ಗೌರಿ ಲಂಕೇಶ್ ಹತ್ಯೆ ಮಾಡಿದ ಆಂಧ್ರ ಮೂಲದ ಸುಪಾರಿ ಕಿಲ್ಲರ್ ಬಂಧನ?
ಬೆಂಗಳೂರು, ಸೆಪ್ಟೆಂಬರ್ 11: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (ಎಸ್ಐಟಿ), ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಶಂಕಿತನೊಬ್ಬನನ್ನು ಬಂಧಿಸಿ ವಿಚಾರಣೆಗೊಳಪಡಿಸಿದೆ ಎಂದು ದೈನಿಕವೊಂದು ವರದಿ ಮಾಡಿದೆ.
ಗೌರಿ ಹತ್ಯೆ ಹಿಂದೆ ಸಂಘಪರಿವಾರ ಇದೆ ಎಂದಿದ್ದ ಗುಹಾಗೆ ಬಿಜೆಪಿ ನೋಟಿಸ್
ಪೊಲೀಸ್ ಮೂಲಗಳು ನೀಡಿದ ಮಾಹಿತಿಯೆಂದು ಹೇಳಲಾಗಿರುವ ಈ ವರದಿಯಲ್ಲಿ, ಎಸ್ಐಟಿ ತಂಡವು ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದಲ್ಲಿ ಒಬ್ಬ ಸುಪಾರಿ ಹಂತಕನನ್ನು ಹಿಡಿದು ತಂದಿದೆ ಎಂದು ಹೇಳಲಾಗಿದೆ. ಗುಪ್ತ ಸ್ಥಳದಲ್ಲಿ ಆತನ ವಿಚಾರಣೆ ನಡೆಸಲಾಗುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಆಂಧ್ರಪ್ರದೇಶದಿಂದ ವ್ಯಕ್ತಿಯೊಬ್ಬನನ್ನು ಬಂಧಿಸಿ ತಂದಿರುವುದರ ಹಿಂದಿನ ಕಾರಣವನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ಗೌರಿ ಲಂಕೇಶ್ ಅವರ ಹತ್ಯೆಯಾದ ಸೆಪ್ಟೆಂಬರ್ 5ರಂದು ಆತನ ಮೊಬೈಲ್ ಸಂಖ್ಯೆ ಕಾರ್ಯ ನಿರ್ವಹಿಸಿದ್ದೇ ಆತನನ್ನು ಪತ್ತೆ ಹಚ್ಚಿ ಬಂಧಿಸಲು ಮೂಲ ಕಾರಣ ಎಂದು ಹೇಳಲಾಗಿದೆ.
ಗೌರಿ ಹತ್ಯೆಗೆ ಅನ್ಯ ರಾಜ್ಯಗಳಿಂದ ಹಂತಕರು ಬಂದಿರಬಹುದಾದ ಶಂಕೆಯೊಂದಿಗೆ ಗೌರಿ ಹತ್ಯೆಯಾದ ಸಮಯದಲ್ಲಿ ಅವರ ಮನೆ ಸುತ್ತಿನ ಟವರ್ ಗಳಲ್ಲಿ ದಾಖಲಾಗಿರಬಹುದಾದ ಹೊರ ರಾಜ್ಯಗಳ ಮೊಬೈಲ್ ಸಂಖ್ಯೆಗಳ ಸಾಧ್ಯತೆಗಳನ್ನು ಪರಿಶೀಲಿಸಿದಾಗ, ಈತನ ಸಂಖ್ಯೆ ಪದೇ ಪದೇ ರಾಜರಾಜೇಶ್ವರಿ ನಗರದ ಮೊಬೈಲ್ ಟವರ್ ಒಂದಕ್ಕೆ ಸಂಪರ್ಕ ಹೊಂದಿದ್ದು ಪತ್ತೆಯಾಗಿದೆ ಎಂದು ಹೇಳಲಾಗಿದೆ.
ಗೌರಿ ಹತ್ಯೆ ತನಿಖಾ ತಂಡದ ಅಧಿಕಾರಿಗಳ ಸಂಖ್ಯೆ ಹೆಚ್ಚಳ
ಈತನ ಮೊಬೈಲ್ ಪದೇ ಪದೇ ಆನ್ ಮತ್ತು ಆಫ್ ಆಗಿರುವುದೂ ತನಿಖೆಯಿಂದ ಪತ್ತೆಯಾಗಿದ್ದು, ಗೌರಿ ಹತ್ಯೆ ನಡೆದ ನಂತರ ಈ ಮೊಬೈಲ್ ಆ ಪ್ರದೇಶದಿಂದ ಹಂತಹಂತವಾಗಿ ಹೊರಟು ಹೋಗಿರುವುದೂ ದಾಖಲಾಗಿದೆ ಎಂದು ಹೇಳಲಾಗಿದೆ. ಇದರ ಜಾಡನ್ನು ಹಿಡಿದು ಹೊರಟ ಪೊಲೀಸರು ಹೈದರಾಬಾದ್ ನಲ್ಲಿ ಆ ವ್ಯಕ್ತಿಯನ್ನು ಬಂಧಿಸಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಆದರೆ, ಈ ವರದಿಯ ಸತ್ಯಾಸತ್ಯತೆಯನ್ನು ಪೊಲೀಸರು ಸ್ಪಷ್ಟಪಡಿಸಬೇಕಿದೆ.