರ್ ಗಳನ್ನು ಸೇರಿಸಿದ್ದು, ಇದಕ್ಕೆ ಗಣ್ಯರ ಮತ್ತು ಹಣದ ಪ್ರಭಾವವಿದೆ ಎಂಬ ವಿಷಯ ಬೆಳಕಿಗೆ ಬಂದಿದೆ.[ಪರಪ್ಪನ ಅಗ್ರಹಾರ : ತರಕಾರಿ ವಾಹನದಲ್ಲಿ ಕೈದಿ ಪರಾರಿ!]
ಜನವರಿ 26ರಂದು ಬಿಡುಗಡೆ ಮಾಡಲು 78 ಕೈದಿಗಳ ಹೆಸರನ್ನು ನಮೂದಿಸಲಾಗಿತ್ತು. ಇವರಲ್ಲಿ ಮೂವರು ನಟೋರಿಯಸ್ ಗಳಾಗಿರುವುದು ಅಲ್ಲದೆ ಜೈಲಿನಲ್ಲಿ ಗಾಂಜಾ ಚಟುವಟಿಕೆ ನಡೆಸುತ್ತಿದ್ದರು ಎನ್ನಲಾಗಿದೆ, ಇನ್ನು 33 ಜನರು ಹಣ ಮತ್ತು ಗಣ್ಯರ ಪ್ರಭಾವದ ಮೂಲಕ ಸನ್ನಡತೆ ಪಟ್ಟಿಯಲ್ಲಿ ಸೇರಿದ್ದಾರೆ ಎಂದು ಪತ್ರದಲ್ಲಿದೆ.
ಈ ಕುರಿತು ಜೈಲಿನ ಸಿಸಿಟಿಟಿ ಚಿತ್ರ ತುಣುಕುಗಳನ್ನು ನೋಡಿದರೆ ಅರೋಪಿಗಳನ್ನು ಬಂಧಿಸಬಹುದು ಎಂದು ಪತ್ರದಲ್ಲಿ ಬರೆಯಲಾಗಿದೆ. ಆದರೆ ಪತ್ರವನ್ನು ಬಿಡುಗಡೆಯಾಗಲಿರುವ ಕೈದಿಗಳು ಬರೆದರೋ, ಅಥವಾ ಯಾರು ಬರೆದರೂ ಎಂಬುದು ತಿಳಿದು ಬಂದಿಲ್ಲ ಆದರೆ ಪರಪ್ಪನ ಅಗ್ರಹಾರದ ಪೊಲೀಸರಿಗೆ ಈ ಘಟನೆ ತೀವ್ರ ತಲೆನೋವಾಗಿ ಪರಿಣಮಿಸಿದೆ.
ಅಲ್ಲದೆ ಈ ಪತ್ರ ರಾಜ್ಯಪಾಲ ವಜುಬಾಯಿವಾಲ, ಗೃಹಸಚಿವ, ಹೈಕೋರ್ಟ್ ಮತ್ತು ಇನ್ನಿತರ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ತಲುಪುವ ಸಾಧ್ಯತೆಯಿದೆ.